ಜಿಲ್ಲೆಗೆ ಮುಕ್ತ ಕೊರೋನಾ ಸೋಂಕಿನ ಭೀತಿ
ಬಂಟ್ವಾಳ-ಮೂಡಿಗೆರೆ ರಾಜ್ಯ ಹೆದ್ದಾರಿಯ ಚಾರ್ಮಾಡಿಯಲ್ಲಿ ಕೋವಿಡ್19 ಮುನ್ನೆಚ್ಚರಿಕೆ ಕ್ರಮವಾಗಿ ವಾಹನ ತಪಾಸಣೆಗೆ ಹಾಗೂ ಪ್ರಯಾಣಿಕರ ಆರೋಗ್ಯವನ್ನು ಪರೀಕ್ಷಿಸಲು ಈ ಹಿಂದೆ ತೆರೆಯಲಾಗಿದ್ದ ತಾತ್ಕಾಲಿಕ ಗೇಟನ್ನು ತೆರವುಗೊಳಿಸಿದ್ದು, ಮುಕ್ತ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಹೊರ ಜಿಲ್ಲೆಗಳಿಂದ ಬರುವವರ ಆರೋಗ್ಯ ತಪಾಸಣೆ ಇಲ್ಲದಿರುವುದರಿಂದ ಜಿಲ್ಲೆಗೆ ನಮ್ಮ ಬೆಳ್ತಂಗಡಿ ತಾಲೂಕಿನ ಮೂಲಕ ಕೊರೋನಾ ಸೋಂಕು ಮುಕ್ತವಾಗಿ ಪ್ರವೇಶ ಪಡೆಯುವ ಅಪಾಯವಿದೆ. ಈಗ ಹೊರ ರಾಜ್ಯದ ವಾಹನಗಳ ಹಾಗೂ ಪ್ರಯಾಣಿಕರ ದಾಖಲೆಗಳನ್ನು ಮಾತ್ರ ತಪಾಸಣೆ ಮಾಡಲಾಗುತ್ತಿದೆ. ಆರೋಗ್ಯ ಇಲಾಖೆಯಿಂದ ಪ್ರಯಾಣಿಕರ ಆರೋಗ್ಯ ತಪಾಸಣೆಗೆ ನಿಯೋಜಿಸಲಾಗಿದ್ದ ಸಿಬಂದಿ ಇರುವುದಿಲ್ಲ. ಇದೀಗ ವಾಹನ ತಪಾಸಣೆಯ ಉದ್ದೇಶ ಏನು? ಆರೋಗ್ಯ ತಪಾಸಣೆ ಯಾಕಿಲ್ಲ? ಜನತೆಯ ಭೀತಿ ನಿವಾರಿಸಬೇಕಾದ ಜವಾಬ್ದಾರಿ ಸರಕಾರದ್ದಲ್ಲವಾ? ಮುಂತಾದ ಪ್ರಶ್ನೆ ಜನಸಾಮಾನ್ಯರನ್ನು ಕಾಡತೊಡಗಿದೆ.
ಈ ನಡುವೆ ನೀರುಮಾರ್ಗದ ಕೋವಿಡ್ 19 ಪಾಸಿಟಿವ್ ಮಹಿಳೆಯ ಪ್ರಥಮ ಸಂಪರ್ಕದಲ್ಲಿದ್ದ ಚಾರ್ಮಾಡಿಯ ಸಂಬಂಧಿ ಮಹಿಳೆ ಹಾಗೂ ಇಬ್ಬರು ಮಕ್ಕಳ ಗಂಟಲ ದ್ರವ ಮಾದರಿಯ ಪರೀಕ್ಷಾ ವರದಿ ನೆಗೆಟಿವ್ ಬಂದಿರುವುದಾಗಿ ನೆರಿಯ ಪ್ರಾ.ಆ. ಕೇಂದ್ರದ ವರದಿ ತಿಳಿಸಿದ್ದು, ಪರಿಸರದ ಜನತೆ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.






