ಬೆಳ್ತಂಗಡಿ : ‘ರಕ್ತ ನಮ್ಮ ಬದುಕಿನ ಜೀವರಸ. ರಕ್ತದಾನ ಬದುಕಿನ ಶ್ರೇಷ್ಠ ಕಾರ್ಯಗಳಲ್ಲಿ ಒಂದಾಗಿದ್ದು, ರಕ್ತದಾನದಿಂದ ನಾವು ಬದುಕಿ ಇನ್ನೊಬ್ಬರನ್ನು ಬದುಕಿಸುವ ಸತ್ಕಾರ್ಯವಾಗಿದೆ. ಹಾಗಾಗಿ ಆರೋಗ್ಯವಂತ ವ್ಯಕ್ತಿ ರಕ್ತದಾನ ಮಾಡುವ ಶ್ರೇಷ್ಠ ಮನಸ್ಸನ್ನು ಬೆಳೆಸಿಕೊಂಡಿರಬೇಕು’ ಎಂದು ಮಾಜಿ ಶಾಸಕ ಕೆ. ವಸಂತ ಬಂಗೇರ ಹೇಳಿದರು.ಅವರು ಮೇ 18ರಂದು ಬೆಳ್ತಂಗಡಿ ಶ್ರೀ ಗುರುದೇವ ಪದವಿಪೂರ್ವ ಕಾಲೇಜಿನಲ್ಲಿ ಭಾರತೀಯ ರೆಡ್ ಕ್ರಾಸ್ ಸೊಸೈಟಿ ಬೆಳ್ತಂಗಡಿ ತಾಲೂಕು ಘಟಕ, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಆಸ್ಪತ್ರೆ, ವೈದ್ಯಕೀಯ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆ ಮತ್ತು ಬೆಳ್ತಂಗಡಿ ಶ್ರೀ ಗುರುದೇವ ಎಜುಕೇಶನಲ್ ಟ್ರಸ್ಟ್ ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ಬೃಹತ್ ರಕ್ತದಾನ ಶಿಬಿರದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.ಭಾರತೀಯ ರೆಡ್ಕ್ರಾಸ್ ಸೊಸೈಟಿ ತಾಲೂಕು ಘಟಕದ ಅಧ್ಯಕ್ಷ ಹರಿದಾಸ್ ಎಸ್. ಎಂ. ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಾ, ಕೊರೊನಾದ ಆತಂಕದ ಮಧ್ಯೆಯೂ ರಕ್ತದಾನ ಮಾಡಬೇಕು ಎಂಬುದು ಇನ್ನೊಂದು ಜೀವದ ಮೇಲಿನ ಕಾಳಜಿಯ ಪ್ರತೀಕವಾಗಿದೆ. ರಕ್ತದಾನವೆಂಬುದು ಮಹೋನ್ನತವಾದ ಸೇವಾ ಕಾರ್ಯವಾಗಿದ್ದು, ಜೀವನದುದ್ದಕ್ಕೂ ನಾವು ಮಾಡಿಕೊಂಡು ಬರಬೇಕು’ ಎಂದರು.ವೇದಿಕೆಯಲ್ಲಿ ಡಾl ಜೆ. ಎಲ್. ಭಟ್, ಬ್ಲಡ್ ಬ್ಯಾಂಕ್ ಮಂಗಳೂರು ಇದರ ಸಂಯೋಜಕ ಪ್ರವೀಣ್, ತಾಲ್ಲೂಕು ಘಟಕದ ಕಾರ್ಯದರ್ಶಿ ಯಶವಂತ್ ಪಟವರ್ಧನ್, ವಕೀಲ ಮನೋಹರ್ ಇಳಂತಿಲ, ಶ್ರೀ ಗುರುದೇವ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸುಕೇಶ್ ಕುಮಾರ್, ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಪ್ರವೀಣ್ ಬಿ. ಉಪಸ್ಥಿತರಿದ್ದರು.ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಆಸ್ಪತ್ರೆ ಹಾಗೂ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ಅಧ್ಯಕ್ಷ ಶಿವಕುಮಾರ್ ಎಸ್. ಎಂ. ಸ್ವಾಗತಿಸಿದರು. ಉಪನ್ಯಾಸಕ ಶಮೀವುಲ್ಲಾ ಬಿ. ಎ. ಕಾರ್ಯಕ್ರಮ ನಿರೂಪಿಸಿದರು. ರೆಡ್ಕ್ರಾಸ್ ಬೆಳ್ತಂಗಡಿ ತಾಲೂಕು ಘಟಕದ ಸದಸ್ಯೆ ಆಶಾ ಸುಜಿತ್ ವಂದಿಸಿದರು.ಶಿಬಿರದಲ್ಲಿ 172ರಕ್ತದಾನಿಗಳು ಭಾಗವಹಿಸಿದ್ದರು. 158 ಯುನಿಟ್ ರಕ್ತ ಸಂಗ್ರಹಿಸಲಾಯಿತು. ಶಿಬಿರದುದ್ದಕ್ಕೂ ಸರಕಾರದ ಕೋವಿಡ್ ಸುರಕ್ಷತಾ ಕ್ರಮಗಳನ್ನು ಪಾಲಿಸಿದ ರೀತಿ ಇತರರಿಗೆ ಮಾದರಿಯಾಗಿತ್ತು.








