ಬೆಳ್ತಂಗಡಿ : ಮನಸ್ಸಿನ ಪವಿತ್ರತೆಯನ್ನು ಹೆಚ್ಚಿಸಲು ದೇವರ ನಾಮಸ್ಮರಣೆ ಅಗತ್ಯ. ನಿಷ್ಠೆಯಿಂದ ಧರ್ಮಪಾಲನೆ ಮಾಡುವ ಮೂಲಕ ಸುಖ, ಶಾಂತಿ, ನೆಮ್ಮದಿಯ ಬದುಕು ನಮ್ಮದಾಗಿಸಿಕೊಳ್ಳಬೇಕು. ರಾಮ ಎಂಬ ಶಬ್ದ ನಮ್ಮ ಜೀವನಾಡಿ. ಸನಾತನ ಧರ್ಮವನ್ನು ಅನುಸರಿಸುವ ಪ್ರತಿಯೊಬ್ಬರ ಮನೆಗಳಲ್ಲಿ ಶ್ರೀರಾಮ ನಾಮ ಜಪಿಸುವಂತಾಗಲಿ ಎಂದು ಧರ್ಮಸ್ಥಳ ನಿತ್ಯಾನಂದನಗರ ಶ್ರೀರಾಮಕ್ಷೇತ್ರದ ಸದ್ಗುರು ಬ್ರಹ್ಮಾನಂದಶ್ರೀಗಳು ನುಡಿದರು.
ಅವರು ಆಗಸ್ಟ್ 5ರಂದು ಧರ್ಮಸ್ಥಳ ಕನ್ಯಾಡಿ ದೇವರಗುಡ್ಡೆ ಮಠದಲ್ಲಿ ಶ್ರೀರಾಮಚಂದ್ರ ಸಪರಿವಾರ ಮೂರ್ತಿಗಳ ಮತ್ತು ಬ್ರಹ್ಮಶ್ರೀ ನಾರಾಯಣ ಗುರುಗಳ ಮೂರ್ತಿ ಪ್ರತಿಷ್ಠೆ ನೆರವೇರಿಸಿದ ಬಳಿಕ ಆಶಿರ್ವಚನ ನೀಡುತ್ತಿದ್ದರು.
ದೇಶದ ಶತಕೋಟಿ ಭಕ್ತರ ಪ್ರಾರ್ಥನೆ ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣವಾಗಬೇಕು ಎಂದಿತ್ತು. ಪ್ರಭು ಶ್ರೀರಾಮಚಂದ್ರನ ಅನುಗ್ರಹ ಇದ್ದರೆ ಎಲ್ಲವೂ ಸಾಧ್ಯ ಎಂಬಂತೆ ಮರೆಯಾಗಿದ್ದ ಅಯೋಧ್ಯೆ ಇಂದು ಮತ್ತೆ ನಿರ್ಮಾಣಗೊಳ್ಳುತ್ತಿರುವುದು ದೇಶದ ಜಗತ್ತಿನ ಶಾಂತಿ, ನೆಮ್ಮದಿಗೆ ದಾರಿ ತಂದುಕೊಂಡಂತೆ. ಶ್ರೀರಾಮನ ಮನಸ್ಸಿನಂತೆ ಪ್ರತಿಯೊಬ್ಬರ ಆತ್ಮದಲ್ಲಿಯೂ ಪವಿತ್ರತೆ ಅಡಗಿದೆ. ಅದನ್ನು ನಾವು ಸದುಪಯೋಗಪಡಿಸಬೇಕು. ಪರಸ್ಪರ ನಂಬಿಕೆ, ಪ್ರೀತಿ, ವಿಶ್ವಾಸವಿದ್ದರೆ ಆರೋಗ್ಯವಂತರಾಗಿ ನೆಮ್ಮದಿಯ ಬದುಕು ಕಟ್ಟಿಕೊಳ್ಳಬಹುದು ಎಂದು ಸ್ವಾಮೀಜಿ ಅಭಿಪ್ರಾಯಿಸಿದರು.
ಕಾರ್ಯಕ್ರದಲ್ಲಿ ಶ್ರೀರಾಮಕ್ಷೇತ್ರದ ಟ್ರಸ್ಟಿ ಚಿತ್ತರಂಜನ್ ಗರೋಡಿ, ಬೆಳ್ತಂಗಡಿ ಗ್ರಾಮೀಣ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಶೈಲೇಶ್ ಕುಮಾರ್ ಕುರ್ತೋಡಿ, ಡಾ| ಎಂ.ಎಂ ದಯಾಕರ್ ಉಜಿರೆ, ಭಜರಂಗದಳದ ಜಿಲ್ಲಾ ಸಂಚಾಲಕ ಭಾಸ್ಕರ್ ಧರ್ಮಸ್ಥಳ, ಬಂಟ್ವಾಳದ ಸಾರಿಗೆ ಇಲಾಖಾ ಅಧಿಕಾರಿ ಚರಣ್, ಮಹಿಳಾ ಬಿಲ್ಲವ ವೇದಿಕೆಯ ಮಾಜಿ ಅಧ್ಯಕ್ಷೆ ಸುಜಾತ ಅಣ್ಣಿ ಪೂಜಾರಿ, ಉದ್ಯಮಿ ರವಿಪೂಜಾರಿ ಬರಮೇಲು, ಕೃಷ್ಣಪ್ಪ ಗುಡಿಗಾರ್, ಟ್ರಸ್ಟಿ ತುಕರಾಮ್ ಸಾಲಿಯಾನ್, ಬಿಎಸ್ಎನ್ಎಲ್ ನಿವೃತ್ತ ಅಧಿಕಾರಿ ಅಣ್ಣಿ ಪೂಜಾರಿ,ಬೆಳ್ತಂಗಡಿ ತಾಲೂಕು ಯೂತ್ ಕಾಂಗ್ರೇಸ್ ಅಧ್ಯಕ್ಷ ಅಭಿನಂದನ್ ಹರೀಶ್ ಕುಮಾರ್, ವಾಣಿಜ್ಯ ತೆರಿಗೆ ಇಲಾಖಾ ಸಹಾಯಕ ಕಮಿಷನರ್ ರಾಜು ನಾಯ್ಕ್, ಮೊದಲಾದವರು ಉಪಸ್ಥಿತರಿದ್ದರು.
ಕೃಷ್ಣಪ್ಪ ಪೂಜಾರಿ ಕಲ್ಲಡ್ಕ ಕಾರ್ಯಕ್ರಮ ನಿರೂಪಿಸಿದರು.






