ಬೆಳ್ತಂಗಡಿ: ವಿಶ್ವದಾದ್ಯಂತ ಪಸರಿಸಿ ಲಕ್ಷಾಂತರ ಮಂದಿಯ ಸಾವು-ನೋವುಗಳಿಗೆ ಕಾರಣವಾದ ಕೊರೋನಾ ಸಾಂಕ್ರಾಮಿಕ ರೋಗದ ವಿರುದ್ಧ ಅವಿರತವಾಗಿ ಹೋರಾಡಿ ಕೊರೋನಾ ಮಹಾಮಾರಿಯನ್ನು ಬೆಳ್ತಂಗಡಿ ತಾಲೂಕಿನಲ್ಲಿ ನಿಯಂತ್ರಿಸುವಲ್ಲಿ ಶ್ರಮಿಸಿದ ಕೊರೋನಾ ವಾರಿಯರ್ಸ್ಗೆ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಬೆಳ್ತಂಗಡಿ ತಾಲೂಕು ಶಾಖೆಯು ವಿಶೇಷವಾಗಿ ಅಭಿನಂದನೆಯನ್ನು ಸಲ್ಲಿಸುತ್ತದೆ ಎಂದು ಸಂಘದ ಅಧ್ಯಕ್ಷ ಜಯಕೀರ್ತಿ ಜೈನ್ ಪ್ರಕಟಣೆಯೊಂದರಲ್ಲಿ ತಿಳಿಸಿದ್ದಾರೆ.
ಬೆಳ್ತಂಗಡಿಯ ತಹಶೀಲ್ದಾರ್ ನೇತೃತ್ವದ ತಂಡ, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಿಗರು, ಪೊಲೀಸ್ ವೃತ್ತ ನಿರೀಕ್ಷಕರು, ಉಪನಿರೀಕ್ಷಕರುಗಳು ಹಾಗೂ ಪೊಲೀಸ್ ಸಿಬ್ಬಂದಿವರ್ಗ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಮತ್ತು ಸಿಬ್ಬಂದಿವರ್ಗ, ವಿವಿಧ ಪಂಚಾಯತ್ಗಳ ಅಭಿವೃದ್ಧಿ ಅಧಿಕಾರಿ ಮತ್ತು ಸಿಬ್ಬಂದಿವರ್ಗ, ಹಿರಿಯ ಆರೋಗ್ಯ ಸಹಾಯಕಿಯರು, ತಾಲೂಕಿನ ವಿವಿಧ ಆಸ್ಪತ್ರೆಗಳ ವೈದ್ಯರು, ಮತ್ತು ಮುಖ್ಯವಾಗಿ ವಾಹನ ಸೌಕರ್ಯದ ಕೊರತೆಯ ನಡುವೆಯೂ ಅತ್ಯಂತ ಶ್ರಮವಹಿಸಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸಿದ ಕಿರಿಯ ಆರೋಗ್ಯ ಸಹಾಯಕಿಯರು ಹಾಗೂ ಆಶಾಕಾರ್ಯಕರ್ತೆಯರು, ಕ್ವಾರಂಟೈನ್ ಸೆಂಟರಿಗೆ ಹಾಗೂ ಕ್ವಾರಂಟೈನಿನಲ್ಲಿರುವವರ ಮನೆಗಳಿಗೆ ಕನಿಷ್ಟ ಸೌಲಭ್ಯಗಳೊಂದಿಗೆ ಜೀವದ ಹಂಗು ತೊರೆದು ಪರೀಕ್ಷೆಗಾಗಿ ಶಂಕಿತರ ಗಂಟಲು ದ್ರವ ಸಂಗ್ರಹಕ್ಕೆ ತೆರಳಿದ ಪ್ರಯೋಗಾಲಯ ತಂತ್ರಜ್ಞರು ಮತ್ತು ಅ್ಯಂಬುಲೆನ್ಸ್ ಚಾಲಕರಿಗೆ ಮಾತ್ರವಲ್ಲದೇ; ನೋಡೆಲ್ ಅಧಿಕಾರಿಗಳಾಗಿ ದುಡಿದ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಜಯಕೀರ್ತಿ ಜೈನ್ ವಿಶೇಷ ಅಭಿನಂದನೆಗಳನ್ನು ಸಲ್ಲಿಸಿ, ನಿಮ್ಮಗಳ ಅಮೋಘ ಸೇವೆ ತಾಲೂಕಿನ ಎಲ್ಲ ಸರಕಾರಿ ನೌಕರರು ಅಭಿಮಾನ ಪಡುವಂತಹದ್ದು ಎಂದು ಅಭಿಪ್ರಾಯಿಸಿದ್ದಾರೆ.






