ಎಲ್ಲರೂ ತಿಳಿದಿರುವಂತೆ ಬೆಳ್ತಂಗಡಿಯ ಮಾಜಿ ಶಾಸಕ ವಸಂತ ಬಂಗೇರರು ಇಂದಿನ ಸಂದಿಗ್ಧ ಸ್ಥಿತಿಯಲ್ಲಿಯೂ ತಾಲೂಕಿನ ಗ್ರಾಮೀಣ ಪ್ರದೇಶಗಳಿಗೆ ಸಂಚರಿಸಿ, ಬಡವರಿಗೆ ಹಾಗೂ ಅಶಕ್ತರಿಗೆ ಸಾಂತ್ವನ-ಸಹಾಯ ನೀಡುತ್ತಿದ್ದಾರೆ. ತನಗಾದ ವಯಸ್ಸನ್ನೂ ಲೆಕ್ಕಿಸದೇ, ಕೊರೋನಾ ಸೋಂಕು ಹರಡದಂತೆ ಸಾಕಷ್ಟು ಮುಂಜಾಗ್ರತೆ ವಹಿಸಿ, ಮಾಸ್ಕ್ ಧರಿಸಿ ವೈಯಕ್ತಿಕ ಅಂತರದ ಬಗ್ಗೆಯೂ ಎಚ್ಚರಿಕೆ ವಹಿಸಿ, ತಾಲೂಕಿನ ವಿವಿದೆಡೆ ಸಂಚರಿಸಿ, ಬಡವರ-ಅಶಕ್ತರ ಯೋಗಕ್ಷೇಮ ವಿಚಾರಿಸುತ್ತಿರುವ ಮಾಜಿ ಶಾಸಕ ವಸಂತ ಬಂಗೇರ ಎಪ್ರಿಲ್ 26ರಂದು ಗರ್ಡಾಡಿಯ ಅಶಕ್ತ ಕುಟುಂಬದ ಮನೆಯೊಂದಕ್ಕೆ ಭೇಟಿ ನೀಡಿ ಮನೆಯೊಡೆಯನ ಆರೋಗ್ಯ ವಿಚಾರಿಸಿದರು.
ಆದರೆ ಈ ಸಂದರ್ಭದಲ್ಲಿ ಮಾಜಿ ಶಾಸಕ ವಸಂತ ಬಂಗೇರರೊಡನಿದ್ದ ಅವರ ಅಭಿಮಾನಿಗಳಿಗೆ ಕೊರೋನಾ ಸೋಂಕಿನ ಭೀತಿಯಿದ್ದಂತಿರಲಿಲ್ಲ. ಮಾತ್ರವಲ್ಲ, ತಾವು ತೋರುವ ಅಸಡ್ಡೆಯಿಂದ ತಮ್ಮ ನಾಯಕರಾದ ಮಾಜಿ ಶಾಸಕ ವಸಂತ ಬಂಗೇರರಿಗೆ ಸಮಸ್ಯೆಯಾದೀತೆಂಬ ಚಿಂತನೆಯೂ ಇದ್ದಂತಿರಲಿಲ್ಲ. ಕೊರೋನಾ ಸೋಂಕು ಹರಡದಂತೆ ಹಾಗೂ ತಮಗೆ ಬರದಂತೆ ಮುಂಜಾಗ್ರತೆಯಾಗಿ ಧರಿಸಬೇಕಾದ ಮಾಸ್ಕ್ ಇವರಲ್ಲಿರಲಿಲ್ಲ. ಮಾಸ್ಕ್ ಧರಿಸದೇ ಮಾಜಿ ಶಾಸಕ ವಸಂತ ಬಂಗೇರರ ಹತ್ತಿರದಲ್ಲೇ ಕುಳಿತು ಮಾತನಾಡುತ್ತಿರುವ ಇಂತಹ ಅಭಿಮಾನಿಗಳಿಗೆ ಏನೆನ್ನಬೇಕೋ ತಿಳಿಯುತ್ತಿಲ್ಲ. ಮಾಸ್ಕ್ ಧರಿಸುವುದರ ಜೊತೆಗೆ ವೈಯಕ್ತಿಕ ಅಂತರ ಕಾಪಾಡುವ ಮೂಲಕ ಕೊರೋನಾ ಸೋಂಕಿನ ಅಪಾಯದಿಂದ ರಕ್ಷಿಸಿಕೊಳ್ಳಬಹುದು ಎಂಬ ತಿಳುವಳಿಕೆ ಇವರಿಗೆ ಇಲ್ಲವೋ…ಅಥವಾ ವಸಂತ ಬಂಗೇರರ ಮೇಲಿನ ಅತಿಯಾದ ಅಭಿಮಾನ ಇವರನ್ನು ಮೈಮರೆಯುವಂತೆ ಮಾಡಿತೋ ಗೊತ್ತಿಲ್ಲ. ಆದರೆ ಇಂತಹ ಅಭಿಮಾನಿಗಳ ಈ ರೀತಿಯ ಹುಚ್ಚು ನಡವಳಿಕೆಗಳಿಂದ ತಾಲೂಕಿನ ಹಿರಿಯ ನಾಯಕ-ಜನಪರ ಕಾಳಜಿಯ ನೇತಾರ, ಮಾಜಿ ಶಾಸಕ ವಸಂತ ಬಂಗೇರರಿಗೆ ಅಪಾಯವಾಗಬಹುದು. ಅಭಿಮಾನಿಗಳು ಇನ್ನಾದರೂ ವಸಂತ ಬಂಗೇರರ ಬಳಿ ಹೋಗುವಾಗ ಅಥವಾ ಜೊತೆಗೆ ಹೋಗುವಾಗ ಮಾಸ್ಕ್ ಧರಿಸಿ, ವೈಯಕ್ತಿಕ ಅಂತರ ಕಾಪಾಡುವ ಮೂಲಕ ತಾವು ಸುರಕ್ಷಿತರಾಗುವುದರ ಜೊತೆಗೆ ವಸಂತ ಬಂಗೇರರ ಬಗ್ಗೆಯೂ ಕಾಳಜಿ ವಹಿಸಿ, ಹಿತ ಕಾಪಾಡುವಂತಾಗಲಿ.








