ಹಳ್ಳಿಯ ಕೊರೋನಾ ಸೋಂಕಿತ ಗರ್ಭಿಣಿ ನರಳಾಟ

ಬಿಗ್ ಬ್ರೇಕಿಂಗ್ ನ್ಯೂಸ್  ಉಪ್ಪಿನಂಗಡಿಗೂ ವಕ್ಕರಿಸಿದ ಕೊರೋನಾ
Facebook
Twitter
LinkedIn
WhatsApp

ಆಸ್ಪತ್ರೆಯಲ್ಲಿ ಬೆಡ್ ಸಿಗದೇ ಕಂಗಾಲು

ಬೆಳ್ತಂಗಡಿ: ಸರಕಾರವೇನೋ ಖಾಸಗಿ ಆಸ್ಪತ್ರೆಗಳಲ್ಲೂ ಕೊರೋನಾ ಸೋಂಕಿತರಿಗೆ ಚಿಕಿತ್ಸೆಗೆ ಬೆಡ್‌ ವ್ಯವಸ್ಥೆ ಮಾಡಲಾಗಿದೆ; ಯಾರೂ ಆತಂಕ ಪಡಬೇಕಾಗಿಲ್ಲ ಎಂದು ಭರವಸೆಯ ಹೇಳಿಕೆ ನೀಡುತ್ತಿದೆ. ಆದರೆ ನಾವು ಇದುವರೆಗೆ ಬೆಂಗಳೂರು ಮಹಾನಗರದಲ್ಲಿ ಕೊರೋನಾ ಸೋಂಕಿತರು ಹಾಗೂ ಇತರ ರೋಗಿಗಳಿಗೆ ಚಿಕಿತ್ಸೆಗೆ ಬೆಡ್ ಇಲ್ಲದೇ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುವ ದೃಶ್ಯಗಳನ್ನು ದೃಶ್ಯ ಮಾಧ್ಯಮಗಳಲ್ಲಿ ನೋಡಿದ್ದೇವೆ. ಇದೀಗ ಬೆಳ್ತಂಗಡಿ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲೂ ಗರ್ಭಿಣಿ ಮಹಿಳೆಯರು ಕೊರೋನಾ ಸೋಂಕಿನಿಂದ ನರಳಾಡಿದರೂ, ಅವರಿಗೆ ಚಿಕಿತ್ಸೆಗೆ ಆಸ್ಪತ್ರೆಗಳಲ್ಲಿ ಬೆಡ್ ಖಾಲಿ ಇಲ್ಲ ಎಂಬ ಹತಾಶ ಉತ್ತರ ಜವಾಬ್ದಾರಿಯುತ ವೈದ್ಯಾಧಿಕಾರಿಗಳಿಂದ ಬರುತ್ತಿದೆ. ಇಂತಹ ಪ್ರಕರಣಗಳು ಸರಕಾರದ ಮುಖಕ್ಕೇ ಮಸಿ ಬಳಿಯುವಂತಹದ್ದು.
ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಸುಮಾರು 30ರಿಂದ 35ವರ್ಷ ವಯಸ್ಸಿನ ಓರ್ವ ಗರ್ಭಿಣಿ ಮಹಿಳೆ ಹಾಗೂ ಇನ್ನೋರ್ವ ಮಹಿಳೆಗೆ ಕಳೆದ ಶುಕ್ರವಾರ ಅಂದರೆ ಜುಲೈ 17ರಂದೇ ಕೊರೋನಾ ಪಾಸಿಟೀವ್ ವರದಿ ಬಂದಿತ್ತು. ಇವರಿಬ್ಬರಿಗೂ ಇದುವರೆಗೆ ಸೂಕ್ತ ಸುರಕ್ಷತಾ ಕ್ರಮಗಳೊಂದಿಗೆ ಚಿಕಿತ್ಸೆಯ ವ್ಯವಸ್ಥೆ ಇದುವರೆಗೆ ಆಗಿಲ್ಲ. ವಿಚಾರ ತಿಳಿದ ತಕ್ಷಣ ತನ್ನ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದ ಕಣಿಯೂರು ಗ್ರಾಮ ಪಂಚಾಯತ್ ಸೋಂಕಿತ ಮಹಿಳೆಯರ ಮನೆಗಳ ಪರಿಸರವನ್ನು ಸೀಲ್‌ಡೌನ್ ಮಾಡಿದರಲ್ಲದೇ; ತಕ್ಷಣ ತಾಲೂಕು ವೈದ್ಯಾಧಿಕಾರಿಗಳನ್ನು ಸಂಪರ್ಕಿಸಿ, ಸೋಂಕಿತರಿಗೆ ಆಸ್ಪತ್ರೆಯ ವ್ಯವಸ್ಥೆ ಕಲ್ಪಿಸುವಂತೆ ವಿನಂತಿಸಿದರು. ಗರ್ಭಿಣಿ ಮಹಿಳೆಗೆ ಚಿಕಿತ್ಸೆ ಕೊಡಿಸಲು ಮಂಗಳೂರಿನ ಲೇಡಿಗೊಷನ್ ಆಶ್ಪತ್ರೆಯಲ್ಲಿ ವ್ಯವಸ್ಥೆ ಕಲ್ಪಿಸಲು ವಿನಂತಿಸಿದರು. ಆದರೆ ತಾಲೂಕು ವೈದ್ಯಾಧಿಕಾರಿಗಳು ಸೋಂಕಿತರ ಚಿಕಿತ್ಸೆಗೆ ಆಸ್ಪತ್ರೆಗಳಲ್ಲಿ ಬೆಡ್ ಸೌಲಭ್ಯ ಇಲ್ಲ ಎಂದು ಹೇಳಿ, ಬಡಪಾಯಿ ಗರ್ಭಿಣಿ ಸೋಂಕಿತೆ ಸಹಿತ ಹಳ್ಳಿಯ ಇಬ್ಬರು ಸೋಂಕಿತರು ಮತ್ತು ಅವರ ಮನೆಯವರು ಭಯದಲ್ಲಿ ದಿನ ಕಳೆಯುವಂತೆ ಮಾಡಿದ್ದಾರೆ‌.
ಬೆಳ್ತಂಗಡಿ ತಾಲೂಕಿನ ಮನೆಗಳಲ್ಲಿ ಮೂಲಭೂತ ಸೌಕರ್ಯ ಸರಿಯಾಗಿ ಇರದ ಕೊರೋನಾ ಸೋಂಕಿತರಿಗೆ ಚಿಕಿತ್ಸೆಗಾಗಿಯೇ ಶಾಸಕ ಹರೀಶ್ ಪೂಂಜಾರವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಟಿ. ಬಿ. ಆಸ್ಪತ್ರೆಯಲ್ಲಿ ಸಕಲ ವ್ಯವಸ್ಥೆ ಕಲ್ಪಿಸಿರುವಾಗ, ಕಣಿಯೂರಿನ ಗರ್ಭಿಣಿ ಸಹಿತ ಇಬ್ಬರು ಸೋಂಕಿತ ಮಹಿಳೆಯರು ಚಿಕಿತ್ಸೆ ಸಿಗದೇ ನರಳಾಡುವ ದುಸ್ಥಿತಿ ಬಂದಿರುವುದು ವ್ಯವಸ್ಥೆಯ ವೈಫಲ್ಯವೋ ಅಥವಾ ಇಲಾಖಾಧಿಕಾರಿಗಳಿಗಿರುವ ಭಯ- ಅಸಡ್ಡೆಯೋ ಗೊತ್ತಾಗುತ್ತಿಲ್ಲ. ಒಂದೇ‌ ಮನೆಯಲ್ಲಿ ಹತ್ತಾರು ಮಂದಿ ವಾಸ್ತವ್ಯವಿರುವ ಕಣಿಯೂರಿನ ಈ ಸೋಂಕಿತ ಮಹಿಳೆಯರಿಬ್ಬರ ಮನೆಗಳಲ್ಲಿ ಪ್ರತಿಯೊಬ್ಬರು ಭಯದಲ್ಲಿಯೇ ಕ್ಷಣಕ್ಷಣಗಳನ್ನು ಕಳೆಯುತ್ತಿರುವುದು ಮಾತ್ರ ಸರಕಾರದ ವೈಫಲ್ಯಕ್ಕೆ ಹಿಡಿದ ಕನ್ನಡಿ‌. ಇದನ್ನು ನೋಡಿದಾಗ ಸರಕಾರಗಳು ನೀಡುವ ಭರವಸೆಗಳಲ್ಲಿ ಭರವಸೆಯಿರಿಸಿ ಬದುಕುತ್ತಿರುವ ಜನಸಾಮಾನ್ಯರ ಬದುಕಿನ ಪರಿಸ್ಥಿತಿ ಮುಂದಿನ ದಿನಗಳಲ್ಲಿ ಇನ್ನೆಷ್ಟು ಹದಗೆಡಲಿದೆ ಎಂಬ ಆತಂಕ ನಾಗರಿಕರನ್ನು ಕಾಡದೇ ಇರದು.

Latest News

Related Posts