ಬೆಳ್ತಂಗಡಿ: ಸಾಂಕ್ರಾಮಿಕ ಕಾಯಿಲೆ ಕೋವಿಡ್ 19 ಸುಳಿಯಲ್ಲಿ ಇಡೀ ವಿಶ್ವವೇ ನರಳುತ್ತಿರುವ ಸಂಕೀರ್ಣ ಕಾಲಘಟ್ಟದಲ್ಲಿ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುತ್ತಿರುವ ರಾಷ್ಟ್ರದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆಂಬಲವಾಗಿ ನಿಲ್ಲಬೇಕಿದ್ದ ಜವಾಬ್ದಾರಿಯುತ ರಾಜಕೀಯ ಪಕ್ಷವಾದ ಕಾಂಗ್ರೆಸ್ ಪೆಟ್ರೋಲ್ ನಾಟೌಟ್ 100 ಎಂಬ ಪ್ರಹಸನ ಮಾಡಿಕೊಂಡು ಕೇಕ್ ಕಟ್ ಮಾಡಿ ಇತರರಿಗೆ ಹಂಚಿ ಸಂಭ್ರಮಿಸುತ್ತಿರುವುದು ಆರರಿಂದ ಏಳು ದಶಕಗಳ ಕಾಲ ರಾಷ್ಟ್ರವನ್ನಾಳಿದ ರಾಜಕೀಯ ಪಕ್ಷವೊಂದು ನೈತಿಕ ಪತನದತ್ತ ಸಾಗುತ್ತಿರುವ ದಿಕ್ಸೂಚಿಯಾಗಿದೆ ಎಂದು ಬೆಳ್ತಂಗಡಿ ಬಿಜೆಪಿ ತಿಳಿಸಿದೆ.ಬಿಜೆಪಿ ಹಿಂದೆ ವಿರೋಧ ಪಕ್ಷದಲ್ಲಿದ್ದ ಸಂದರ್ಭದಲ್ಲಿ ರಾಷ್ಟ್ರದಲ್ಲಿ ಕ್ಷೋಭೆ, ಪ್ರವಾಹ, ಕ್ಷಾಮ, ಯುದ್ಧಗಳ ಸಂದರ್ಭದಲ್ಲಿ ಅಂದಿನ ನಮ್ಮ ನಾಯಕರಾಗಿದ್ದ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಆಡಳಿತ ನಡೆಸುವ ಸರಕಾರದ ಮನೋಸ್ಥೈರ್ಯ ಹೆಚ್ಚಿಸಿದ್ದರು. ಜಗತ್ತಿನ ತೈಲ ಮಾರುಕಟ್ಟೆಯ ದರ ವೈಪರಿತ್ಯದ ಹಿನ್ನೆಲೆಯಲ್ಲಿ ಪೆಟ್ರೋಲಿಯಂ ಇಲಾಖೆ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದು, ನಿಗಮದಿಂದ ಮಾರಾಟವಾಗುತ್ತಿರುವ ಹನಿಹನಿ ಪೆಟ್ರೋಲ್ ಉತ್ಪನ್ನಗಳು ಪಾರದರ್ಶಕವಾಗಿದ್ದು, ದೇಶದ ಆರ್ಥಿಕತೆಗೆ ಬಲ ತಂದುಕೊಡುತ್ತದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪೆಟ್ರೋಲಿಯಂ ಇಲಾಖೆಯಲ್ಲಿ ಪೆಟ್ರೋಲ್ ಬಂಕ್, ಗ್ಯಾಸ್ ಏಜೆನ್ಸಿ ವಿತರಣೆ, ಕಲ್ಲಿದ್ದಲು ಇಲಾಖೆಯಲ್ಲಿ ಬ್ಲಾಕ್ ಹಂಚಿಕೆಯಲ್ಲಿ ಲಕ್ಷಾಂತರ ಕೋಟಿ ರೂಪಾಯಿಗಳ ಅವ್ಯವಹಾರ ನಡೆದಿತ್ತು. ಇಂದು ಆ ಇಲಾಖೆಯಲ್ಲಿನ ಕೊರತೆಯನ್ನು ಸಮರ್ಥವಾಗಿ ಸರಿದೂಗಿಸಿ ಬಂದ ಆದಾಯದಿಂದ ಕೋರೋನ ನಿರ್ವಹಣೆಗೆ ಲಸಿಕೆಯು ಸೇರಿ ನರೇಂದ್ರ ಮೋದಿ ಸರಕಾರ ಖರ್ಚು ಮಾಡುತ್ತಿರುವುದು ಕೇಕ್ ಕಟ್ ಮಾಡಿಸಿ ತಿನ್ನುವವರು ಅರಿತುಕೊಳ್ಳಲಿ. ಕೊರೋನಾ ನಿರೋಧಕ ಲಸಿಕೆಯನ್ನು ರಾಷ್ಟ್ರದ ಪ್ರಧಾನಿಯು ಸೇರಿದಂತೆ ಒಂದು ವ್ಯವಸ್ಥೆಯಡಿ ಇಡೀ ರಾಷ್ಟ್ರದಲ್ಲಿ ಪಕ್ಷ-ಜಾತಿಭೇದವಿಲ್ಲದೆ ವಿತರಿಸುತ್ತಿರುವುದು ಶ್ಲಾಘನೀಯವಾಗಿದೆ. ಬೆಳ್ತಂಗಡಿ ಕಾಂಗ್ರೆಸ್ಸಿನ ಮುಖಂಡರು ಈ ವ್ಯವಸ್ಥೆಯಲ್ಲಿ ಲಸಿಕೆ ಪಡೆದುಕೊಂಡಿರುವುದು ದೃಢವಾಗಿದ್ದು ಇದು ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಎಂಬ ಸರ್ಕಾರದ ದ್ಯೇಯ ವಾಕ್ಯ ನಮಲ್ಲಿಯೂ ಪರಿಪಾಲನೆಯಾಗುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಇಷ್ಟೆಲ್ಲಾ ಪ್ರಯತ್ನಗಳ ನಡುವೆ ಪ್ರಚಾರಕ್ಕಾಗಿಯೋ ಅಥವಾ ಕೀಳುಮಟ್ಟದ ರಾಜಕೀಯಕ್ಕಾಗಿಯೋ ವಿಘ್ನ ಸಂತೋಷಿಗಳಂತೆ ಕೇಕ್ ಕಟ್ ಮಾಡಿ ಪ್ರಧಾನಿಯವರ ಭಾವಚಿತ್ರಕ್ಕೆ ಅವಮಾನ ಮಾಡಿದ ಕಾಂಗ್ರೆಸ್ಸಿನ ವರ್ತನೆ ನಿಜಕ್ಕೂ ಖಂಡನೀಯ. ಕಡಿಮೆ ಅವಧಿಯಲ್ಲಿ ಲಸಿಕೆ ತಯಾರಿಸಿ ಸಮರ್ಪಕವಾಗಿ ವಿತರಿಸುತ್ತಿರುವ ಭಾರತ ನಿಜಕ್ಕೂ ವಿಶ್ವಗುರು. ಪ್ರಧಾನಿ ಮೋದಿಯವರು ಯಾರಿಂದಲೂ ಔಟ್ ಮಾಡಲಾಗದ ಅಜೇಯರೆಂದು ಬಿಜೆಪಿ ಬೆಳ್ತಂಗಡಿ ಮಂಡಲ ಅಧ್ಯಕ್ಷರಾದ ಜಯಂತ ಕೋಟ್ಯಾನ್ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.





