ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲಾ ಎಂಬಂತೆ ಮಾಸ್ಕ್ ಧಾರಣೆಯಲ್ಲಿ ರಾಜಕೀಯ ನಾಯಕರನ್ನು ಅನುಸರಿಸುತ್ತಿರುವ ಸಮಾಜ ಸೇವಕರಲ್ಲೂ ಇಲ್ಲದ ಮಾಸ್ಕ್
ಮುಂಗಾರಿನ ಆಷಾಢ ಮಾಸದ ಮಳೆರಾಯ ಆರ್ಭಟಿಸುವ ದಿನಗಳಲ್ಲಿ ಬೆಳ್ತಂಗಡಿ ತಾಲೂಕಿನ ಕಾಡಂಚಿನ ಗ್ರಾಮವಾದ ಶಿಶಿಲದ ಸಮಾನ ಮನಸ್ಕ ಗ್ರಾಮಸ್ಥರು ವಿನೂತನ ರೀತಿಯಲ್ಲಿ ಇತ್ತೀಚೆಗೆ ಚೀನಾ ಗಡಿಯಲ್ಲಿ ಹುತಾತ್ಮರಾದ ನಮ್ಮ ಯೋಧರಿಗೆ ಶ್ರಧ್ಧಾಂಜಲಿಯನ್ನು ಅರ್ಪಿಸುವುದರೊಂದಿಗೆ ನಮ್ಮ ದೇಶದ ಗಡಿಗಳನ್ನು ಕಾಯುವ ಯೋಧರಿಗೆ ಗೌರವ ನೀಡಿದ್ದಾರೆ. ಗ್ರಾಮಗಳು ಸ್ವಾವಲಂಬಿಗಳಾಗಿ ಶಕ್ತಿಯುತವಾದಾಗ ಮಾತ್ರ ದೇಶ ಬಲಿಷ್ಠವಾಗಲು ಸಾಧ್ಯ ಎಂಬ ಮಾತನ್ನು ಗಮನದಲ್ಲಿರಿಸಿ, ತಮ್ಮ ಒಗ್ಗಟ್ಟಿನ ಶ್ರಮದ ಮೂಲಕ ಇತ್ತೀಚೆಗೆ ಒಂದಿಲ್ಲೊಂದು ಒಳ್ಳೆಯ ಕೆಲಸಗಳನ್ನು ನಡೆಸುವ ಮೂಲಕ ಸದಾ ಸುದ್ದಿಯಲ್ಲಿದೆ ಈ ಕಾಡಂಚಿನ ಗ್ರಾಮ. ಅಂತಹ ಒಂದು ಕೆಲಸಗಳಲ್ಲಿ ಇಂದಿನದೂ ಕೂಡ ಒಂದು.
ಶಿಶಿಲವನ್ನು ಸಂಪರ್ಕಿಸುವ ಪ್ರಮುಖ ರಸ್ತೆಯಾದ ಅರಸಿನಮಕ್ಕಿಯಿಂದ ಶಿಶಿಲಕ್ಕೆ ಬರುವ 8 ಕಿ.ಮೀ. ಅಂತರದ ರಸ್ತೆಯು ಅನೇಕ ಕಡಿದಾದ ತಿರುವುಗಳಂದ ಕೂಡಿದ್ದು, ಇತ್ತೀಚೆಗೆ ಈ ರಸ್ತೆಯ ಇಕ್ಕೆಲಗಳಲ್ಲಿ ಗಿಡಗಂಟಿಗಳು ರಸ್ತೆಯ ಬದಿಗಳನ್ನು ಮುಚ್ಚುವ ರೀತಿಯಲ್ಲಿ ಅಪಾಯಕಾರಿಯಾಗಿ ಬೆಳೆದಿದ್ದು, ಇಲ್ಲಿ ದಿನನಿತ್ಯ ಸಂಚರಿಸುವ ವಾಹನ ಸವಾರರಿಗೆ ಮತ್ತು ಶಿಶಿಲ ಕ್ಷೇತ್ರ ದರ್ಶನ ಮಾಡಲು ಬರುವ ಅನ್ಯ ಊರಿನ ಪ್ರವಾಸಿಗರಿಗೆ ಅಡಚಣೆಯುಂಟಾಗುತ್ತಿದ್ದು ರಸ್ತೆ ಅವಘಡಗಳು ಉಂಟಾಗುವ ಸಾಧ್ಯತೆಯನ್ನು ಮನಗಂಡ ಗ್ರಾಮಸ್ಥರು ಶ್ರಮದಾನದ ಮೂಲಕ ಈ ಅಪಾಯಕಾರಿ ಗಿಡಗಂಟಿಗಳನ್ನು ಕತ್ತರಿಸಿ, ರಸ್ತೆ ಹೊಂಡಗಳನ್ನು ಮುಚ್ಚಿದ್ದಲ್ಲದೇ, ರಸ್ತೆ ಬದಿಯಲ್ಲಿರುವ ಪ್ಲಾಸ್ಟಿಕ್ ಮತ್ತು ಬಾಟಲಿಗಳನ್ನು ಸ್ವಚ್ಛಗೊಳಿಸಿ ಇತರ ಗ್ರಾಮಗಳಿಗೆ ಮಾದರಿಯಾಗುವಂತೆ ತಮ್ಮ ಸಾಮಾಜಿಕ ಕಳಕಳಿಯನ್ನು ತೋರ್ಪಡಿಸಿದ್ದಾರೆ. ಆ ಮೂಲಕ ಪರಿಸರವನ್ನು ಸ್ವಚ್ಛವಾಗಿರಿಸಿ ಪರಿಸರ ದೇವಿಗೂ ಕೂಡ ತಮ್ಮಿಂದಾದ ಕಿಂಚಿತ್ ಸೇವೆಯನ್ನು ಮಾಡಿದ್ದಾರೆ.
ಮೊದಲಿಗೆ ಗ್ರಾಮಸ್ಥರು ಸುಮಾರು 50ರಷ್ಟು ಸಂಖ್ಯೆಯಲ್ಲಿ ಸೇರಿ ಬೆಳಗ್ಗೆ 9 ಗಂಟೆಗೆ ಶಿಶಿಲಪೇಟೆಯಲ್ಲಿ ಒಗ್ಗೂಡಿ ಇತ್ತೀಚೆಗೆ ಚೀನಾ ಗಡಿಯ ಸಂಘರ್ಷದಲ್ಲಿ ಹುತಾತ್ಮರಾದ ಸೈನಿಕರ ಭಾವಚಿತ್ರದೆದುರಿಗೆ ಮೌನ ಪ್ರಾ ರ್ಥನೆಯ ಮೂಲಕ ಶ್ರಧ್ಧಾಂಜಲಿ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಕಾರ್ಗಿಲ್ ಯುಧ್ದದ ಸಮಯದಲ್ಲಿ ಭಾರತೀಯ ಸೇನೆಯ ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್ನಲ್ಲಿ ಲ್ಯಾನ್ಸ್ ನಾಯಕ್ ಆಗಿ ಯುಧ್ಧದ ಮುಂಚೂಣಿಯಲ್ಲಿದ್ದು ಪಾಕಿಸ್ತಾನದ ವಿರುಧ್ಧ ಹೋರಾಡಿದ ಇದೇ ಗ್ರಾಮದ ಪ್ರಸನ್ನ ಬಿ. ಇವರು ಪ್ರಾಸ್ತಾವಿಕವಾಗಿ ಮಾತನಾಡಿ, ಶಿಶಿಲದ ಜನತೆ ನಮ್ಮ ಸೈನಿಕರಿಗೆ ಸಲ್ಲಿಸಿದ ಗೌರವವನ್ನು ಶ್ಲಾಘಿಸಿದ್ದಾರೆ. ಭಾರತೀಯ ಜೀವ ವಿಮಾ ನಿಗಮದ ಅಭಿವೃದ್ಧಿ ಅಧಿಕಾರಿ ಉದಯಶಂಕರ್ ಕಾರ್ಯಕ್ರಮವನ್ನು ನಿರೂಪಿಸಿದರು. ಸ್ಥಳೀಯ ಯುವ ನಾಯಕ-ಕೃಷಿಕ-ಉದ್ಯಮಿ ರಾಘವೇಂದ್ರ ನಾಯಕ್ ಈ ಎಲ್ಲ ಕೆಲಸಳಿಗೆ ಒತ್ತಾಸೆಯಾಗಿ ನಿಂತಿದ್ದರು. ಮಾತ್ರವಲ್ಲದೆ ಇನ್ನೂ ಊರಿನ ಅನೇಕ ಜನರು ಈ ಒಂದು ಕೆಲಸಕ್ಕೆ ತಮ್ಮ ಶ್ರಮ ಮತ್ತು ಪ್ರಾಯೋಜಕತ್ವ ನೀಡಿ ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದ್ದಾರೆ. ಇಂತಹ ಕಾರ್ಯಕ್ರಮಗಳು ದೇಶದ ಪ್ರತೀ ಗ್ರಾಮಗಳಲ್ಲಿ ನಡೆದರೆ ಗ್ರಾಮ ಸ್ವರಾಜ್ ಪರಿಕಲ್ಪನೆ ಸಾಕಾರಗೊಳ್ಳುವುದು.
ವರದಿ @ ಗುರುಮೂರ್ತಿ ಎಸ್.ಕೊಕ್ಕಡ







