ಮಾಸ್ಕ್ ಧರಿಸಿ-ವೈಯಕ್ತಿಕ ಅಂತರ ಕಾಪಾಡಿದ ಮಾದರಿ ಕಾರ್ಯಕ್ರಮ
ಗೇರುಕಟ್ಟೆ: ಇಲ್ಲಿನ ಕಳಿಯ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ವತಿಯಿಂದ ಲಾಕ್ ಡೌನ್ ನಿಂದ ಸಂಕಷ್ಟಕ್ಕೊಳಗಾದ ಸಂಘದ ಸದಸ್ಯರಿಗೆ ಗೇರುಕಟ್ಟೆ ಕಳಿಯ ಸಹಕಾರಿ ಸಭಾ ಭವನದಲ್ಲಿ ಉಚಿತ ಮೈಲುತುತ್ತು ವಿತರಣಾ ಕಾರ್ಯಕ್ರಮ ಮೇ 9ರಂದು ನಡೆಯಿತು.
ಕಳಿಯ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ವಸಂತ ಮಜಲು ಮಾತನಾಡಿ, ಕೃಷಿಕರು ಪ್ರತಿ ಹಂತದಲ್ಲೂ ಬೆಳೆಗೆ ಸೂಕ್ತ ಬೆಲೆ ಸಿಗದೆ ಸಂಕಷ್ಟ ಅನುಭವಿಸುತ್ತಾರೆ. ಈ ಸಮಯದಲ್ಲಿ ಕೋವಿಡ್ -19 ನಿಂದ ಮತ್ತಷ್ಟು ಹಾನಿ ಅನುಭವಿಸುವ ಸಾಧ್ಯತೆಯಿರುವುದರಿಂದ ಸಂಘದ ವತಿಯಿಂದ ಕೃಷಿಕರ ಯೋಗ್ಯ ನೆರವು ಒದಗಿಸಿದ್ದೇವೆ. 2 ಎಕರೆಯಿಂದ ಮೇಲ್ಪಟ್ಟವರಿಗೆ 3 ಕೆ.ಜಿ.; 50ಸೆಂಟ್ಸಿನಿಂದ 1ಎಕ್ರೆಯವರೆಗೆ 1ಕೆ.ಜಿ.; 25 ಸೆನ್ಸ್ ನಿಂದ 50 ಸೆನ್ಸ್ ಜಾಗ ಉಳ್ಳವರಿಗೆ ಅರ್ಧ ಕೆ.ಜಿ. ಮೈಲುತುತ್ತು ನೀಡಲಾಗುತ್ತಿದೆ. ಗ್ರಾಮದ ಒಟ್ಟು 800 ಕೃಷಿಕರಿಗೆ 15 ಕ್ವಿಂಟಾಲ್ ಮೈಲುತುತ್ತು ಉಚಿತವಾಗಿ ವಿತರಿಸಲಾಗುತ್ತಿದೆ ಎಂದರು.
ಈವೇಳೆ ಸಂಘದ ಉಪಾಧ್ಯಕ್ಷ ನಾಣ್ಯಪ್ಪ ಪೂಜಾರಿ ಕಲ್ಲಾಪು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತ್ಯಶಂಕರ್ ಕೆ.ಜಿ., ನಿರ್ದೇಶಕರಾದ ಹರಿದಾಸ್ ಪಡಂತ್ತಾಯ, ರಾಜ್ ಪ್ರಕಾಶ್ ಶೆಟ್ಟಿ, ರತ್ನಾಕರ ಪೂಜಾರಿ, ರಾಜೀವ ಗೌಡ, ದೇವಣ್ಣ ಮೂಲ್ಯ, ನೋಣಯ್ಯ, ಶಶಿಧರ ಶೆಟ್ಟಿ, ಶೇಖರ ನಾಯ್ಕ್, ಚಂದ್ರಾವತಿ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದುದ್ದಕ್ಕೂ ಎಲ್ಲರೂ ಮಾಸ್ಕ್ ಧರಿಸಿ, ವೈಯಕ್ತಿಕ ಅಂತರ ಕಾಪಾಡಿಕೊಂಡು ಕೊರೋನಾ ಸೋಂಕಿನ ವಿರುದ್ಧ ಮುಂಜಾಗ್ರತೆ ವಹಿಸಿದ್ದು ಇತರರಿಗೆ ಮಾದರಿಯಾಗಿತ್ತು.







