ತಾಲೂಕು ಬಿಲ್ಲವ ಸಂಘದಿಂದ 2,500 ಆಹಾರ ಧಾನ್ಯ ಕಿಟ್ ಗಳ ವಿತರಣಾ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ವಸಂತ ಬಂಗೇರ
ಪ್ರಪಂಚದಲ್ಲಿ ಈಗಾಗಲೇ ಲಕ್ಷಾಂತರ ಮಂದಿಯನ್ನು ಬಲಿಪಡೆದಿರುವ ಕೊರೋನಾ ಸೋಂಕಿನಿಂದ ನಮ್ಮನ್ನು ನಾವು ರಕ್ಷಿಸಿಕೊಂಡು ಇತರರನ್ನೂ ಬದುಕಲು ಬಿಡಬೇಕಾಗಿದೆ. ಅದಕ್ಕಾಗಿ ಸರಕಾರ ಹೇಳಿದ ನಿಯಮಗಳನ್ನು ಪಾಲಿಸೋಣಾ. ನಾವು ಬದುಕಿ ಇತರರಿಗೋ ಬದುಕಲು ಅವಕಾಶ ಕಲ್ಪಿಸೋಣಾ. ಮಾಸ್ಕ್ ಧಾರಣೆ ಮತ್ತು ವೈಯಕ್ತಿಕ ಅಂತರ ಕಾಪಾಡಲು ಹೆಚ್ಚು ಆಧ್ಯತೆ ನೀಡೋಣಾ. ತೀರಾ ಅಗತ್ಯ ಕೆಸಲ ಹೊರತುಪಡಿಸಿ, ಅನಗತ್ಯ ಮನೆಯಿಂದ ಹೊರಬಂದು ತಿರುಗಾಡಬೇಡಿ. ಮುಖ್ಯವಾಗಿ ಬೆಳ್ತಂಗಡಿ ತಾಲೂಕಿಗೆ ದೇವರ ಆಶೀರ್ವಾದವಿದ್ದು, ನಾವೆಲ್ಲಾ ವಿಶ್ವದ ರಕ್ಷಣೆಗಾಗಿ ದೇವರಲ್ಲಿ ಪ್ರಾರ್ಥನೆ ಮಾಡಬೇಕು ಎಂದು ಬೆಳ್ರಂಗಡಿಯ ಮಾಜಿ ಶಾಸಕ ಹಾಗೂ ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಗೌರವಾಧ್ಯಕ್ಷ ವಸಂತ ಬಂಗೇರ ಕರೆ ನೀಡಿದರು.
ಅವರು ಮೇ 13ರಂದು ಬೆಳ್ತಂಗಡಿಯ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಆಶ್ರಯದಲ್ಲಿ ತಾಲೂಕು ಮಹಿಳಾ ಬಿಲ್ಲವ ವೇದಿಕೆ ಹಾಗೂ ಯುವ ಬಿಲ್ಲವ ವೇದಿಕೆಯ ಸಹಕಾರದಲ್ಲಿ ಬೆಳ್ತಂಗಡಿಯ ಸಂಘದ ಕಛೇರಿಯ ವಠಾರದಲ್ಲಿ ನಡೆದ ಸಮುದಾಯದ ಅರ್ಹ ಕುಟುಂಬಗಳಿಗೆ ಆಹಾರ ಧಾನ್ಯದ ಕಿಟ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಅಧ್ಯಕ್ಷ ಹಾಗೂ ಕಾರ್ಯಕ್ರಮದ ಅಧ್ಯಕ್ಷ ಪದ್ಮನಾಭ ಮಾಣಿಂಜ, ಕೊರೋನಾ ಸೋಂಕು ತಡೆಗೆ ಮುಂಜಾಗ್ರತಾ ಕ್ರಮವಾಗಿ ಸರಕಾರ ಘೋಷಿಸಿದ ಲಾಕ್ ಡೌನಿನಿಂದ ಸಾಕಷ್ಟು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದೆ. ಸಂಕಷ್ಟಕ್ಕೆ ಸಿಲುಕಿದ ನಮ್ಮ ಸಮುದಾಯದ ಕುಟುಂಬಗಳಿಗೆ ಆಹಾರ ಧಾನ್ಯದ ಕಿಟ್ ನೀಡುವ ಮೂಲಕ ಅವರುಗಳ ಸಂಕಷ್ಟಕ್ಕೆ ಸ್ಪಂದಿಸಲು ಸಂಘ ತೀರ್ಮಾನಿಸಿದ್ದು; ತಾಲೂಕಿನ 2,000 ಕುಟುಂಬಗಳಿಗೆ ಆಹಾರ ಧಾನ್ಯದ ಕಿಟ್ ವಿತರಿಸಲಾಗುವುದು ಎಂದರಲ್ಲದೇ, ಇದಕ್ಕಾಗಿ ಸಂಘದ ವತಿಯಿಂದ 7.5ಲಕ್ಷ ರೂಪಾಯಿ ವಿನಿಯೋಗಿಸಲಾಗುವುದು ಎಂದರು. ಸಂಘದ ಈ ಕಾರ್ಯಕ್ಕೆ ಸಹಕಾರ ನೀಡಿದ ಬೆಳ್ತಂಗಡಿಯ ವಿನಾಯಕ ರೈಸ್ ಮಿಲ್ಲಿನ ಮಾಲೀಕರಿಗೆ ಕೃತಜ್ಞತೆ ಸಲ್ಲಿಸಲಾಯಿತು.
ವಿಧಾನ ಪರಿಷತ್ ಶಾಸಕ ಹರೀಶ್ ಕುಮಾರ್, ಮಾಜಿ ಶಾಸಕ ಪ್ರಭಾಕರ ಬಂಗೇರ, ಸಂಘದ ಮಾಜಿ ಅಧ್ಯಕ್ಷರಾದ ಭಗೀರಥ ಜಿ. ಹಾಗೂ ಪಿತಾಂಬರ ಹೆರಾಜೆ, ತಣ್ಣೀರುಪಂತಕುಮಾರ್ನ ಪಂಚಾಯತ್ ಅಧ್ಯಕ್ಷ ಜಯವಿಕ್ರಮ್, ಯುವ ಬಿಲ್ಲವ ವೇದಿಕೆಯ ಮಾಜಿ ಕಾರ್ಯದರ್ಶಿ ಶೈಲೇಶ್ ಕುಮಾರ್ ಕುರ್ತೋಡಿ, ಬೆಳ್ತಂಗಡಿ ಪಟ್ಟಣ ಸದಸ್ಯ ಜಗದೀಶ್ ಡಿ. ಸಂಘದ ಪ್ರಧಾನ ಕಾರ್ಯದರ್ಶಿ ನಾರಾಯಣ ಪೂಜಾರಿ ಬೆಳಾಲು, ಮನೋಹರ್ ಇಳಂತಿಲ ಮತ್ತಿತರರು ಉಪಸ್ಥಿತರಿದ್ದರು. ಪ್ರತಿಯೊಬ್ಬರೂ ಮಾಸ್ಕ್ ಧರಿಸಿ, ವೈಯಕ್ತಿಕ ಅಂತರ ಕಾಪಾಡಿಕೊಂಡು ಶಿಸ್ತಿನಿಂದ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಕೊರೋನಾ ಸೋಂಕು ತಡೆಗೆ ವಹಿಸಬೇಕಾದ ಮುಂಜಾಗ್ರತೆಯ ಸಂದೇಶ ಸಾರಿದರು.







