ಬೆಳ್ತಂಗಡಿ: ದೇಶದ ಕಾರ್ಮಿಕ ವರ್ಗದ ಕೇಂದ್ರವಾಗಿರುವ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು)ನ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಬೆಳ್ತಂಗಡಿ ತಾಲೂಕಿನ ವಿವಿಧೆಡೆ ಧ್ವಜಾರೋಹಣದೊಂದಿಗೆ ಕಾರ್ಯಕ್ರಮವು ಮೇ 30 ರಂದು ನಡೆಯಿತು.ಸಿಐಟಿಯು ಸಂಘಟನೆ ಸ್ಥಾಪನೆಯಾಗಿ ಮೇ 30ಕ್ಕೆ 51 ವರ್ಷಗಳಾಯಿತು. ಈ ಹಿನ್ನೆಲೆಯಲ್ಲಿ ಇಡೀ ದೇಶದಾದ್ಯಂತ ಧ್ವಜಾರೋಹಣದೊಂದಿಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಕೇಂದ್ರ ಸಮಿತಿ ಕರೆ ನೀಡಿತು. ದೇಶದ ವಿವಿಧ ಕ್ಷೇತ್ರದ ಕಾರ್ಮಿಕ ಸಂಘಟನೆಗಳು ಸಿಐಟಿಯು ಜೊತೆಯಲ್ಲಿ ಕಾರ್ಯನಿರ್ವಹಿಸುತ್ತಿದೆ.ಸಿಐಟಿಯುನ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಬೆಳ್ತಂಗಡಿ ತಾಲೂಕಿನ ಬೆಳ್ತಂಗಡಿ ಸಿಐಟಿಯು ಕಛೇರಿ, ಸುದೆಮುಗೇರು, ಕೆಲ್ಲಗುತ್ತು, ನಡ, ನಾವೂರು, ಉಜಿರೆ, ನಿಡ್ಲೆ , ಓಡಿಲ್ನಾಳ, ಲಾಯಿಲ, ಸವಣಾಲು, ಅಳದಂಗಡಿ, ವೇಣೂರು, ಪೆರಾಡಿ,ಸಾವ್ಯ , ಕಳೆಂಜ, ನೆರಿಯ, ಚಾರ್ಮಾಡಿ, ಮಚ್ಚಿನ ಗ್ರಾಮಗಳ ಕಾರ್ಮಿಕರ ಮನೆಮನೆಗಳಲ್ಲಿ ಧ್ವಜಾರೋಹಣ ನಡೆಸಲಾಯಿತು. ಬೆಳ್ತಂಗಡಿ ಕೇಂದ್ರ ಭಾಗದಲ್ಲಿ ನಡೆದ ಕಾರ್ಯಕ್ರಮಗಳನ್ನು ಉದ್ದೇಶಿಸಿ ಮಾತನಾಡಿದ ಸಿಐಟಿಯು ಬೆಳ್ತಂಗಡಿ ತಾಲೂಕು ಅಧ್ಯಕ್ಷ ಹಾಗೂ ನ್ಯಾಯವಾದಿ ಶಿವಕುಮಾರ್ ಎಸ್. ಎಂ. ಇಡೀ ದೇಶವು ಕೋವಿಡ್-19ಗೆ ಬಲಿಯಾಗಿ ದುಡಿಯುವ ವರ್ಗ ಪರದಾಡುತ್ತಿದ್ದರೂ, ಪ್ರಧಾನಿ ನರೇಂದ್ರ ಮೋದಿ ಮಾತ್ರ ನರಸತ್ತವರಂತೆ ವರ್ತಿಸುವ ಮೂಲಕ ಇಡೀ ಜಗತ್ತಿನಲ್ಲಿ ಭಾರತದ ಮಾನ ಮರ್ಯಾದೆ ಕಳೆಯುವ ನೀಚತನದ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ಕಳೆದ ವರ್ಷದ ಲಾಕ್ಡೌನ್ ಹೆಸರಿನಲ್ಲಿ ಕಾರ್ಮಿಕ, ರೈತ ಪರವಾದ ಕಾನೂನುಗಳನ್ನು ಮಾಲೀಕರ, ಬಂಡವಾಳಶಾಹಿಗಳ ಪರವಾಗಿ ಸಂಹಿತೆಗಳಾಗಿ ಸುಗ್ರೀವಾಜ್ಞೆಗಳ ಮೂಲಕ ಜಾರಿಗೆ ತಂದು ದೇಶದ ಸಂಪನ್ಮೂಲಗಳ ಜನಕರಾದ ಕಾರ್ಮಿಕರನ್ನು ಹಾಗೂ ಅನ್ನ ನೀಡುವ ರೈತರನ್ನು ಬೀದಿಗೆಸಯಲಾಗಿದೆ. ಇಂತಹ ಸನ್ನಿವೇಶದಲ್ಲಿ ರೈತ- ಕಾರ್ಮಿಕರ ಸಂಘಟಿತ ಹೋರಾಟ ಅಗತ್ಯವಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಸಿಐಟಿಯು ತಾಲೂಕು ಕಾರ್ಯದರ್ಶಿ ವಸಂತ ನಡ, ಜೊತೆ ಕಾರ್ಯದರ್ಶಿ ರೋಹಿಣಿ ಪೆರಾಡಿ, ಕಾರ್ಮಿಕ ನಾಯಕಿ ಸುಕನ್ಯಾ ಹರಿದಾಸ್, ಸಿಐಟಿಯು ಉಪಾಧ್ಯಕ್ಷ ಶೇಖರ್ ಎಲ್, ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡ ಹರಿದಾಸ್ ಎಸ್. ಎಂ., ಡಿವೈಎಫ್ಐ ಮುಖಂಡರಾದ ಸುಜೀತ್ ಉಜಿರೆ, ಸಂಜೀವ ಆರ್. ಅತ್ತಾಜೆ , ಆಶಾ ಸುಜೀತ್, ಬೋಜ ಪೆರಾಡಿ, ಮಹಿಳಾ ನಾಯಕಿ ಸುಧಾ ರಾವ್, ಎಸ್ಎಫ್ಐ ಮುಖಂಡ ಸುಹಾಸ್ ಬೆಳ್ತಂಗಡಿ, ಸುದೀಪ್ ಬೆಳ್ತಂಗಡಿ ಉಪಸ್ಥಿತರಿದ್ದರು.







