ಕಳೆದ ಫೆ. 26ರಿಂದ ಮಾಚ್೯ 2ರವರೆಗೆ ಅಭೂತಪೂರ್ವ ಬ್ರಹ್ಮಕಲಶೋತ್ಸವ ನಡೆದ ಪರಮ ಪಾವನ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತಿಲಿನಲ್ಲಿ ದೃಢಕಲಶಾಭಿಷೇಕ ಕಾರ್ಯಕ್ರಮ ಅತ್ಯಂತ ಸರಳ ರೀತಿಯಲ್ಲಿ ನಡೆಯಿತು.
ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಯಾವುದೇ ಅದ್ದೂರಿತನ ಇಲ್ಲದೆ ಸರಳವಾಗಿ ವಿಧಿ ವಿಧಾನ ನಡೆಸಲಾಯಿತು.
ಸಾಮಾಜಿಕ ಅಂತರ ಕಾಪಾಡುವ ಉದ್ದೇಶದಿಂದ ಸಾರ್ವಜನಿಕ ಭಕ್ತರ ಭಾಗವಹಿಸುವಿಕೆ ಇಲ್ಲದೆ ಕೇವಲ ಯಜಮಾನ ಕುಟುಂಬಸ್ಥರು, ಕ್ಷೇತ್ರಾಡಳಿತ ಸಮಿತಿ, ಬ್ರಹ್ಮಕಲಶೋತ್ಸವ ಸಮಿತಿ ಮತ್ತು ಕರಸೇವಾ ಸಮಿತಿಯ ಆಯ್ದ ಪ್ರಮುಖರು ಮಾತ್ರ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕ್ಷೇತ್ರದ ಆದಿ ದೈವ ಧೂಮಾವತಿ ಸಾನಿಧ್ಯ, ಕುಪ್ಪೆ ಪಂಜುರ್ಲಿ ಸಾನಿಧ್ಯ, ಬೆರ್ಮೆರ್ ಗುಂಡ, ದೇಯಿ ಬೈದ್ಯೆತಿ ಸತ್ಯಧರ್ಮ ಚಾವಡಿ, ಕೋಟಿ ಚೆನ್ನಯ ಮೂಲಸ್ಥಾನ ಗರಡಿ, ಕಲ್ಲಾಲ್ದಾಯ ಸಾನಿಧ್ಯಗಳಲ್ಲಿ ಕ್ಷೇತ್ರದ ತಂತ್ರಿವರ್ಯ ರಿಂದ ಕಲಶಾಭಿಷೇಕ ನಡೆಸಲಾಯಿತು.
ಲಕ್ಷಾಂತರ ಭಕ್ತರ ಭಾಗವಹಿಸುವಿಕೆ ಯಿಂದ ಗೆಜ್ಜೆಗಿರಿ ಬ್ರಹ್ಮಕಲಶೋತ್ಸವ ನಭೂತೋ ಎಂಬಂತೆ ನಡೆದಿತ್ತು. ಲಾಕ್ ಡೌನ್ ಹಿನ್ನೆಲೆಯಲ್ಲಿ ದೃಢಕಲಶಾಭಿಷೇಕ ವನ್ನು 48ನೇ ದಿನದಂದು ನಡೆಸಿರಲಿಲ್ಲ. ಇದೀಗ ಬೆರಳೆಣಿಕೆ ಪ್ರಮುಖರ ಉಪಸ್ಥಿತಿ ಯಲ್ಲಿ ದೃಢಕಲಶಾಭಿಷೇಕ ನಡೆಸುವ ಮೂಲಕ ಕಾನೂನು ನಿಯಮ ಪಾಲನೆ ಮಾಡಲಾಗಿದೆ. ಈ ಅನಿವಾರ್ಯ ಕಾಲಘಟ್ಟದ ಕಾರಣದಿಂದ ಸರಳವಾಗಿ ಆಚರಿಸಲಾಗಿದ್ದು, ಭಕ್ತರು ತಾವಿರುವ ಸ್ಥಳದಿಂದಲೇ ಪ್ರಾರ್ಥನೆ ಮಾಡಿ ಕ್ಷೇತ್ರದ ಸಾನಿಧ್ಯ ಶಕ್ತಿಗಳ ಅನುಗ್ರಹ ಪಡೆಯ ಬೇಕೆಂದು ವಿನಂತಿಸಲಾಗಿದೆ.
ಕಾರ್ಯಕ್ರಮದಲ್ಲಿ ಕ್ಷೇತ್ರದ ಯಜಮಾನ ಶ್ರೀಧರ ಪೂಜಾರಿ, ಕ್ಷೇತ್ರದ ಆಡಳಿತ ಸಮಿತಿಯ ಅಧ್ಯಕ್ಷ ಜಯಂತ ನಡುಬೈಲ್, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಪೀತಾಂಬರ ಹೇರಾಜೆ ಹಾಗೂ ವಿವಿಧ ಸಮಿತಿಗಳ ಪದಾಧಿಕಾರಿಗಳು ಭಾಗವಹಿಸಿದ್ದರು.






