ಬೆಳ್ತಂಗಡಿ: ಕೋವಿಡ್ ನಿಯಂತ್ರಣ ಕೇವಲ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಕೆಲಸವಲ್ಲ. ಇದನ್ನು ಮನಗಂಡ ಮಾನವ ಸ್ಪಂದನ ಮತ್ತು ಸಮಾನಮನಸ್ಕ ಸಂಘಟನೆ ನೆಲ್ಯಾಡಿಯವರು ಹಾಗೂ ಇತರ ಸೇವಾಸಂಸ್ಥೆಗಳೂ ಕೋವಿಡ್ ಯುದ್ಧದಲ್ಲಿ ಸರಕಾರದ ಜೊತೆ ಕೈ ಜೋಡಿಸುತ್ತಿದ್ದು, ಸಹಜವಾಗಿ ಮಾನವೀಯ ಸ್ಪಂದನೆ ನೀಡಿದೆ ಎಂದು ವಿಧಾನ ಪರಿಷತ್ ಶಾಸಕ ಪ್ರತಾಪ್ಸಿಂಹ ನಾಯಕ್ ಹೇಳಿದರು.ಮಾನವ ಸ್ಪಂದನ ಕೋವಿಡ್ ಸೋಲ್ಜರ್ಸ್ ತಂಡಹಾಗೂ ಸಿಯೋನ್ ಆಶ್ರಮಕ್ಕೆ ಸಹಕಾರಿಯಾಗುವಂತೆ ಸಮಾನ ಮನಸ್ಕ ವೇದಿಕೆ ನೆಲ್ಯಾಡಿ ವತಿಯಿಂದ ಪರಿಕರಗಳನ್ನು ಬೆಳ್ತಂಗಡಿ ಸರಕಾರಿ ಪ್ರವಾಸಿ ಬಂಗಲೆಯಲ್ಲಿ ಜೂನ್ 11ರಂದು ಹಸ್ತಾಂತರಿಸಿ ಅವರು ಮಾತನಾಡಿದರು.ಮುಖ್ಯ ಅತಿಥಿಯಾಗಿದ್ದ ತಾಲೂಕು ಪಂಚಾಯತ್ ಕಾರ್ಯನಿರ್ಹಹಣಾಧಿಕಾರಿ ಕುಸುಮಾಧರ್ ಮಾತನಾಡಿ, ತಾಲೂಕಿನಲ್ಲಿ ಕೋವಿಡ್ ಸಂಖ್ಯೆಯನ್ನು ಝೀರೋಗೆ ತರಲು ಹಾಗೂ ವ್ಯಾಕ್ಸಿನೇಷನ್ ಬಗ್ಗೆ ಜನಜಾಗೃತಿ ಮೂಡಿಸಲು ಸಂಘಸಂಸ್ಥೆಗಳು ಸಹಕರಿಸಬೇಕು ಎಂದು ವಿನಂತಿಸಿದರು.ಅಧ್ಯಕ್ಷತೆ ವಹಿಸಿದ್ದ ಮಾನವ ಸ್ಪಂದನ ತಂಡದ ಮುಖ್ಯಸ್ಥ ಪಿ. ಸಿ ಸೆಬಾಸ್ಟಿಯನ್ ಮಾತನಾಡಿ, ವ್ಯಾಕ್ಸಿನ್ ಜನಜಾಗೃತಿ ಬಗ್ಗೆ ಗ್ರಾಮಗ್ರಾಮಗಳಲ್ಲಿ ಕಾರ್ಯಾಚರಣೆ ಆರಂಭಿಸಲಾಗುವುದು ಎಂದು ಪ್ರಕಟಿಸಿದರು.ಸಮಾನಮನಸ್ಕ ಸಂಘಟನೆ ಸಾರ್ವಜನಿಕ ಸಂಪರ್ಕಾಧಿಕಾರಿ ಜೋಸ್ ಕೆ. ಜೆ. ಪ್ರಸ್ತಾವನೆಗೈದು, ಕೋವಿಡ್ ಸಂಬಂಧಿತವಾಗಿ ಅಂದಾಜು 14 ಲಕ್ಷ ರೂಪಾಯಿ ಮೌಲ್ಯದ ವಿವಿಧ ಚಟುವಟಿಕೆಗಳನ್ನು ಕೈಗೊಳ್ಳಲಾಗಿದೆ ಎಂದರು.ಸಮಾರಂಭದಲ್ಲಿ ಬೆಥನಿ ವಿದ್ಯಾ ಸಂಸ್ಥೆಗಳ ಸಂಚಾಲಕ ವಂದನೀಯ ವರ್ಗೀಸ್ ಕೈಪನಡ್ಕ, ನೆಲ್ಯಾಡಿ ಸೈಂಟ್ ಅಲ್ಫೋನ್ಸಾ ಚರ್ಚ್ನ ನಿಕಟಪೂರ್ವ ಧರ್ಮಗುರು ವಂದನೀಯ ಆದರ್ಶ್ ಜೋಸೆಫ್, ಸಹಾಯಕ ಧರ್ಮಗುರು ವಂದನೀಯ ಅಬಿಷೇಕ್, ಮಾನವ ಸ್ಪಂದನ ತಂಡದ ಅಕ್ಬರ್ ಬೆಳ್ತಂಗಡಿ, ಉಮೇಶ್ ಗೌಡ, ಪ್ರಸಾದ್ ಶೆಟ್ಟಿ ಏಣಿಂಜ, ನಿಸಾರ್ ಕುದ್ರಡ್ಕ, ಜೈಸನ್ ವೆರ್ನೂರು, ಶರೀಫ್ ಬೆರ್ಕಳ ಹಾಗೂ ಸೈಂಟ್ ಅಲ್ಫೋನ್ಸಾ ಚರ್ಚ್ ಆರ್ಲ ಮತ್ತು ಇಚ್ಲಂಪಾಡಿ ಚರ್ಚ್ ಪ್ರತಿನಿಧಿಗಳಾದ ಸೆಬಾಸ್ಟಿಯನ್, ಥೋಮಸ್, ಜೋಸ್ಟಿನ್ ಮತ್ತು ಜೋಜೋ ಉಪಸ್ಥಿತರಿದ್ದರು. ಕೋವಿಡ್ ಸೋಲ್ಜರ್ಸ್ ತಂಡದ ಕ್ಯಾಪ್ಟನ್ ಅಶ್ರಫ್ ಆಲಿಕುಂಞಿ ಪ್ರಸ್ತಾವನೆಗೈದು ಸ್ವಾಗತಿಸಿದರು. ವಂದನೀಯ ಬಿನೊಯ್ ವಂದನಾರ್ಪಣೆಗೈದರು.






