ಬೆಳ್ತಂಗಡಿ : ಆಗಸ್ಟ್ 3ರಂದು ಬೆಳ್ತಂಗಡಿ ತಾಲೂಕಿನಲ್ಲಿ ಹಾಗೂ ಘಾಟಿ ಪ್ರದೇಶದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಚಾರ್ಮಾಡಿ ಘಾಟಿಯ ಎರಡನೇ ತಿರುವಿನಲ್ಲಿ ರಸ್ತೆಗೆ ಅಡ್ಡಲಾಗಿ ಮರ ಬಿದ್ದು, ವಾಹನ ಸಂಚಾರ ಅಸ್ತವ್ಯಸ್ಥಗೊಂಡಿದೆ. ಅತ್ಯಂತ ದುರ್ಗಮವಾದ ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಮಳೆಗಾಲದಲ್ಲಂತೂ ವಾಹನ ಸಂಚಾರ ತೀರಾ ಅಪಾಯಕಾರಿ ಎಂದು ಗೊತ್ತಿದ್ದರೂ ಇಲ್ಲಿ ಸಾಕಷ್ಟು ದುಸ್ಸಾಹಸಿಗರು ತಮ್ಮ ವಾಹನದಲ್ಲಿ ಪಯಣಿಸುತ್ತಲೇ ಇದ್ದಾರೆ. ಈ ರಸ್ತೆಯಲ್ಲಿ ಪಯಣಿಸುವ ದುಸ್ಸಾಹಸಕ್ಕೆ ಮುಂದಾಗುವ ಎಲ್ಲರೂ ಒಂದು ವಿಚಾರವನ್ನು ತಿಳಿದುಕೊಂಡಿರಬೇಕು; ‘ಮಳೆಗಾಲದಲ್ಲಿ ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಪ್ರಯಾಣ ಅಪಾಯ ಅಪಾಯ ಅಪಾಯ.

ಮೂಡಿಗೆರೆ ವ್ಯಾಪ್ತಿಯ ಮಲಯ ಮಾರುತ ಬಳಿ ಆಗಸ್ಟ್ 3ರ ಮಧ್ಯಾಹ್ ಭೂ ಕುಸಿತ ಉಂಟಾಗಿ ಸಂಚಾರ ಅಸ್ತವ್ಯಸ್ತವಾಗಿತ್ತು. ಮತ್ತೆ ಸಂಜೆ ವೇಳೆಗೆ ಅದನ್ನು ತೆರವು ಮಾಡಲಾಯಿತು.
ಚಾರ್ಮಾಡಿ ಘಾಟಿಯಲ್ಲಿ ಸಂಜೆ 7ಗಂಟೆಯಿಂದ ಬೆಳಗ್ಗೆ 7 ಗಂಟೆಯವರೆಗೆ ವಾಹನ ಸಂಚಾರ ನಿಷೇಧಿಸಲಾಗಿದ್ದು, ವಾಹನ ಸಂಚಾರ ತೀರಾ ಕಡಿಮೆ ಇದ್ದುದರಿಂದ ಭಾರಿ ಅನಾಹುತ ತಪ್ಪಿದಂತಾಗಿದೆ.






