ಉಜಿರೆ: ಬೆಳ್ತಂಗಡಿ ರೋಟರಿ ಕ್ಲಬ್ ಕಳೆದ ಸಾಲಿನಲ್ಲಿ ಕೊರೊನ ಸಂಕಷ್ಟದ ಸಂದರ್ಭದಲ್ಲೂ ಸವಾಲುಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸಿ, ಉತ್ತಮ ಜನೋಪಯೋಗಿ ಕಾರ್ಯಕ್ರಮಗಳಿಂದ ಉನ್ನತ ಮಟ್ಟದ ವಿಶೇಷ ಸಾಧನೆ ಮಾಡಿ ರಾಷ್ಟ್ರದಲ್ಲೇ ಮೊದಲ ಸ್ಥಾನ ಪಡೆದು, ರೋಟರಿ ಜಿಲ್ಲೆಗೇ ಮಾದರಿಯಾಗಿದೆ ಎಂದು ರೋಟರಿ ಜಿಲ್ಲೆ 3181 ರ ನಿಯೋಜಿತ ಜಿಲ್ಲಾ ಗವರ್ನರ್ ಪ್ರಕಾಶ ಕಾರಂತ ಹೇಳಿದರು ಅವರು ಜುಲೈ 1ರಂದು ಬೆಳ್ತಂಗಡಿ ರೋಟರಿ ಸೇವಾ ಭವನದಲ್ಲಿ ನಡೆದ ರೋಟರಿ ಕ್ಲಬ್ನ 51ನೇ ವರ್ಷದ ಪದಗ್ರಹಣ ಸಮಾರಂಭದಲ್ಲಿ 2021-22ನೇ ಸಾಲಿನ ನೂತನ ಪದಾಧಿಕಾರಿಗಳಿಗೆ ಪದಪ್ರಧಾನ ಗೈದು ಶುಭಾಶಂಸನೆಯ ಮಾತಗಳನ್ನಾಡುತ್ತಿದ್ದರು. ಕ್ಲಬ್ಸು ವರ್ಣವರ್ಷದಲ್ಲಿ 1000ಕ್ಕೂ ಹೆಚ್ಚು ಜನಹಿತ ಕಾರ್ಯಕ್ರಮಗಳನ್ನು ಆಯೋಜಿಸಿ ಯಾರೂ ಮಾಡಿರದ ವಿಶೇಷ ಸಾಧನೆ ಮಾಡಿರುವುದು ನಂಬಲಸಾಧ್ಯ ವಿಚಾರವಾಗಿದೆ. ಮಾನವೀಯ ಧರ್ಮ ಅತ್ಯಂತ ಶ್ರೇಷ್ಠವಾದುದು. ಬಡವರು, ಅರ್ಹರಿಗೆ ಮಾಡಿದ ಸೇವೆಯನ್ನು ಸಮಾಜ ಗುರುತಿಸುತ್ತದೆ. ಸುವರ್ಣ ಸೌಧ ನಿರ್ಮಾಣ, ವಾಟರ್ ಬ್ಯಾಂಕ್, ಜಲಸಂವರ್ಧನೆ, ಸಮುದಾಯ ಸೇವೆ, ಅರೋಗ್ಯ ಶಿಬಿರ ಮೊದಲಾದ ಕಾರ್ಯಕ್ರಮಗಳನ್ನು ಸಂಘಟಿಸಿ; ಅಂತಾರಾಷ್ಟ್ರೀಯ ರೋಟರಿ ನ್ಯೂಸ್ ಪತ್ರಿಕೆ ಯಲ್ಲಿ ಪ್ರಚುರ ಗೊಂಡಿರುವುದು ಅವಿಸ್ಮರಣೀಯ ಸಾಧನೆಯಾಗಿದೆ ಎಂದರು. ಬೆಳ್ತಂಗಡಿ ರೋಟರಿ ಕ್ಲಬ್ಗೆ ಜಿಲ್ಲೆಯಲ್ಲೇ ವಿಶಿಷ್ಟ ಸ್ಥಾನಮಾನವಿದೆ. ಕ್ಲಬ್ನಲ್ಲಿ ಜಿಲ್ಲಾ ಗವರ್ನರ್ ಆಗಲು ಸೂಕ್ತ ಸದಸ್ಯರಿದ್ದಾರೆ. ಆ ಭಾಗ್ಯ ಕ್ಲಬ್ಗೆ ಒದಗಿಬರಲಿ. ಮುಂದಿನ ರೋಟರಿ ವರ್ಷದಲ್ಲಿ ಸದಸ್ಯತನ ಅಭಿವೃದ್ಧಿ ಹಾಗೂ ಸಂಕಷ್ಟದಲ್ಲಿರುವವರಿಗೆ ನೆರವಾಗಲು ಅನುಕೂಲವಾಗುವಂತೆ ರೋಟರಿ ಫೌಂಡಶನ್ನ್ನು ಗಟ್ಟಿಗೊಳಿಸುವ ಜವಾಬ್ದಾರಿ ನಿಮ್ಮ ಮೇಲಿದೆ. ಮುಂಡಾಜೆ/ಉಜಿರೆಯಲ್ಲಿ ಹೊಸ ಕ್ಲಬ್ ಪ್ರಾರಂಭಿಸಿ, ಪರಿಸರಕ್ಕೆ ನಮ್ಮದೇ ಕೊಡುಗೆಯಾಗಿ ಸ್ಮಶಾನ ಅಭಿವೃದ್ಧಿ, ಮಿಯಾವಾಕಿ ಅರಣ್ಯ ಯೋಜನೆ ಆರಂಭಿಸುವ ಮೂಲಕ ಜನರ ಪ್ರೀತಿ, ಮೆಚ್ಚುಗೆಗೆ ಪಾತ್ರವಾಗಿ ಆಶೋತ್ತರಗಳು ಈಡೇರಲೆಂದು ಆಶಿಸಿ ಶುಭಾಶಂಸನೆಗೈದರು. ವಲಯ 4ರ ಸಹಾಯಕ ಗವರ್ನರ್ ಸುರೇಂದ್ರ ಕಿಣಿ ರೋಟರ್ ಬುಲೆಟಿನ್ ಬಿಡುಗಡೆಗೊಳಿಸಿ, ಕ್ಲಬ್ ವಿಶಾಲ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಜಿಲ್ಲಾ ಯೋಜನೆಗಳನ್ನು ಅನುಷ್ಠಾನಗೊಳಿಸಿ ಸಾಮಾಜಿಕ ಸೇವಾ ಕಾರ್ಯಗಳಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುವಂತಾಗಲಿ ಎಂದು ಶುಭ ಹಾರೈಸಿದರು. ನಿಕಟಪೂರ್ವ ಸಹಾಯಕ ಗವರ್ನರ್ ಹಾಗೂ ವಿಧಾನ ಪರಿಷತ್ ಸದಸ್ಯ ಪ್ರತಾಪ್ಸಿಂಹ ನಾಯಕ್ ಮಾತನಾಡಿ, ಪ್ರತಿ ವ್ಯಕ್ತಿಗೂ ಅವರದೇ ಅದ ವ್ಯಕ್ತಿತ್ವವಿದೆ. 50ವರ್ಷದ ಕ್ಲಬ್ನ ಸಾಧನೆಯಲ್ಲಿ ಅಧ್ಯಕ್ಷರು ಹಾಗೂ ಸದಸ್ಯರ ಪರಿಶ್ರಮವಿದೆ. ರೋಟರಿ ಜಿಲ್ಲೆಯಲ್ಲಿ ಕ್ಲಬ್ ಆದರ್ಶ ಜೀವನ ಮೌಲ್ಯ, ಸೇವೆ ಮತ್ತು ಸ್ನೇಹದಲ್ಲಿ ಬೆಳೆಸಿಕೊಂಡು ಬಂದಿದೆ. ಅದನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ ಎಂದರು. ಸುವರ್ಣವರ್ಷದ ಕ್ಲಬ್ನ 51ನೇ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಶರತ್ಕೃಷ್ಣ ಪಡುವೆಟ್ನಾಯರು ಮಾತನಾಡಿ, ಜೀವನದ ಅವಿಸ್ಮರಣೀಯ ಕ್ಷಣವಾಗಿದ್ದು ನನ್ನ ಜವಾಬ್ದಾರಿ, ಕರ್ತವ್ಯದ ಗುರುತರ ಅರಿವಿದೆ. ಪರಿವರ್ತನೆಯ ಸಕಾಲದಲ್ಲಿ ಎಲ್ಲ ನಿರ್ದೇಶಕರ ಸಹಕಾರದಿಂದ ಜವಾಬ್ದಾರಿಯನ್ನು ಸುಸೂತ್ರವಾಗಿ ನಿರ್ವಹಿಸಲು ಶಕ್ತಿ ನೀಡಲೆಂದು ಆಶಿಸಿದರು. ಕ್ಲಬ್ಗೆ ನೂತನ ಸದಸ್ಯರಾಗಿ ಗೋಪಾಲಕೃಷ್ಣ ಗುಲ್ಲೋಡಿ, ವಿದ್ಯಾಕುಮಾರ್ ಕಾಂಚೋಡು, ತ್ರಿವಿಕ್ರಮ ಹೆಬ್ಬಾರ್ ಮತ್ತು ಡಾl ಔದ್ರಾಮ ಅವರನ್ನು ಸೇರ್ಪಡೆಗೊಳಿಸಲಾಯಿತು. ಯೋಗೀಶ್ ಭಿಡೆ ನೂತನ ನಿರ್ದೇಶಕ ಮಂಡಳಿಯನ್ನು ಪರಿಚಯಿಸಿ, ಅವರನ್ನು ಗೌರವಿಸಲಾಯಿತು. ಮಿಥುನ್ ಮಾಡ್ತಾ, ಡಾ. ಜಯಕುಮಾರ್ ಶೆಟ್ಟಿ, ಶ್ರವಣ್ ಕಾಂತಾಜೆ ಮತ್ತು ಶ್ರೀನಾಥ್ ಕೆ. ಎಂ. ಅತಿಥಿಗಳು ಹಾಗು ನೂತನ ಸದಸ್ಯರನ್ನು ಪರಿಚಯಿಸಿದರು. ಸುವರ್ಣ ವರ್ಷದ ಅಧ್ಯಕ್ಷ ಬಿ. ಕೆ. ಧನಂಜಯ ರಾವ್ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿ, ಕ್ಲಬ್ನ ಸುವರ್ಣ ಮಹೋತ್ಸವದ ಸವಾಲಿನ ವರ್ಷದಲ್ಲಿ ಸಾವಿರ (ಸಾವು+ಇರದ)ಕ್ಕೂ ಹೆಚ್ಚು ಸಮಾಜಮುಖಿ ಕಾರ್ಯಕ್ರಮಗಳನ್ನು ಎಲ್ಲರ ಸಹಕಾರದೊಂದಿಗೆ ನಡೆಸಿರುವುದು ಅವಿಸ್ಮರಣೀಯ ಸೇವೆಯಾಗಿದೆ. ಸಹಯೋಗ ನೀಡಿದ ಸದಸ್ಯರು, ಸಂಘಸಂಸ್ಥೆಗಳು, ದಾನಿಗಳನ್ನು ಕೃತಜ್ಞತೆಯಿಂದ ಸ್ಮರಿಸಿಕೊಂಡರು. ರೋಟರಿ ಸೇವಾ ಭವನ ನಿರ್ಮಿಸಿದ ರೋಟರಿ ಟ್ರಸ್ಟ್ ಗೆ ರೂಪಾಯಿ 70000/ವನ್ನು ಟ್ರಸ್ಟ್ ಅಧ್ಯಕ್ಷ ಎಂ. ವಿ. ಭಟ್ ಅವರಿಗೆ ಹಾಗೂ ಒಂದು ಮನೆ ನಿರ್ಮಾಣಕ್ಕೆ ರೂ15,000/- ವೈಯಕ್ತಿಕ ನೆರವನ್ನು ಕೋಶಾಧಿಕಾರಿ ಮಿಥುನ್ ಮಾಡ್ತಾ ಅವರಿಗೆ ಹಸ್ತಾಂತರಿಸಿದರು. ಕಾರ್ಯದರ್ಶಿ ಶ್ರೀಧರ್ ಕೆ. ವಿ. ವರ್ಷದ ಕಾರ್ಯಕ್ರಮಗಳ ವರದಿ ಮಂಡಿಸಿದರು. ಡಾ. ಜಯಕುಮಾರ ಶೆಟ್ಟಿ ಮತ್ತು ಮನೋರಮಾ ಭಟ್ ಕಾರ್ಯಕ್ರಮ ನಿರೂಪಿಸಿ, ನೂತನ ಕಾರ್ಯದರ್ಶಿ ಅಬೂಬಕ್ಕರ್ ವಂದಿಸಿದರು. ಅನ್ಸ್ಕ್ಲಬ್ ಅಧ್ಯಕ್ಷೆ ಡಾl ದೀಪಾಲಿ ಡೋಂಗ್ರೆ, ಕಾರ್ಯದರ್ಶಿ ಡಾl ಸುಷ್ಮಾ ಡೋಂಗ್ರೆ, ನೂತನ ಅಧ್ಯಕ್ಷೆ ನವೀನ ಜಯಕುಮಾರ್ ಮತ್ತು ಕಾರ್ಯದರ್ಶಿ ಭಾರತೀ ಜಿ. ಕೆ. ಅವರನ್ನು ಗೌರವಿಸಲಾಯಿತು. ವರ್ಚುವಲ್ ಸಮಾರಂಭವನ್ನು ಯೂ ಪ್ಲಸ್ ವಾಹಿನಿ ಮೂಲಕ ನೇರಪ್ರಸಾರದಲ್ಲಿ ಬಿತ್ತರಿಸಲಾಯಿತು.






