
ಬೆಳ್ತಂಗಡಿ: ಜೂನ್ 11ರಂದು ವಿಪರೀತ ಸುಳಿಗಾಳಿ ಬೀಸಿ ಸುರಿದ ಭಾರೀ ಮಳೆಗೆ ಕುಪ್ಪೆಟ್ಟಿ ಪರಿಸರದ ನರ್ಸಪಾಲು, ಮಾಲ್ದಡ್ಕ, ಬರೆಮೇಲು ಪ್ರದೇಶದಲ್ಲಿ 800 ಅಡಿಕೆ ಮರಗಳು, ಗೇರು ಮರಗಳು ಧರಾಶಾಹಿಯಾಗಿದೆ. ಉಪ್ಪಿನಂಗಡಿ-ಗುರುವಾಯನಕೆರೆ ರಸ್ತೆಯಲ್ಲಿ ಕುಪ್ಪೆಟ್ಟಿ ಸಮೀಪ ಬೃಹದಾಕಾರದ ಮರ ಬಿದ್ದು ರಸ್ತೆ ಸಂಚಾರಕ್ಕೆ ಅಡ್ಡಿಯಾಯಿತು. ಬಳಿಕ ಸ್ಥಳೀಯರು ಮರ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಗಾಳಿಯ ರಭಸಕ್ಕೆ ಬಾರ್ಯ ಸಮೀಪ ಸುಂದರಿ ಎಂಬುವರ ಮನೆಗೆ ಮರ ಬಿದ್ದು ಹಾನಿಯಾಗಿದೆ. ಪುತ್ತಿಲ ಸಮೀಪ ಆದಮ್ ಎಂಬುವವರ ಮನೆಯ ಮಾಡಿನ ಹೆಂಚುಗಳು ಹಾರಿ ಹೋಗಿವೆ. ಗಾಳಿ ಮಳೆಗೆ ವಿದ್ಯುತ್ ಸಂಪರ್ಕ ಅಲ್ಲಲ್ಲಿ ವ್ಯತ್ಯಯವಾಗಿದ್ದು, ಮೆಸ್ಕಾಂನ ಧರ್ಮಸ್ಥಳ ಶಾಖೆಯಲ್ಲಿ 4 ಹಾಗೂ ಕಲ್ಲೇರಿ ಶಾಖೆಯಲ್ಲಿ 6 ಕಂಬಗಳು ತುಂಡಾಗಿವೆ. ಈ ವರುಷದ ಮೊದಲ ಗಾಳಿಮಳೆಗೆ ತಾಲೂಕಿನಲ್ಲಿ ಆದ ಲಕ್ಷಾಂತರ ರೂಪಾಯಿ ಬೆಳೆ ಹಾಗೂ ಆಸ್ತಿಪಾಸ್ತಿಯ ಮೌಲ್ಯವನ್ನು ಸಂಭಂಧಿಸಿದ ಇಲಾಖೆಗಳು ಅಂದಾಜಿಸಿ, ಸಂತ್ರಸ್ತರಿಗೆ ಸೂಕ್ತ ಪತಿಹಾರ ಒದಗಿಸಿಕೊಡಬೇಕಾಗಿದೆ.






