ಬೆಳ್ತಂಗಡಿ: ಅಂತಾರಾಷ್ಟ್ರೀಯ ಕಾರಿತಾಸ್ ಸಂಸ್ಥೆಯ ಪ್ರಾಯೋಜಕತ್ವ ದಲ್ಲಿ, ಕರ್ನಾಟಕ ರೀಜನಲ್ ಆರ್ಗನೈಜೇಷನ್ ಫಾರ್ ಸೋಶಿಯಲ್ ಸರ್ವಿಸ್ (ಕ್ರಾಸ್) ಸಂಸ್ಥೆ ಬೆಂಗಳೂರು ಇವರ ಮೂಲಕ ಡಿ.ಕೆ.ಆರ್.ಡಿ.ಎಸ್ ಸಂಸ್ಥೆ ಬೆಳ್ತಂಗಡಿ ಇದರ ಸಿಬ್ಬಂದಿ ಮತ್ತು ಸ್ವಯಂ ಸೇವಕರಿಗೆ ಕಾರಿತಾಸ್ ಇಂಡಿಯಾದ ಪ್ರಮುಖ ಕಾರ್ಯತಂತ್ರಗಳ ಸ್ತಂಭಗಳ ಮತ್ತು ವಿಧಾನಗಳ ಕುರಿತು ತರಬೇತಿ ಆಯೋಜಿಸಲಾಗಿತ್ತು.ಈ ತರಬೇತಿಯನ್ನು ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ನಿರ್ದೇಶಕ ವಂ. ಬಿನೋಯಿ ಏ.ಜೆ. ಉದ್ಘಾಟಿಸಿ ಮಾತನಾಡುತ್ತಾ, ಗ್ರಾಮ ಮಟ್ಟದಲ್ಲಿ ನಾಯಕ ನಾಯಕಿಯರು ಬೆಳೆದು ಸಮಾಜಮುಖಿ ಕೆಲಸ ಮಾಡಲು ತರಬೇತಿಗಳ ಅಗತ್ಯವಿದೆ. ಸಮಾಜ ಸೇವೆಗೆ ಕೇವಲ ಸಂಸ್ಥೆಯೊಂದೇ ಬದ್ದವಾಗಿರದೇ ಪ್ರತಿಯಬ್ಬ ಪ್ರಜೆಯೂ ಸ್ವಯಂ ಸೇವಕನಾಗಿ ಜನರಿಗೆ ಸಹಾಯ ಮಾಡಬೇಕು. ಯಾವುದೇ ಸಂಸ್ಥೆಗಳು ಬೆಳವಣಿಗೆಯಾಗಬೇಕಾದರೆ ಹೊಸ ಹೊಸ ಕಾರ್ಯತಂತ್ರಗಳನ್ನು ರೂಪಿಸುವುದು ಮುಖ್ಯವಾಗಿದೆ. ಸರಿಯಾದ ಯೋಚನೆ, ಯೋಜನೆಗಳು ಮತ್ತು ಹೊಸತನವನ್ನು ಅಳವಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ಕಾರಿತಾಸ್ ಇಂಡಿಯಾದ ಕಾರ್ಯತಂತ್ರಗಳು ಪ್ರತಿಯೊಂದು ಸಂಸ್ಥೆಗಳಿಗೂ ಆದರ್ಶವಾಗಿದೆ ಎಂದರು. ಈ ತರಬೇತಿಯಲ್ಲಿ ಉಪಸ್ಥಿತರಿದ್ದ ಕ್ರಾಸ್ ಸಂಸ್ಥೆಯ ನಿರ್ದೇಶಕ ವಂ. ಸೆಬಾಸ್ಟಿಯನ್ ಫೆರ್ನಾಂಡಿಸ್ ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ, ನಶಿಸಿ ಹೋಗುತ್ತಿರುವ ಪರಿಸರದ ಕುರಿತು ಕಾಳಜಿ ಹೊಂದಿ ಅದರ ಸಂರಕ್ಷಣೆ ಮಾಡುವ ಮಹತ್ವದ ಹೊಣೆ ನಮ್ಮೆಲ್ಲರ ಮೇಲಿದೆ ಎಂದರು.ಈ ತರಬೇತಿಯಲ್ಲಿ ಕ್ರಾಸ್ ಸಂಸ್ಥೆಯ ರಾಜ್ಯ ಸಂಯೋಜಕಿ ಸಿಸ್ಟರ್ ಝೀಟಾ ಡಿ’ಸೋಜಾ, ಸೆಬಾಸ್ಟಿಯನ್ ಡಿ’ಸೋಜಾ ಮತ್ತು ವರ್ಗೀಸ್ರವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ತರಬೇತಿಯನ್ನು ನಡೆಸಿಕೊಟ್ಟರು. ಮಾರ್ಕ್ ಡಿ’ಸೋಜಾ ಸ್ವಾಗತಿಸಿದರು. ಸಿಸಿಲಿಯಾ ತಾವ್ರೋ ವಂದಿಸಿದರು. ಶುಭ ವಿಶ್ವಕರ್ಮ ಕಾರ್ಯಕ್ರಮವನ್ನು ನಿರೂಪಿಸಿದರು.








