ಬೆಳ್ತಂಗಡಿ: ಯಕ್ಷಗಾನ, ಭರತನಾಟ್ಯ ಸಹಿತ ಸಾಂಸ್ಕೃತಿಕ ರಂಗಕಲೆಗಳಲ್ಲಿ ಗುರು-ಶಿಷ್ಯ ಪರಂಪರೆ ಇಂದಿಗೂ ಜಾಗೃತವಾಗಿದೆ. ಗುರು-ಶಿಷ್ಯ ಪರಂಪರೆ ಭಾರತೀಯ ಸಂಸ್ಕೃತಿ ಎಂದು ಹಿರಿಯ ಯಕ್ಷಗಾನ ಗುರು ಮೋಹನ ಬೈಪಾಡಿತ್ತಾಯ ಹೇಳಿದರು. ಪುತ್ತೂರು ಬಪ್ಪಳಿಗೆ ಅಗ್ರಹಾರ ನಿವಾಸದಲ್ಲಿ ಜುಲೈ 8ರಂದು ತಮ್ಮ ಶಿಷ್ಯ ಹಾಗು ಯಕ್ಷಗಾನ ಕಲಾವಿದ ಪಿ. ಜಿ. ಜಗನ್ನಿವಾಸ ರಾವ್ ಮನೆಯವರು ನೀಡಿದ ಪುತ್ತೂರು ಗೋಪಣ್ಣ ಗೌರವ ಸಮ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದರು. ಮೂಲತಃ ಕಡಬದವರಾಗಿ ಪ್ರಸ್ತುತ ಉಜಿರೆಯಲ್ಲಿ ನೆಲೆಸಿರುವ ಯಕ್ಷಗುರು ಹಾಗೂ ಹಿಮ್ಮೇಳ ಕಲಾವಿದ ಮೋಹನ ಬೈಪಾಡಿತ್ತಾಯ ಅವರನ್ನು ಸಮ್ಮಾನಿಸಿದ ಪುತ್ತೂರು ನಗರ ಸಭಾಧ್ಯಕ್ಷ ಜೀವಂಧರ್ ಜೈನ್ ಮಾತನಾಡಿ, ಗುರುವನ್ನು ಗೌರವಿಸುವುದು ಉತ್ತಮ ಸಂಸ್ಕಾರ. ಗುರುವಿನ ಬೆಂಬಲವಿದ್ದರೆ ಯಾವುದೇ ವ್ಯಕ್ತಿಯು ಜೀವನದ ಗುರಿಯನ್ನು ತಲುಪಲು ಸಾಧ್ಯ ಎಂದದರು. ಮೋಹನ ಬೈಪಡಿತ್ತಾಯರನ್ನು ಶಾಲು ಹೊದಿಸಿ, ಮಾಲಾರ್ಪಣೆಗೈದು, ಸ್ಮರಣಿಕೆ, ಸಮ್ಮಾನಪತ್ರ ಹಾಗೂ ಗೌರವನಿಧಿ ಸಮರ್ಪಿಸಿ ಸಮ್ಮಾನಿಸಲಾಯಿತು. ಕಟೀಲು ಮೇಳದ ಭಾಗವತ ಪುತ್ತೂರು ರಮೇಶ್ ಭಟ್ ಸಮ್ಮಾನ ಪತ್ರ ವಾಚಿಸಿದರು. ಪದ್ಯಾಣ ಶಂಕರನಾರಾಯಣ ಭಟ್, ರಮಾನಂದ ನೆಲ್ಲಿತ್ತಾಯ ಮತ್ತಿತರರು ಉಪಸ್ಥಿತರಿದ್ದರು. ಪಿ. ಜಿ. ಜಗನ್ನಿವಾಸ ರಾವ್ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು., ವೈಷ್ಣವಿ ಜೆ. ರಾವ್ ವಂದಿಸಿದರು. ಕಲಾವಿದ ಹರೀಶ್ ಬಳಂತಿಮೊಗರು ಕಾರ್ಯಕ್ರಮ ನಿರೂಪಿಸಿದರು.







