ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಸಮುದಾಯ ಆರೋಗ್ಯ ಕೇಂದ್ರದ ವತಿಯಿಂದ ಮಂಜುನಾಥೇಶ್ವರ ಕಲಾಭವನದಲ್ಲಿ ಕೊರೊನ ನಿಯಂತ್ರಣಕ್ಕೆ ಪೂರಕವಾಗಿ ಲಸಿಕಾ ಅಭಿಯಾನ ಕಾರ್ಯ ನಡೆಯುತ್ತಿದ್ದು, ಲಸಿಕೆ ಕೇಂದ್ರದಲ್ಲಿ ಯಾವುದೇ ಚುನಾಯಿತ ಪ್ರತಿನಿಧಿಗಳಲ್ಲದ ಹಲವರು ಅನಧಿಕೃತವಾಗಿ ಸುತ್ತಾಡುತ್ತಿದ್ದು ಹಲವು ಗೊಂದಲ ಹಾಗೂ ಸಂದೇಹಗಳಿಗೆ ಕಾರಣವಾಗಿದೆ. ಈ ಬಗೆಗೆ ಈ ಮೊದಲೇ ಬೆಳ್ತಂಗಡಿ ತಾಲೂಕು ತಹಶೀಲ್ದಾರರಿಗೆ ಲಿಖಿತ ದೂರು ನೀಡಲಾಗಿದ್ದು ಯಾವುದೇ ಕ್ರಮ ಕೈಗೊಂಡಿಲ್ಲ. ಲಸಿಕಾ ಕೇಂದ್ರದ ಡಾಟಾ ಮಾಹಿತಿ ಹಾಗೂ ಗುಪ್ತಸಂಖ್ಯೆಯು ಆರೋಗ್ಯ ಇಲಾಖೆಗೆ ಮಾತ್ರ ತಿಳಿಯಬೇಕಾದುದಾಗಿದ್ದು, ಲಸಿಕಾ ಕೇಂದ್ರದ ಡಾಟಾ ಆಪರೇಟರ್ ಆಗಿ ಕಾರ್ಯನಿರ್ವಹಿಸಬೇಕಾದ ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ಬದಲಾಗಿ ಹೊರಗಿನ ವ್ಯಕ್ತಿಗಳನ್ನು ಉದ್ದೇಶಪೂರ್ವಕವಾಗಿ ಹಾಗೂ ವ್ಯವಸ್ಥಿತವಾಗಿ ನೇಮಿಸಿರುವುದು ಖಂಡನೀಯ ಬೆಳವಣಿಗೆ. ಲಸಿಕೆ ಕೇಂದ್ರದಲ್ಲಿ ಅರ್ಹರಿದ್ದರೂ ಲಸಿಕೆ ಸಿಗದೆ ಜನಸಾಮಾನ್ಯರು ವಾಪಸು ತೆರಳುತ್ತಿರುವ ವಿಧ್ಯಮಾನ ನಡೆಯುತ್ತಿದ್ದು, ತಾಲೂಕಿನ ಜನಸಾಮಾನ್ಯರ, ನಾಗರಿಕರ ಆಕ್ರೋಶ ಕಟ್ಟೆಯೊಡೆದಿದ್ದು ಇಂದು ಬೆಳ್ತಂಗಡಿ ತಾಲೂಕು ಉಭಯ ಬ್ಲಾಕ್ ಕಾಂಗ್ರೆಸ್ ನಿಯೋಗದಿಂದ ಲಸಿಕಾ ಕೇಂದ್ರಕ್ಕೆ ಧಿಡೀರ್ ಭೇಟಿ ನೀಡಲಾಯಿತು. ಆರೋಗ್ಯ ಅಧಿಕಾರಿ ಹಾಗೂ ಸ್ಥಳಕ್ಕೆ ಭೇಟಿ ನೀಡಿದ ಎಸ್ ಐ ನಂದಕುಮಾರ್ರವರು ಸಮಸ್ಯೆಯನ್ನು ಆಲಿಸಿ, ಸೂಕ್ತ ಕ್ರಮ ಕೈಗೊಂಡು ಲಸಿಕಾ ಕೇಂದ್ರದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ಭರವಸೆ ನೀಡಿದರು.ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷರಾದ ಶೈಲೇಶ್ ಕುಮಾರ್ ಕುರ್ತೋಡಿ, ಗ್ರಾಮೀಣ ಅಧ್ಯಕ್ಷರಾದ ರಂಜನ್ ಜಿ. ಗೌಡ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಜಗದೀಶ್ ಡಿ, ಕಾಂಗ್ರೆಸ್ ಜಿಲ್ಲಾ ಸಮಿತಿ ಸದಸ್ಯ ಪ್ರಭಾಕರ್ ಶಾಂತಿಕೋಡಿ, ಕಾಂಗ್ರೆಸ್ ಯುವ ಮುಖಂಡರಾದ ಅಭಿನಂದನ್ ಹರೀಶ್, ತಾಲೂಕು ಎಸ್ಸಿ ಘಟಕದ ಅಧ್ಯಕ್ಷ ಬಿ. ಕೆ. ವಸಂತ್, ಎಪಿಎಂಸಿ ಮಾಜಿ ಅಧ್ಯಕ್ಷ ಭರತ್, ಕೆಪಿಸಿಸಿ ಎಸ್ಸಿ ಘಟಕದ ಸದಸ್ಯ ನಾಗರಾಜ್ ಲಾಯಿಲ, ಸಾಮಾಜಿಕ ಜಾಲತಾಣ ನಗರ ಅಧ್ಯಕ್ಷ ಸಂದೀಪ್ ಎಸ್ ನೀರಲ್ಕೆ ಅರ್ವ, ನಗರ ಪಂಚಾಯತ್ ಸದಸ್ಯ ಜನಾರ್ದನ, ಯುವ ಕಾಂಗ್ರೆಸ್ ಮಾಜಿ ಉಪಾಧ್ಯಕ್ಷ ಸಲೀಂ ಕುವೆಟ್ಟು, ಜಿಲ್ಲಾ ಕಾಂಗ್ರೆಸ್ ಸೇವಾದಳ (ಸಾ.ಜಾ) ಸಂಚಾಲಕ ಗಣೇಶ್ ಕಣಿಯೂರು, ನಗರ ಪಂಚಾಯತ್ ಮಾಜಿ ಸದಸ್ಯ ಮೆಹಬೂಬ್, ಅಜಯ್ ಮಟ್ಲ, ಇಂಟಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ ಗೌಡ ಮತ್ತಿತರರು ಉಪಸ್ಥಿತರಿದ್ದರು.ಕೊರೊನ ಮುಂಜಾಗ್ರತಾ ನಿಯಮಾವಳಿಯ ಪಾಲನೆಯ ಜೊತೆಗೆ ನಾಗರಿಕರ ಆರೋಗ್ಯ ರಕ್ಷೆಯ ಹಿತದಿಂದ ಭೇಟಿ ನೀಡಲಾಗಿದೆ ಹಾಗೂ ಲಸಿಕಾ ಕೇಂದ್ರದಲ್ಲಿ ರಾಜಕೀಯ ಲಾಭ ಗಿಟ್ಟಿಸಲು ಯತ್ನಿಸುತ್ತಿರುವ ಬಿಜೆಪಿ ವಿರುದ್ಧ ವ್ಯಾಪಕ ಜನಾಕ್ರೋಶ ವ್ಯಕ್ತವಾಗಿದೆ.






