ಬೆಳ್ತಂಗಡಿ: ಉಜಿರೆ ಪೇಟೆಯಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಅಮಾಯಕ ಕೂಲಿ ಕಾರ್ಮಿಕ ಮೂಲತಃ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಎನ್ನಲಾದ ನಿಡಿಗಲ್ ನಿವಾಸಿ ಬೀರೇಶ್ ಆಲಿಯಾಸ್ ಫಕೀರಪ್ಪ(48) ಎಂಬಾತನಿಗೆ ಬೈಕೊಂದು ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡು, ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯುವ ಮಧ್ಯೆ ದಾರಿಯಲ್ಲೇ ಅಪಮೃತ್ಯುವಿಗೀಡಾದ ಘಟನೆ ಜೂನ್ 11ರಂದು ರಾತ್ರಿ ವರದಿಯಾಗಿದೆ.
ಇಂದಬೆಟ್ಟು ನಿವಾಸಿ ಕಾರ್ತಿಕ್ (22) ಎಂಬಾತ ತನ್ನ ಬೈಕಿನಲ್ಲಿ ಬೆಳ್ತಂಗಡಿಯಿಂದ ಚಾರ್ಮಾಡಿ ಮಾರ್ಗದಲ್ಲಿ ತೆರಳುವ ವೇಳೆ ಈ ದುರ್ಘಟನೆ ಸಂಭವಿಸಿದೆ. ಅಪಘಾತದಲ್ಲಿ ಬೈಕ್ ಸವಾರ ಕಾರ್ತಿಕ್ಗೂ ತಲೆಗೆ ಗಂಭೀರ ಗಾಯಗಳಾಗಿದ್ದು, ಇದೀಗ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಬೈಕ್ ಸವಾರ ತನ್ನ ರಕ್ಷಣೆಗೆ ಧರಿಸಬೇಕಾಗಿದ್ದ ಹೆಲ್ಮೆಟ್ ಧರಿಸದೇ, ಸಂಚಾರಿ ನಿಯಮ ಉಲ್ಲಂಘಿಸಿ, ಬೈಕ್ ಓಡಿಸಿರುವುದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






