ಬೆಳ್ತಂಗಡಿ: ದಿನದಿಂದ ದಿನಕ್ಕೆ ಕೊರೋನಾ ಸೋಂಕು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತನ್ನ ಪಟ್ಟನ್ನು ಬಿಗಿ ಮಾಡುತ್ತಾ ಹೋದರೂ ಇದಕ್ಕೆ ಕ್ಯಾರೇ ಅನ್ನದ ಜಿಲ್ಲೆಯ ಕೆಲ ಮಂದಿ ಸರಕಾರದ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ, ಮನಬಂದಂತೆ ತಿರುಗಾಡುತ್ತಿದ್ದರು. ಜಿಲ್ಲೆಯಲ್ಲಿ ಪ್ರತೀದಿನ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ಮನಗಂಡ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾl ಕೆ. ವಿ. ರಾಜೇಂದ್ರ ನಾಳೆಯಿಂದ ಅಂದರೆ ಮೇ 7ರಿಂದ ಜಿಲ್ಲೆಗೆ ಟಫ್ರೂಲ್ಸ್ನ್ನು ಜ್ಯಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ.ಜಿಲ್ಲಾಧಿಕಾರಿಗಳು ಹೊರಡಿಸಿದ ಲಾಕ್ಡೌನ್ ಹೊಸ ನಿಯಮದಂತೆ ನಾಳೆಯಿಂದ ದಿನಬಳಕೆ ವಸ್ತು ಖರೀದಿಗೆ ಬೆಳಿಗ್ಗೆ ಗಂಟೆ 6ರಿಂದ 9ಗಂಟೆಯವರೆಗೆ ಮಾತ್ರ ಅವಕಾಶ. 10ಗಂಟೆಯ ಒಳಗೆ ವ್ಯಾಪಾರಿಗಳು ಮನೆ ಸೇರಿಕೊಳ್ಳಬೇಕು. ಸಾರ್ವಜನಿಕರು ತಮ್ಮ ಮನೆಯ ಸಮೀಪದ ಅಂಗಡಿಗಳಿಂದಲೇ ತರಕಾರಿ ಹಾಗೂ ದಿನಬಳಕೆಯ ಅಗತ್ಯ ವಸ್ತುಗಳನ್ನು ಖರೀದಿಸಬೇಕು. ಅಗತ್ಯ ಔಷಧಿಗಳನ್ನೂ ಹತ್ತಿರದ ಔಷಧಿ ಅಂಗಡಿಯಿಂದಲೇ ಖರೀದಿ ಮಾಡಬೇಕು. ಅನಗತ್ಯ ವಾಹನದಲ್ಲಿ ಓಡಾಟ ನಡೆಸಿದರೆ ವಾಹನ ಸೀಸ್; ಜೊತೆಗೆ ಕಾನೂನು-ನಿಯಮ ಉಲ್ಲಂಘಿಸಿದವರಿಗೆ ಪೊಲೀಸರಿಂದ ಬರೆ ಬಿದ್ದರೂ ಅಚ್ಚರಿ ಇಲ್ಲ. (ದಂಡಂ ದಶಗುಣಂ.) ಜಿಲ್ಲೆಯ ವಿವಿದೆಡೆ ಪೊಲೀಸ್ ಚಕ್ಪೋಸ್ಟ್ ನಿರ್ಮಿಸಿ ಅನಗತ್ಯ ವಾಹನಗಳ ಓಡಾಟಕ್ಕೆ ಬ್ರೇಕ್ ಹಾಕಲು ಕಾನೂನು ಕ್ರಮ. ಇದರೊಂದಿಗೆ ವಿವಾಹ, ಗೃಹಪ್ರವೇಶ, ನಾಮಕರಣ ಸಹಿತ ಜನ ಸೇರುವ ಎಲ್ಲ ಕಾರ್ಯಕ್ರಮಗಳಿಗೆ ಕಡಿವಾಣ. ಇದುವರೆಗೆ ರಾಜ್ಯ ಸರಕಾರದ ಕೋವಿಡ್ ಸುರಕ್ಷತಾ ನಿಯಮಗಳಿಗೆ ಕವಡೆ ಕಾಸಿನ ಕಿಮ್ಮತ್ತು ನೇಡದೇ ತಮ್ಮ ವಾಹನಗಳಲ್ಲಿ ಬೇಕಾಬಿಟ್ಟಿ ತಿರುಗಾಡುತ್ತಿದ್ದ ಸಮಾಜ ಘಾತುಕರಿಗೆ ಮೂಗುದಾರ ತೊಡಗಿಸಲು ಮುಂದಾಗಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾl ಕೆ. ವಿ. ರಾಜೇಂದ್ರ, ಜಿಲ್ಲೆಯಲ್ಲಿ ಕೊರೋನಾ ಚೈನ್ಲಿಂಕ್ ತುಂಡರಿಸಲು ಬಿಗಿ ಕ್ರಮಕ್ಕೆ ಮುಂದಾಗಿರುವುದನ್ನು, ಮನೆಗಳಲ್ಲೇ ಕುಳಿತು ಸರಕಾರದ ಸೂಚನೆ ಪಾಲಿಸಿ, ಕೊರೋನಾ ಸೋಂಕಿನ ವಿರುದ್ಧ ಹೋರಾಡುತ್ತಿರುವ ಜಿಲ್ಲೆಯ 90%ಕ್ಕೂ ಅಧಿಕ ಕಾನೂನು ಗೌರವಿಸುವ ನಾಗರಿಕರು ಸ್ವಾಗತಿಸಿದ್ದಾರೆ.






