


ಕೊರೋನಾ ಸೋಂಕಿನ ವಿರುದ್ಧ ಮುಂಜಾಗ್ರತಾ ಕ್ರಮವಾಗಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು 40ದಿನಗಳ ಕಾಲ ದೇಶದಲ್ಲಿ ಲಾಕ್ ಡೌನಿನಂತಹ ಕಠಿಣ ನಿಲುವು ತಳೆದಾಗ; ಸಮಾಜಮುಖೀ ಸಂಘಟನೆಗಳು, ಜನಪ್ರತಿನಿಧಿಗಳು, ರಾಜಕೀಯ ಧುರೀಣರು ಬಡವರ ಹೊಟ್ಟೆಪಾಡಿನ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಸಾಕಷ್ಟು ಕಡೆಗಳಲ್ಲಿ ಬಡ ಕುಟುಂಬಿಕರಿಗೆ ಉಚಿತವಾಗಿ ಆಹಾರಧಾನ್ಯದ ಕಿಟ್ ಗಳನ್ನೂ ವಿತರಿಸಿದ್ದರು. ಬಿಪಿಎಲ್ ಪಡಿತರ ಚೀಟಿ ಹೊಂದಿದ ಈ ಬಡವರಿಗೆ ರಾಜ್ಯ ಸರಕಾರವೂ ಅನ್ನಭಾಗ್ಯ ಯೋಜನೆಯ ಅಕ್ಕಿ ಸಹಿತ ಇತರ ದವಸಧಾನ್ಯಗಳನ್ನು ಉಚಿತವಾಗಿ ನೀಡಿತ್ತು.
ಆದರೆ ಇಂದು ಮೇ 4ರಂದು ನಮ್ಮ ನಿಮ್ಮ ಊರುಗಳ ವೈನ್ಸ್ ಸ್ಟೋರುಗಳ ಮುಂದೆ ಆಹಾರದ ಕಿಟ್ ಪಡೆದ ಬಹುತೇಕ ಇದೇ ಬಡವರು ಮದ್ಯಕ್ಕಾಗಿ ಗಂಟೆಗಟ್ಟಲೆ ಕ್ಯೂ ನಿಂತಿರುವುದನ್ನು ನೋಡಿದಾಗ, ನಿಜವಾದ ಬಡವ ಯಾರು….ಲಾಕ್ ಡೌನ್ ಸಂದರ್ಭ ಆಹಾರದ ಕಿಟ್ ನೀಡಿದವರಾ…ಅಥವಾ ಆಹಾರದ ಕಿಟ್ ಪಡಕೊಂಡವರಾ… ಎಂಬ ಪ್ರಶ್ನೆ ಊರಿನ ಮಧ್ಯಮ ಹಾಗೂ ಕೆಳಮಧ್ಯಮವರ್ಗದ ಕುಟುಂಬಿಕರಲ್ಲಿ ಮೂಡುವಂತಾಗಿದೆ. ನಿಜವಾದ ಬಡವರು ಲಾಕ್ ಡೌನ್ ಸಂದರ್ಭ ಆಹಾರದ ಕಿಟ್ ನೀಡಿದವರು. ಇವರಿಗಿರುವುದು ಆರ್ಥಿಕ ಬಡತನವಲ್ಲ. ಪ್ರಖ್ಯಾತಿಯ-ಪ್ರಚಾರದ ಬಡತನ. ಸದಾ ಸುದ್ದಿಯಲ್ಲಿರಲು ಲಾಕ್ ಡೌನಿನ ಸಂದರ್ಭ ಜನಸಾಮಾನ್ಯರ ಅನುಕಂಪ ಗಿಟ್ಟಿಸಲು ಆಹಾರ ಕಿಟ್ಟುಗಳನ್ನು ಅಪ್ರಾಪ್ತರಿಗೆ ನೀಡಿದ್ದಾರಾ ಎಂಬ ಅನುಮಾನ ಇಂದು ವೈನ್ ಸ್ಟೋರುಗಳ ಮುಂದೆ ಮದ್ಯಕ್ಕಾಗಿ ನಿಂತ ಜನಸಮೂಹವನ್ನು ಕಂಡ ಯಾರಿಗೂ ಮೂಡದಿರದು. ಒಟ್ಟಿನಲ್ಲಿ ವಿವಿಧ ಮೂಲಗಳಿಂದ ಆಹಾರದ ಕಿಟ್ ಪಡೆದ ಬಹುತೇಕರು ಇಂದು ಹಣ ಹಣ ನೀಡಿ ಮದ್ಯ ಖರೀದಿಸಲು ವೈನ್ ಸ್ಟೋರಿನ ಮುಂದೆ ನಿಲ್ಲುವ ಮೂಲಕ ಆಹಾರದ ಕಿಟ್ ನೀಡಿದವರಿಗೆ ಕಪಾಲಮೋಕ್ಷ ಮಾಡಿದ್ದಾರೆ. ಮದ್ಯಪ್ರಿಯರದ್ದು ಒಂದೇ ಮಾತು; ನಮಗೆ ಊಟಕ್ಕೆ ಅಕ್ಕಿ ಸರಕಾರದ ಅನ್ನಭಾಗ್ಯ ಯೋಜನೆಯಲ್ಲಿದೆ. ಆದರೆ ಎಣ್ಣೆ ಬೇಕು ಎಣ್ಣೆ.







