ಬೆಳ್ತಂಗಡಿ: ಪಟ್ರಮೆ ಗ್ರಾಮದ ಬೋಳೋಡಿ ಸಮೀಪ ಕೊಡಂದೂರು ಎಂಬಲ್ಲಿ ತೋಟದ ಪಂಪ್ಶೆಡ್ ಒಳಗೆ ಸಂಭವಿಸಿದ ವಿದ್ಯುದಾಘಾತಕ್ಕೆ ಬೋಳೋಡಿ ನಿವಾಸಿ ಹರೀಶ್ ಗೌಡರ ಪತ್ನಿ ಗೀತಾ (30) ಹಾಗೂ ಕಂದಮ್ಮ ಭವಿಷ್ (4) ಸಾವನ್ನಪ್ಪಿದ ಘಟನೆ ಮೇ 30ರ ಬೆಳಿಗ್ಗೆ ಸಂಭವಿಸಿದೆ.ತಮ್ಮ ತೋಟದ ಮನೆಯಲ್ಲಿದ್ದ ಹಸುಗಳಿಗೆ ನೀರುಣಿಸಲು ಪಂಪ್ನ ಸ್ವಿಚ್ ಹಾಕಲು ಗೀತಾ ತನ್ನ ಮಗುವಿನೊಂದಿಗೆ ಪಂಪ್ಶೆಡ್ಗೆ ತೆರಳಿ ಸ್ವಿಚ್ ಆನ್ ಮಾಡುವ ಸಂದರ್ಭ ಈ ದುರ್ಘಟನೆ ಸಂಭವಿಸಿದೆ ಎಂದು ಸಂದೇಹಿಸಲಾಗಿದೆ. ಪಂಪ್ನ ವಿದ್ಯುತ್ ಸಂಪರ್ಕದ ಮೂರು ಫೇಸ್ನ ಫ್ಯೂಸ್ಗಳ ಪೈಕಿ ಒಂದು ಫ್ಯೂಸ್ನ ಕಟೌಟರ್ ಕೆಳಗೆ ಬಿದ್ದಿತ್ತು ಎನ್ನಲಾಗಿದ್ದು; ಉಳಿದ ಎರಡು ಫ್ಯೂಸ್ಗಳ ಕಟೌಟರ್ ಯಥಾಸ್ಥಾನದಲ್ಲಿ ಇತ್ತು ಎಂದು ತಿಳಿದುಬಂದಿದೆ. ಪಂಪ್ನ ಸ್ವಿಚ್ ಹಾಕಲು ತನ್ನ ಮಗುವಿನೊಂದಿಗೆ ಹೋಗಿದ್ದ ಗೀತಾ, ವಿದ್ಯುತ್ ಪ್ರವಹಿಸುವ ಕಟೌಟ್ನ್ನು ಯಾಕೆ ಮುಟ್ಟಿದರು ಎಂಬುದು ಅನೇಕ ಸಂದೇಹಗಳಿಗೆ ಆಸ್ಪದ ನೀಡಿದ್ದು, ಉತ್ತರ ಸಿಗದ ಪ್ರಶ್ನೆಯಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಧರ್ಮಸ್ಥಳ ಪೊಲೀಸರು ಮಹಜರು ನಡೆಸಿ, ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದಾರೆ.







