ಲಾಯಿಲ: ಕೋವಿಡ್-19 ರೋಗವನ್ನು ತಡೆಗಟ್ಟುವಲ್ಲಿ ಭಾರತ ಸರಕಾರ ಕೈಗೊಂಡ ಲಾಕ್ಡೌನ್ ನಿಂದ ಸಂಕಷ್ಟಕ್ಕೀಡಾದ ಕುಟುಂಬಗಳಿಗೆ ಅಗತ್ಯ ವಸ್ತುಗಳನ್ನು ಪೂರೈಸುವ ನಿಟ್ಟಿನಲ್ಲಿ ಕಪುಚಿನ್ ಕೃಷಿಕ ಸೇವಾ ಕೇಂದ್ರ ವಿಮುಕ್ತಿ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಚೈಲ್ಡ್ ಪಂಡ್ ಇಂಡಿಯಾ ಸಹಭಾಗಿತ್ವದೊಂದಿಗೆ ತಾಲೂಕಿನ ಅರ್ಹ 600 ಕುಟುಂಬಗಳಿಗೆ ಆಹಾರ ಕಿಟ್, 200 ಆರೋಗ್ಯ/ಸ್ವಚ್ಚತೆ ಕಿಟ್ ಹಾಗೂ 200 ಶಿಕ್ಷಣ ಕಿಟ್ ಹೀಗೆ ಒಟ್ಟು ಹೀಗೆ 5 ಲಕ್ಷ ರೂ. ಮೌಲ್ಯದ ಸಾಮಾಗ್ರಿಗಳನ್ನು ವಿತರಿಸುವ ಕಾರ್ಯಕ್ಕೆ ಏ.20 ರಂದು ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸುವ ಆತುರದಲ್ಲಿ ವೈಯಕ್ತಿಕ ಅಂತರ ಕಾಪಾಡಬೇಕಾದ್ದು ಕೊರೋನಾ ಸೋಂಕಿನ ವಿರುದ್ಧ ಹೋರಾಟದ ಪ್ರಮುಖ ಜವಾಬ್ದಾರಿ ಎಂಬ ಅರಿವಿದ್ದರೂ, ವೈಯಕ್ತಿಕ ಅಂತರ ಕಾಪಾಡದಿರುವುದು ಕಂಡು ಬಂತು.
ಲಾಯಿಲ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಉದ್ಘಾಟನೆಗೊಂಡ ಕಾರ್ಯಕ್ರಮದಲ್ಲಿ ಪಂಚಾಯತ್ ವ್ಯಾಪ್ತಿಯ ಆಯ್ದ 40 ಕುಟುಂಬಗಳಿಗೆ ಈ ಕಿಟ್ಟ್ಗಳನ್ನು ಹಸ್ತಾಂತರಿಸುವ ಮೂಲಕ ಚಾಲನೆ ನೀಡಲಾಯಿತು.
ಸಂಸ್ಥೆಯ ನಿರ್ದೇಶಕ ವಂ. ವಿನೋದ್ ಮಸ್ಕರೇನ್ಹಸ್ ಅವರು ಉದ್ಘಾಟನೆಗೊಳಿಸಿದರು. ಈ ಸಂದರ್ಭ ಸಂಸ್ಥೆಯ ಚೈಲ್ಟ್ಫಂಡ್ ಯೋಜನಾ ಪ್ರಬಂಧಕ ವಂ. ರೋಹನ್ ಲೋಬೋ, ಲಾಯಿಲ ಗ್ರಾಮ ಪಂಚಾಯತ್ ಅಧ್ಯಕ್ಷೆ ವೀಣಾ ರಾವ್, ಉಪಾಧ್ಯಕ್ಷ ಗಿರೀಶ್ ಡೋಂಗ್ರೆ, ತಾಲೂಕು ಪಂಚಾಯತ್ ಸದಸ್ಯ ಸುಧಾಕರ್ ಬಿ. ಎಲ್., ಪಂಚಾಯತ್ ಅಭಿವೃದ್ಧಿ ಅಧಿಕಾರಿ ವೆಂಕಟ ಕೃಷ್ಣ, ಪಂಚಾಯತ್ ಕಾರ್ಯದರ್ಶಿ ರೇಷ್ಮಾ ಗಂಜಿಗಟ್ಟಿ ಹಾಗೂ ಗ್ರಾ.ಪಂ ಸದಸ್ಯರು ಹಾಗೂ ವಿಮುಕ್ತಿ ಸಿಬ್ಬಂದಿಗಳು ಉಪಸ್ಥಿತರಿದ್ದರು.








