ಬೆಳ್ತಂಗಡಿ: ಮಳೆ ಬಿಡುವು ನೀಡುತ್ತಿದ್ದಂತೆಯೇ ಮಿತ್ತಬಾಗಿಲು ಗ್ರಾಮದ ನೇತ್ರಾವತಿ ನದಿಯ ದಡದಲ್ಲಿ ಅಕ್ರಮ ಮರಳುಗಾರಿಕೆ ಮತ್ತೆ ಆರಂಭವಾಗಿದೆ.
ಈಗಾಗಲೇ ನದಿ ಕೊರೆತದಿಂದ ಹಲವರ ಕೃಷಿ ಜಾಗ ನದಿ ಪಾಲಾಗಿದೆ. ಆದರೆ ಮತ್ತೆ ಗಾಯಕ್ಕೆ ಬೆಂಕಿ ಸುರಿಯುವಂತೆ ಮರಳನ್ನು ತೆಗೆಯುವ ಮೂಲಕ ಅಕ್ರಮ ಮರಳುಗಾರರು ಮತ್ತಷ್ಟು ತೊಂದರೆ ನೀಡುತ್ತಿದ್ದಾರೆ.
ಕಂಚರೋಡಿ ಭಾಗದಲ್ಲಿ ನದಿ ಕೊರೆತ ಉಂಟಾಗಿದ್ದು ಸಾಕಷ್ಟು ಸಮಸ್ಯೆ ಸೃಷ್ಟಿಸಿದೆ. ಈಗ ಇಲ್ಲಿ ಅಕ್ರಮ ಮರಳುಗಾರಿಕೆಯಿಂದ ಕೃಷಿ ಭೂಮಿ ನದಿ ನೀರಿಗೆ ಮತ್ತಷ್ಟು ಕೊರೆದು ಹೋಗುವ ಅಪಾಯ ಉಂಟಾಗಿದೆ.
ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ, ಸಂಜೆ 4 ಗಂಟೆಯಿಂದ ತಡ ರಾತ್ರಿವರೆಗೆ ಇಲ್ಲಿ ಅಕ್ರಮ ಮರಳುಗಾರಿಕೆ ಮಾಡಲಾಗುತ್ತಿದೆ. ಲಾರಿ, ಟಿಪ್ಪರ್ಗಳಲ್ಲಿ ನಿರಂತರ ಮರಳು ಕದ್ದು ಸಾಗಾಟ ಮಾಡಲಾಗುತ್ತಿದೆ. ಅಕ್ರಮ ಮರಳು ಗಣಿಗಾರಿಕೆಗೆ ಕಡಿವಾಣ ಹಾಕಬೇಕಾದ ಇಲಾಖಾಧಿಕಾರಿಗಳು ಗಾಢ ನಿದ್ರೆಯಲ್ಲಿರುವಂತಿದೆ.







