ಇಂದಿನ ಕೋವಿಡ್ 19 ಸಂಕಷ್ಟ ಕಾಲದಲ್ಲಿ ಸ್ವಯಂ ಆರೋಗ್ಯ ರಕ್ಷಣೆಗಾಗಿ ಮಾಸ್ಕ್, ಸ್ಯಾನಿಟೈಸರ್, ವೈಯಕ್ತಿಕ ಅಂತರ ಇವುಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದಲ್ಲಿ ಸಾಂಕ್ರಾಮಿಕ ಕೋರೋನಾ ರೋಗವನ್ನು ತಡೆಗಟ್ಟಲು ಹಾಗೂ ಸೋಂಕು ಹರಡದಂತೆ ನಿಯಂತ್ರಿಸಲು ಸಾಧ್ಯವಿದೆ. ಕೋರೋನಾ ಸೋಂಕಿನ ಬಗ್ಗೆ ಭಯ ಬೇಡ, ಎಚ್ಚರವಿರಲಿ ಎಂದು ಸಾರ್ವಜನಿಕ ಆಸ್ಪತ್ರೆ ಬೆಳ್ತಂಗಡಿಯ ಮುಖ್ಯ ವೈದ್ಯಾಧಿಕಾರಿ ಡಾಕ್ಟರ್ ವಿದ್ಯಾವತಿ ಅವರು ಕರೆ ನೀಡಿದರು.
ದೇಶಾದ್ಯಂತ ಜೂನ್ 18ರಂದು ಮಾಸ್ಕ್ ದಿನಾಚರಣೆಯನ್ನು ಆಚರಿಸುತ್ತಿದ್ದು ಬೆಳ್ತಂಗಡಿ ಪಟ್ಟಣ ಪಂಚಾಯತ್ ವತಿಯಿಂದ ಹಮ್ಮಿಕೊಳ್ಳಲಾದ ಜನಜಾಗೃತಿ ಪಾದಯಾತ್ರೆ ಕಾರ್ಯಕ್ರಮದಲ್ಲಿ ಅವರು ಸಾರ್ವಜನಿಕರಿಗೆ ಮಾಹಿತಿಯನ್ನು ನೀಡುತ್ತಿದ್ದರು.
ಪಟ್ಟಣ ಪಂಚಾಯತು ಆಡಳಿತ , ತಾಲೂಕು ಸಾರ್ವಜನಿಕ ಆಸ್ಪತ್ರೆಯ ಜಂಟಿ ಆಶ್ರಯದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ನಡೆದ ಮಾಸ್ಕ್ ದಿನಾಚರಣೆಯ ಜನಜಾಗೃತಿ ಜಾಥಾ ಮುಖ್ಯರಸ್ತೆಯ ಚರ್ಚ್ ಬಸ್ಸು ತಂಗುದಾಣದಿಂದ ಹೊರಟು ಬಸ್ ನಿಲ್ದಾಣದವರೆಗೆ ಸಾಗಿ ಬಂತು.
ನಾವೆಲ್ಲರೂ ಕೊರೋನಾ ಸಾಂಕ್ರಾಮಿಕ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಮಾಸ್ಕ್
ಧರಿಸುವುದು, ಸ್ಯಾನಿಟೈಸರ್ ಬಳಕೆ ಮಾಡುವುದು, ವೈಯಕ್ತಿಕ ಅಂತರವನ್ನು ಕಾಪಾಡುವುದು.…. ಈ ಎಲ್ಲಾ ವಿಧಾನಗಳನ್ನು ಪ್ರತಿನಿತ್ಯ ಅಳವಡಿಸಿ ಕೊಳ್ಳುವುದಾಗಿ ಪ್ರತಿಜ್ಙೆ ಕೈಗೊಳ್ಳಲಾಯಿತು. ಪ್ರತಿಜ್ಞಾವಿಧಿಯನ್ನು ಆರೋಗ್ಯ ಶಿಕ್ಷಣಾಧಿಕಾರಿ ಅಮ್ಮಿ ಯವರು ಬೋಧಿಸಿದರು. ಪಟ್ಟಣ ಪಂಚಾಯಿತಿಯ ಆಡಳಿತ ಅಧಿಕಾರಿ ತಹಶಿಲ್ದಾರ್ ಗಣಪತಿ ಶಾಸ್ತ್ರಿ, ಮುಖ್ಯಾಧಿಕಾರಿ ಸುಧಾಕರ್, ಕಿರಿಯ ಅಭಿಯಂತರರು ಮಹಾವೀರ ಆರಿಗ, ಸಮುದಾಯ ಸಂಘಟನೆ ಅಧಿಕಾರಿ ವೆಂಕಟರಮಣ ಶರ್ಮಾ, ಆರೋಗ್ಯ ನಿರೀಕ್ಷಕರಾದ ಗಿರೀಶ್, ಪಟ್ಟಣ ಪಂಚಾಯತ ಸದಸ್ಯರುಗಳಾದ ಜಯಾನಂದ ಗೌಡ, ಲೋಕೇಶ್ ನಾಯಕ್, ಶರತ್ ಕುಮಾರ್, ಜೈಕನ್ನಡಮ್ಮ ವಾರಪತ್ರಿಕೆ ಸಂಪಾದಕ ದೇವಿಪ್ರಸಾದ್ , ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗ, ಪಟ್ಟಣ ಪಂಚಾಯತ್ನ ಎಲ್ಲಾ ಸಿಬ್ಬಂದಿ ವರ್ಗ, ಆರಕ್ಷಕ ಇಲಾಖಾ ಸಿಬ್ಬಂದಿ ವರ್ಗ, ಸಾರ್ವಜನಿಕರು ಜನಜಾಗೃತಿ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ಮಾಸ್ಕ್ ಧರಿಸಿ, ವೈಯಕ್ತಿಕ ಅಂತರ ಕಾಪಾಡಿಕೊಂಡೇ ನಡೆದ ಈ ಮಾಸ್ಕ್ ದಿನಾಚರಣೆ ಜನಸಾಮಾನ್ಯರಲ್ಲಿ ಒಂದಷ್ಟು ಮಟ್ಟಿಗೆ ಕೊರೋನಾ ಸೋಂಕಿನ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಯಿತು.







