ದೀಪ ಪ್ರಜ್ವಲನ-ಅವರವರ ಭಾವಕ್ಕೆ
ಎಪ್ರಿಲ್ 5ರ ರಾತ್ರಿ 9ಗಂಟೆಗೆ ದೇಶದ ನಾಗರಿಕರು ಪ್ರಧಾನಿ ನರೇಂದ್ರ ಮೋದಿಯ ಕರೆಗೆ ಸ್ಪಂದಿಸಿ, ರಾಜಕೀಯ ಪಕ್ಷ, ಜಾತಿ, ಧರ್ಮ ಸಹಿತ ಎಲ್ಲ ಭೇದವನ್ನು ಬದಿಗಿರಿಸಿ; ತಮ್ಮ ತಮ್ಮ ಮನೆಯ ಹೊರಗಡೆ ದೀಪವನ್ನು ಬೆಳಗುವ ಮೂಲಕ ರಾಷ್ಟ್ರ ಸಂಕಷ್ಟದಲ್ಲಿರುವ ಸಂದರ್ಭಗಳಲ್ಲಿ ನಾವು ಏಕತೆಯಿಂದ ದೇಶದ ಸರಕಾರದ ಜೊತೆಗಿರುತ್ತೇವೆ ಎಂಬ ಸಂದೇಶ ಸಾರಿದರು. ಆ ಮೂಲಕ ಹೆಮ್ಮಾರಿ ಕೊರೋನಾ ವಿರುದ್ಧದ ಹೋರಾಟಕ್ಕೆ ಸರಕಾರಕ್ಕೆ ಸಾಥ್ ನೀಡಿದರು. ಇನ್ನು ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯ ಅಂದಭಕ್ತರು ಈ ಅವಕಾಶವನ್ನು ದುರುಪಯೋಗ ಪಡಿಸಿಕೊಂಡು ಅತ್ಯುತ್ಸಾಹ ತೋರಿ; ಪ್ರಧಾನಿಯ ಕಳಕಳಿಯ ಮನವಿಯನ್ನೂ ಧಿಕ್ಕರಿಸಿ, ಪಟಾಕಿ ಸಿಡಿಸಿ ಸಂಭ್ರಮಾಚರಿಸುವ ಮೂಲಕ ಮೂಲ ಉದ್ಧೇಶಕ್ಕೇ ಕೊಡಲಿ ಏಟು ಹಾಕಿದರು. ಮತ್ತೊಂದು ವರ್ಗ ಇದೆ. ಸಂಖ್ಯೆ ನಗಣ್ಯವಾದರೂ ಅಪಾಯಕಾರಿ ವರ್ಗ. ರಾಷ್ಟ್ರ ಕೊರೋನಾ ಭೀತಿಯ ಸಂಕಷ್ಟವನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಪ್ರಧಾನಿಗಳ ಮನವಿಯನ್ನು ಧಿಕ್ಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಕುಹಕದ ಸಂದೇಶ ಹರಡುತ್ತಾ; ದೀಪ ಉರಿಸಬೇಕಾದ ಸಂದರ್ಭ ಪ್ರಕ್ರಿಯೆಯಿಂದ ದೂರ ಉಳಿದು, ವಿರೋಧಕ್ಕಾಗಿ ವಿರೋಧ ಮಾಡುತ್ತಾ, ರಾಷ್ಟ್ರದ ಏಕತೆ-ಸಮಗ್ರತೆಗೆ ಸವಾಲು ಹಾಕುವ ಮಂದಿ. ಒಟ್ಟಿನಲ್ಲಿ ದೇಶದಲ್ಲಿ ಬಹುಸಂಖ್ಯಾತ ರಾಷ್ಟ್ರಭಕ್ತರ (ಮೋದಿ ಭಕ್ತರ ಅಲ್ಲ) ಕಾಯಾ-ವಾಚಾ-ಮನಸಾ ಭಾಗವಹಿಸುವಿಕೆಯಿಂದ ಪ್ರಧಾನಿ ನರೇಂದ್ರ ಮೋದಿಯ ಈ ಕರೆಗೆ ಅದ್ಭುತ ಯಶಸ್ಸು ದೊರಕ್ಕಿದ್ದಂತೂ ಸತ್ಯ. ಮನೆಯ ವಿದ್ಯುದ್ದೀಪ ಆರಿಸಿ ಹಣತೆ ಅಥವಾ ಕ್ಯಾಂಡಲ್ ಬೆಳಗಿದ್ದರಿಂದ ಕೊರೋನಾ ವೈರಸ್ ಹರಡುವಿಕೆಗೆ ಅದೆಂತು ಕಡಿವಾಣ ಬೀಳುತ್ತದೆ; ಕೊರೋನಾ ಹೆಮ್ಮಾರಿಯ ವಿರುದ್ಧ ಹೋರಾಡಲು ಭಾರತೀಯರ ಆತ್ಮಬಲ ಅದೆಂತು ವೃದ್ಧಿಯಾಗುತ್ತದೆ ಎಂಬುದಕ್ಕೆ ಕಾಲವೇ ಉತ್ತರ ನೀಡಬೇಕಷ್ಟೇ.










