ಬೆಳ್ತಂಗಡಿ: ಬೆಳ್ತಂಗಡಿ ನಗರ ಪಂಚಾಯತ್ ವ್ಯಾಪ್ತಿಯ ಸುಧೆಮುಗೇರು ಪರಿಶಿಷ್ಟ ಜಾತಿ ಕಾಲೋನಿ ಪ್ರದೇಶದಲ್ಲಿ ಇತ್ತೀಚೆಗೆ ಹದಿಮೂರು ಕೊರೋನಾ ಪಾಸಿಟಿವ್ ಕಂಡುಬಂದಿರುತ್ತದೆ. ಈ ವಿಷಯವನ್ನರಿತ ಸ್ಥಳೀಯ ನಗರ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ್ ರವರು ಈ ಪ್ರದೇಶಕ್ಕೆ ಭೇಟಿನೀಡಿ ಆ ಪ್ರದೇಶದ ಎಲ್ಲಾ 78 ಮನೆಗಳನ್ನು ಕಂಟೋನ್ಮೆಂಟ್ ಪ್ರದೇಶ ಎಂಬುದಾಗಿ ಘೋಷಣೆ ಮಾಡಿ ಸುಧೆಮುಗೇರು ಪರಿಸರಕ್ಕೆ ಇರುವ ಎಲ್ಲಾ ರಸ್ತೆಗಳನ್ನು ಬಂದ್ ಮಾಡಿಸಿರುತ್ತಾರೆ.ಮೇ 10ರಂದು ಈ ಬಗ್ಗೆ ಮಾಹಿತಿ ಪಡೆದುಕೊಂಡ ಬೆಳ್ತಂಗಡಿ ತಾಲೂಕಿನ ಮಾಜಿ ಶಾಸಕರಾದ ಕೆ.ವಸಂತ ಬಂಗೇರ ಹಾಗೂ ಸಿಪಿಐಎಮ್ ಪಕ್ಷದ ನಾಯಕರಾದ ಶಿವಕುಮಾರ್ ವಕೀಲರು, ರೈತ ಸಂಘದ ಮುಖಂಡರಾದಹರಿದಾಸ್, ವಕೀಲರಾದ ಸುಕನ್ಯಾ, ಕಾಂಗ್ರೆಸ್ ಪಕ್ಷದ ಮುಖಂಡರಾದ ಉದ್ಯಮಿಯಾದ ಎ. ಜೆ. ಅಜೇಯ್ ಜಾಕೋಬ್ ಮತ್ತಿತರರ ಸಹಕಾರದಿಂದ ಸುಧೆಮುಗೇರು ಪರಿಶಿಷ್ಟ ಜಾತಿ ಕಾಲೋನಿಯ ಎಲ್ಲಾ ಮನೆಗಳಿಗೆ ಆಹಾರ ಪದಾರ್ಥಗಳ ಕಿಟ್ ವಿತರಣೆ ಮಾಡಿದರು. ನಗರ ಪ್ರದೇಶದಲ್ಲಿ ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ಅವೈಜ್ಞಾನಿಕ ರೀತಿಯ ಕಂಟೋನ್ಮೆಂಟ್ ವಲಯವನ್ನಾಗಿ ಮಾಡಿರುವ ನಗರ ಪಂಚಾಯತ್ ಮುಖ್ಯಾಧಿಕಾರಿಯವರನ್ನು ತರಾಟೆಗೆ ತೆಗೆದುಕೊಂಡ ಮಾಜಿ ಶಾಸಕ ಕೆ.ವಸಂತ ಬಂಗೇರ,ನಗರ ಪಂಚಾಯತ್ ವತಿಯಿಂದ ಕಂಟೋನ್ಮೆಂಟ್ ವಲಯದ ಎಲ್ಲಾ ಮನೆಗಳಿಗೆ ದಿನನಿತ್ಯ ಎಲ್ಲಾ ಆಹಾರ ಪದಾರ್ಥಗಳನ್ನು ಉಚಿತವಾಗಿ ಕೊಡುವಂತೆ ಒತ್ತಾಯಿಸಿದರು..ಅಲ್ಲದೇ ಸ್ಥಳೀಯರ ಆರೋಗ್ಯದ ಬಗ್ಗೆ ವಿಚಾರಿಸಿದ ಮುಖಂಡರುಗಳು, ಯಾರೂ ಹೆದರಬೇಡಿ ನಾವು ನಿಮ್ಮ ಜೊತೆಗೆ ಇದ್ದೇವೆ ಎಂದು ಧೈರ್ಯ ತುಂಬಿದರು. ಮತ್ತು ಕೊರೊನಾ ಮಹಾಮಾರಿಯನ್ನು ಹೊಡೆದೋಡಿಸಲು ಆರೋಗ್ಯ ಇಲಾಖೆಯ ಎಲ್ಲಾ ಸೂಚನೆಗಳನ್ನು ನಾವೆಲ್ಲರೂ ಪಾಲಿಸಿಕೊಂಡು ಎಲ್ಲರೂ ಸುರಕ್ಷಿತವಾಗಿ ಇರುವ ಎಂದು ಹೇಳಿದರು.ಈ ಸಂಧರ್ಭದಲ್ಲಿ ಸ್ಥಳೀಯ ನಗರ ಪಂಚಾಯತ್ ಸದಸ್ಯ ಜಗದೀಶ್, ದಲಿತ ಹಕ್ಕುಗಳ ಹೋರಾಟ ಸಮಿತಿ ಸದಸ್ಯ ಶೇಖರ್ ಲಾಯಿಲ, ದಸಂಸ ಅಂಬೇಡ್ಕರ್ವಾದ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಬಿ. ಕೆ. ವಸಂತ್ ಬೆಳ್ತಂಗಡಿ, ದಿನೇಶ್ ಕೊಂಡೆಮಾರ್ ಧರ್ಣಪ್ಪ ಕರ್ಕೇರ, ಅಶೋಕ್, ಉಮೇಶ್, ಜನಾರ್ದನ ಸುಧೆಮುಗೇರುಮುಂತಾದವರು ಉಪಸ್ಥತರಿದ್ದುಎಲ್ಲಾ ಮನೆಗಳಿಗೆ ಆಹಾರದ ಕಿಟ್ಗಳನ್ನು ತಲುಪಿಸುವ ವ್ಯವಸ್ಥೆಯನ್ನು ಮಾಡಿದರು.






