ಬೆಳ್ತಂಗಡಿ: ರಾಜ್ಯದ ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಬೆಳ್ತಂಗಡಿ ತಾಲೂಕಿನ ಜನರ ಆರೋಗ್ಯ ಕಾಪಾಡುವ ಮಹದುದ್ಧೇಶದಿಂದ ಇಲ್ಲಿನ ಸರಕಾರಿ ಆಸ್ಪತ್ರೆಗೆ 5ಆಕ್ಸಿಜನ್ ಕಾನ್ಸನ್ಟ್ರೇಟರ್ಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಈ ಕೊಡುಗೆಯಿಂದ ಸರಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಪೀಡಿತರಿಗೆ ಹೆಚ್ಚಿನ ಪ್ರಯೋಜನವಾಗಲಿದೆ. ಈಗಾಗಲೇ ಬೇರೆಬೇರೆ ದಾನಿಗಳು ಇಲ್ಲಿನ ಆಸ್ಪತ್ರೆಗೆ ಸಾಕಷ್ಟು ಸೌಲಭ್ಯ-ಸಲಕರಣೆಗಳನ್ನು ಕೊಡುಗೆಯಾಗಿ ನೀಡಿದ್ದು, ಇದೀಗ ಆಕ್ಸಿಜನ್ ಘಟಕವೂ ಲೋಕಾರ್ಪಣೆಗೆ ಸಿದ್ಧವಾಗಿದೆ. ಸುಮಾರು 50ಬೆಡ್ಗಳಿಗೆ ಆಕ್ಸಿಜನ್ ಪೂರೈಸುವ ವ್ಯವಸ್ಥೆಯೊಂದಿಗೆ ಕೊರೋನಾ 3ನೇ ಅಲೆ ಎದುರಿಸಲು ಸರ್ವ ರೀತಿಯಿಂದಲೂ ಈ ಆಸ್ಪತ್ರೆ ಸಜ್ಜಾಗಲಿದೆ ಎಂದು ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜ ಹೇಳಿದರು.ಅವರು ಜೂನ್ 22ರಂದು ಬೆಳ್ತಂಗಡಿಯ ‘ಶ್ರಮಿಕ’ ಶಾಸಕರ ಕಛೇರಿಯಲ್ಲಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ರಾಜ್ಯದ ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾl ಅಶ್ವಥ್ ನಾರಾಯಣ್ ಕೊಡಮಾಡಿದ 5ಆಕ್ಸಿಜನ್ ಕಾನ್ಸನ್ಟ್ರೇಟರ್ಗಳನ್ನು ತಾಲೂಕು ಆರೋಗ್ಯಾಧಿಕಾರಿ ಡಾl ಕಲಾಮಧು ಅವರಿಗೆ ಹಸ್ತಾಂತರಿಸಿ, ಮಾತನಾಡುತ್ತಿದ್ದರು.ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾl ವಿದ್ಯಾವತಿ, ಪಡಂಗಡಿ ಗ್ರಾಮ ಪಂಚಾಯತ್ ಸದಸ್ಯ ಹರೀಶ್ ಕೋಟ್ಯಾನ್, ಬೆಳ್ತಂಗಡಿ ತಾಲೂಕು ಪಂಚಾಯತ್ ಮಾಜಿ ಸದಸ್ಯ ಜೋಯಲ್ ಗೋಡ್ಫ್ರೀ ಮೆಂಡೊನ್ಸಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.






