ಬೆಳ್ತಂಗಡಿ:ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರ ತನ್ನ 6 ವರ್ಷಗಳ ಅವಧಿಯಲ್ಲಿ ಸಾರ್ವಜನಿಕ ಸಂಸ್ಥೆಗಳಾದ ವಿಮಾನ, ರೈಲ್ವೆ, ವಿಮೆ, ಬಂದರು, ಬ್ಯಾಂಕುಗಳನ್ನು ಬಹುರಾಷ್ಟ್ರೀಯ ಕಂಪನಿಗಳಿಗೆ ಚಹಾ ಮಾರಿದಂತೆ ಮಾರಾಟ ಮಾಡುತ್ತಿದ್ದಾರೆ ಎಂದು ಸಿಐಟಿಯು ತಾಲೂಕು ಅಧ್ಯಕ್ಷ, ಹಿರಿಯ ನ್ಯಾಯವಾದಿ ಶಿವಕುಮಾರ್ ಎಸ್. ಎಂ. ಆರೋಪಿಸಿದರು.ಅವರು ನವೆಂಬರ್ 27ರಂದು ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ (JCTU) ಕರೆ ನೀಡಿದ ಅಖಿಲ ಭಾರತ ಮುಷ್ಕರ ಬೆಂಬಲಿಸಿ ಸಿಐಟಿಯು ಬೆಳ್ತಂಗಡಿ ತಾಲೂಕು ಸಮಿತಿ ನೇತೃತ್ವದಲ್ಲಿ ಬೆಳ್ತಂಗಡಿ ಮಿನಿ ವಿಧಾನಸೌಧದ ಎದುರು ನಡೆದ ಪ್ರತಿಭಟನೆ ಉದ್ದೇಶಿಸಿ ಮಾತನಾಡುತ್ತಿದ್ದರು.ಕೊರೋನಾ ಲಾಕ್ ಡೌನ್ ಹೆಸರಿನಲ್ಲಿ ದೇಶದ ಜನರನ್ನು ಕತ್ತಲಲ್ಲಿಟ್ಟು, ದೇಶದ ಸಾರ್ವಜನಿಕ ಸಂಸ್ಥೆಗಳನ್ನು ಮಾರಾಟ ಮಾಡಿದಲ್ಲದೆ , ರೈತ -ಕಾರ್ಮಿಕ-ದಲಿತ ವಿರೋಧಿ ಕಾನೂನುಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿ ಮಾಡಲಾಗಿದೆ. ಇದು ದೇಶದ ಸಂವಿಧಾನ ವಿರೋಧಿಯಾಗಿದೆ. ಸಂವಿಧಾನ ಸಮರ್ಪಣಾ ದಿನದಂದು ಇಡೀ ದೇಶದ ದುಡಿಯುವ ವರ್ಗ ಜನವಿರೋಧಿ ನೀತಿಯ ವಿರುದ್ಧ ಬೀದಿಗಿಳಿದಿದೆ ಎಂದರು. ಅನ್ನದಾತ ರೈತರ ಆತ್ಮಹತ್ಯೆ ಸರಣಿ ದೇಶದಲ್ಲಿ ಮುಂದುವರಿಯುವ ಮೂಲಕ ದೇಶವು ಜಗತ್ತಿನ ಮುಂದೆ ತಲೆ ತಗ್ಗಿಸುವಂತಾಗಿದೆ. ಅಚ್ಛೇ ದಿನ್ ಎಂಬುದು ಕೇವಲ ಅಂಬಾನಿ, ಅದಾನಿ ಕುಟುಂಬಕ್ಕೆ ಸೀಮಿತವಾಗಿದೆ ಎಂದರು.ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಿಐಟಿಯು ತಾಲೂಕು ಕಾರ್ಯದರ್ಶಿ ವಸಂತ ನಡ ದೇಶದ ಸಂಪತ್ತಿನ ಸೃಷ್ಟಿಕರ್ತ ಕಾರ್ಮಿಕ ವರ್ಗ ಹಾಗೂ ದೇಶದ ಜನತೆಗೆ ಅನ್ನ ನೀಡುವ ರೈತಾಪಿ ವರ್ಗದ ಪರವಾದ ಕಾನೂನುಗಳನ್ನು ಬಹುರಾಷ್ಟ್ರೀಯ ಕಂಪನಿಗಳ ಪರವಾಗಿ ಬದಲಾವಣೆ ಮಾಡುವ ಮೂಲಕ ಕೇಂದ್ರ ಸರ್ಕಾರ ಬಹುರಾಷ್ಟ್ರೀಯ ಕಂಪನಿಗಳ ಏಜೆಂಟ್ ಆಗಿ ವರ್ತಿಸುತ್ತಿದೆ. ಕಾರ್ಮಿಕರಿಗೆ ಕಾನೂನು ಪ್ರಕಾರ ಸಿಗಬೇಕಾದ ಸವಲತ್ತುಗಳನ್ನು ನಿರಾಕರಿಸುವ ಕೇಂದ್ರ, ರಾಜ್ಯ ಸರ್ಕಾರಗಳ ವಿರುದ್ಧ ಸಂಘಟಿತ ಹೋರಾಟ ಅಗತ್ಯವಿದೆ ಎಂದರಲ್ಲದೇ; ದೇಶದ ರೈತ,ಕಾರ್ಮಿಕ, ದಲಿತ ಸಮುದಾಯ ಒಂದಾಗಿ ಹೋರಾಟಕ್ಕೆ ಮುಂದಾಗಿದ್ದು ಮುಂದಿನ ದಿನಗಳಲ್ಲಿ ಜನವಿರೋಧಿಯಾಗಿ ವರ್ತಿಸುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮನೆ ಸೇರಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಪ್ರತಿಭಟನೆಯಲ್ಲಿ ಬೆಳ್ತಂಗಡಿ ಸಿಐಟಿಯು ಉಪಾಧ್ಯಕ್ಷ ಶೇಖರ್ ಎಲ್, ಮಹಿಳಾ ನಾಯಕಿ ಸುಕನ್ಯಾ ಹೆಚ್ , ರೈತ ನಾಯಕ ನಿಲೇಶ್ ಹೆಚ್. ಪೆರಿಂಜೆ , ಕಾರ್ಮಿಕ ಮುಖಂಡರಾದ ಕುಸುಮ ಮಾಚಾರ್, ಮಾಲಿನಿ ಕೈಕಂಬ, ಸುಧಾ ಕೆ. ರಾವ್, ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಸಂಚಾಲಕ ನಾಗರಾಜ್ ಎಸ್. ಉಪಸ್ಥಿತರಿದ್ದರು.






