ಇನ್ನೇನು ನಾಳೆ ಬೆಳಗ್ಗೆ ಗಂಟೆ 9-00ಕ್ಕೆ ಸುಮಾರು 40ದಿನಗಳ ಬಳಿಕ ರಾಜ್ಯದಲ್ಲಿ ಮದ್ಯದಂಗಡಿಗಳು ಬಾಗಿಲು ತೆರೆಯಲಿವೆ. ಜಹುತೇಕ ಎಲ್ಲ ವೈನ್ ಶಾಪುಗಳಲ್ಲಿ ಸರಕಾರ ಸೂಚಿಸಿದ ಮಾರ್ಗಸೂಚಿಯನ್ನು ಪಾಲಿಸಿ, ಮದ್ಯ ಮಾರಾಟಕ್ಕೆ ಸಕಲ ಸಿದ್ಧತೆ ಮಾಡಲಾಗಿದೆ.
ರಾಜ್ಯದ ಕೆಲವೆಡೆ ವೈನ್ ಸ್ಟೋರ್ ಗಳ ಮುಂದೆ ಈಡುಗಾಯಿ ಒಡೆದು, ಬಾಗಿಲಿಗೆ ಆರತಿ ಎತ್ತಿ ಮದ್ಯಪ್ರಿಯರು ಸಂಭ್ರಮಿಸಿದ ಬಗ್ಗೆ ವರದಿಗಳಾಗಿವೆ. ಆದರೆ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯ ಸ್ವಸ್ತಿಕ್ ವೈನ್ಸ್ ನಲ್ಲಿ ಮದ್ಯಪ್ರಿಯರು ವಿಭಿನ್ನ ರೀತಿಯಿಂದ ಸುದ್ದಿ ಮಾಡಿದ್ದಾರೆ. ಕೆಲ ವರ್ಷಗಳ ಹಿಂದೆ ಬೆಂಗಳೂರಿನ ಥಿಯೇಟರ್ ಗಳಲ್ಲಿ ವರನಟ ಡಾ ರಾಜ್ ಕುಮಾರರ ಸಿನಿಮಾದ ಟಿಕೇಟಿಗಾಗಿ ಅವರ ಅಭಿಮಾನಿಗಳು ರಾತ್ರಿಯಿಂದ ಥಿಯೇಟರ್ ಗೇಟ್ ಕಾಯುತ್ತಿದ್ದರು. ಅದು ಹಳೇ ಕಥೆ. ಇದೀಗ ಗುರುವಾಯನಕೆರೆಯ ಸ್ವಸ್ತಿಕ್ ವೈನ್ಸ್ ನಲ್ಲಿ ಮದ್ಯಪ್ರಿಯರು ರಾತ್ರಿ ಇಡೀ ಸರದಿ ಸಾಲಿನಲ್ಲಿ ನಿಂತು ಮದ್ಯದ ನಶೆ ಏರಿಸಿಕೊಳ್ಳಲು ಕಣ್ಣಿಗೆ ಎಣ್ಣೆ ಬಿಟ್ಟು ಕಾಯುತ್ತಿದ್ದಾರೆ ಎಂದರೆ ಇವರೆಂತಾ ಕುಡಿತದ ದಾಸರು ಎಂದು ಯಾರೂ ಊಹಿಸಬಹುದು. ಒಂದು ಸಮಾಧಾನದ ಅಂಶ ಎಂದರೆ ಸಧ್ಯಕ್ಕೆ ಈ ಕುಡುಕರೆಲ್ಲರೂ ಮಾಸ್ಕ್ ಧರಿಸಿ ವೈಯಕ್ತಿಕ ಅಂತರ ಕಾಪಾಡಿಕೊಂಡು ನಿಂತಿರುವುದು. ಈ ದೃಶ್ಯ ಮದ್ಯಪ್ರಿಯರಲ್ಲೂ ಕೊರೋನಾ ಸೋಂಕಿನ ಬಗ್ಗೆ ಭಯವಿದೆ; ಅವರೂ ಮುಂಜಾಗ್ರತೆ ವಹಿಸಲಿದ್ದಾರೆ ಎಂಬ ಸಂದೇಶ ಸಾರುವಂತಿದೆ.








