ಬೆಳ್ತಂಗಡಿ: ದೇಶದಲ್ಲಿ ಕೊರೋನಾ ಲಸಿಕೆಯ ಪ್ರಥಮ ಮತ್ತು ದ್ವಿತೀಯ ಡೋಸ್ ಪಡೆದ ಕೆಲ ವ್ಯಕ್ತಿಗಳಿಗೂ ಕೊರೋನಾ ಪಾಸಿಟಿವ್ ಬಂದ ವರದಿಗಳು ಮಾಧ್ಯಮಗಳ ಮೂಲಕ ಪ್ರಕಟಗೊಂಡಿದೆ. ಈ ರೀತಿ ಲಸಿಕೆ ಪಡದವರಿಗೂ ಕೊರೋನಾ ಬರಲು ಕಾರಣವೇನು ಎಂಬ ಪ್ರಶ್ನೆಗೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಮೇಲಿನ ದೃಶ್ಯಾವಳಿ ಒಂದು ಹಂತದವರೆಗೆ ಉತ್ತರ ನೀಡುತ್ತದೆ.ಮೇ 10ರಂದು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಕೋವಿಡ್-19 ಲಸಿಕಾ ಕೊಠಡಿಯ ಬಾಗಿಲಲ್ಲಿ ಕಂಡು ಬಂದ ದೃಶ್ಯವಿದು. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸಿ ವೈಯಕ್ತಿಕ ಅಂತರ ಕಾಪಾಡುವ ಮೂಲಕ ಕೊರೋನಾ ಸೋಂಕಿನ ವಿರುದ್ಧ ಇಡೀ ಸಮಾಜ ಸಂಘಟಿತ ಹೋರಾಟ ನಡೆಸಬೇಕಾದ ಅನಿವಾರ್ಯತೆ ಇದೆ. ಈ ಸತ್ಯದ ಅರಿವಿರುವ, ಕೊರೋನಾ ಸೋಂಕಿನಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಲಸಿಕೆಯ ಮೊರೆ ಹೋಗಿರುವ ಮಂದಿ ಸರಕಾರಿ ಆಸ್ಪತ್ರೆಯ ಕೋವಿಡ್-19 ಲಸಿಕಾ ಕೊಠಡಿಯ ಬಾಗಿಲಲ್ಲಿ ವೈಯಕ್ತಿಕ ಅಂತರ ಮರೆತು ಒಬ್ಬರ ಮೇಲೊಬ್ಬರು ಮುಗಿಬಿದ್ದ ದೃಶ್ಯವನ್ನು ಕಂಡಾಗ ಇಲ್ಲಿ ಕೋವಿಡ್ ಲಸಿಕೆ ಪಡೆದು, ಕೊರೋನಾ ಸೋಂಕನ್ನು ಉಚಿತವಾಗಿ ವಿತರಿಸುವ ಕಾರ್ಯಕ್ರಮವಿದೆಯಾ ಎಂಬ ಭಯ ಮೂಡುತ್ತಿದೆ. ತಾಲೂಕು ವೈದ್ಯಾಧಿಕಾರಿ ಡಾl ಕಲಾಮಧು ಇನ್ನಾದರೂ ಎಚ್ಚೆತ್ತು ಇಂತಹ ಅವಾಂತರಗಳನ್ನು ತಪ್ಪಿಸುವುದರ ಜೊತೆಗೆ ಸರಕಾರಿ ಆಸ್ಪತ್ರೆಗಳಲ್ಲಿ ಕೊರೋನಾ ಸೋಂಕಿತರಿಗೆ ಸರಿಯಾದ ಚಿಕಿತ್ಸೆ ಹಾಗೂ ಮನೆಯಲ್ಲಿ ಚಿಕಿತ್ಸೆ ಪಡೆಯುವ ಸೋಂಕಿತರ ಆರೈಕೆಯಲ್ಲಿ ತೊಡಗಿರುವ ದಾದಿಯರು ಮತ್ತು ಆಶಾ ಕಾರ್ಯಕರ್ತೆಯರಿಗೆ ಸೂಕ್ತ ರಕ್ಷಣೆ ನೀಡಲು ಕ್ರಮ ಕೈಗೊಳ್ಳಲಿ.






