ಬೆಳ್ತಂಗಡಿ: ಸ್ವಚ್ಛತೆ ಮನೆಯಿಂದಲೇ ಆರಂಭವಾಗಬೇಕು. ಮಕ್ಕಳಿಗೆ ತಾವು ಬಳಸಿದ ಲೋಟ, ತಟ್ಟೆ, ಬಟ್ಟೆಯನ್ನು ತಾವೇ ತೊಳೆಯಲು ಹಾಗೂ ತಾವೇ ಸ್ನಾನ ಮಾಡಿಕೊಳ್ಳಲು ಅಭ್ಯಾಸ ಮಾಡಿಸಬೇಕು. ಸರಕಾರವೇ ಎಲ್ಲವನ್ನೂ ಮಾಡಲಾಗುವುದಿಲ್ಲ. ವೈಯಕ್ತಿಕ ಸ್ವಚ್ಛತೆ ನಾವೇ ಮಾಡಬೇಕು. ಆಗ ಸ್ವಚ್ಛ ಭಾರತ ಸಂಕಲ್ಪ ಸಾಕಾರಗೊಳ್ಳುವುದು ಎಂದು ಉಜಿರೆ ಗ್ರಾಮ ಪಂಚಾಯತ್ ಸುವರ್ಣ ಸೌಧದಲ್ಲಿ ಸೆಪ್ಟೆಂಬರ್ 30ರಂದು ನಡೆದ ಗ್ರಾಮಸ್ಥರ ಸ್ವಚ್ಛತಾ ಸಂವಾದ ಕಾರ್ಯಕ್ರಮದಲ್ಲಿ ಗ್ರಾಮಸ್ಥರ ಅಭಿಪ್ರಾಯ ವ್ಯಕ್ತಗೊಂಡಿತು. ಅಧ್ಯಕ್ಷತೆ ವಹಿಸಿದ್ದ ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಾವತಿ ಆರ್. ಶೆಟ್ಟಿ ಮಾತನಾಡಿ ದೇಶದ ಸ್ವಾತಂತ್ರ್ಯದ 75ನೇ ವರ್ಷದಲ್ಲಿ ಉಜಿರೆ ಗ್ರಾಮ ಪಂಚಾಯತ್ 75 ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಿದ್ದು, ಪಂಚಾಯತ್ ಸದಸ್ಯರು, ಸಿಬ್ಬಂದಿವರ್ಗದ ಸಹಕಾರದಿಂದ ಸ್ವಚ್ಛತೆ ಬಗ್ಗೆ ಜಾಗೃತಿ ಹಾಗು ಮಾಹಿತಿ ಕಾರ್ಯಕ್ರಮ, ಮಕ್ಕಳ ಪ್ರತಿಭೆ ಗುರುತಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆಯೆಂದು ತಿಳಿಸಿದರು. ಉಪಾಧ್ಯಕ್ಷ ರವಿಕುಮಾರ್ ಬರಮೇಲು ಮಾತನಾಡಿ ಸ್ವಚ್ಛತೆ ಕೇವಲ ಗ್ರಾಮ ಪಂಚಾಯತ್ನ ಜವಾಬ್ದಾರಿ ಮಾತ್ರವಲ್ಲ. ಸಣ್ಣ ಮಕ್ಕಳಿಗೆ ಹಿರಿಯರು ಮನೆಯಲ್ಲೇ ಕಲಿಸಿಕೊಟ್ಟರೆ ಹಂತ ಹಂತವಾಗಿ ಮಕ್ಕಳಿಗೆ ಅಭ್ಯಾಸವಾಗುತ್ತದೆ. ಸ್ವಚ್ಛತೆ ಪ್ರತಿಯೊಬ್ಬನ ಜವಾಬ್ದಾರಿಯಾಗಿ ಸ್ವಚ್ಛ ಗ್ರಾಮ ರಾಷ್ಟ್ರಕ್ಕೆ ಮಾದರಿಯಾಗಲಿ ಎಂದರು. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ ಶೆಟ್ಟಿ ನೊಚ್ಚ ಸ್ವಚ್ಛತೆ ನಿರ್ವಹಣೆಗೆ ಯಾವುದೇ ಅರ್ಹತೆ ಅಗತ್ಯವಿಲ್ಲ. ಪ್ರತಿಯೊಬ್ಬರೂ ಕೈಜೋಡಿಸಿ ಸ್ವಚ್ಛತಾ ಕೆಲಸ ಸೇವೆಯೆಂದು ಗುರುತಿಸಿ ತೊಡಗಿಸಿಕೊಂಡರೆ ಯಾವುದೇ ಕಷ್ಟವಾಗದು ಎಂದರು. ಇದೇ ಸಂದರ್ಭದಲ್ಲಿ ಉಜಿರೆ ಗ್ರಾಮ ಪಂಚಾಯತ್ನ ಸ್ವಚ್ಛತಾ ಸೇನಾನಿಗಳಿಗೆ ಗೌರವದ ಪ್ರತೀಕವಾಗಿ ರಮೇಶ, ರಾಜು, ಮಾರ ಮತ್ತು ಜಾಗೃತಿ ಪ್ರೇರಕಿ ಶೋಭಾ ಅವರನ್ನು ಗ್ರಾಮ ಪಂಚಾಯತ್ ವತಿಯಿಂದ ಸಮ್ಮಾನಿಸಿ ಗೌರವಿಸಲಾಯಿತು. ಸ್ವಚ್ಛತೆ ಕುರಿತು ಭಾಷಣ ಸ್ಪರ್ಧೆ: ಸ್ವಚ್ಚತೆ ಕುರಿತು ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ ಏರ್ಪಡಿಸಲಾಗಿತ್ತು. ಪ್ರಥಮ ಸ್ಥಾನ ಪಡೆದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢ ಶಾಲೆಯ ತುಷಾರ, ದ್ವಿತೀಯ ಸ್ಥಾನ ಪಡೆದ ಶ್ರೀ ಧರ್ಮಾಸ್ಥಳ ಮಂಜುನಾಥೇಶ್ವರ(ಸಿ.ಬಿ. ಎಸ್ .ಇ.) ಪ್ರೌಢ ಶಾಲೆಯ ಆಶಿತಾ ಜೈನ್ ಹಾಗೂ ಪ್ರೋತ್ಸಾಹಕ ಬಹುಮಾನ ಪಡೆದ ಬದನಾಜೆ ಸರಕಾರಿ ಪ್ರೌಢ ಶಾಲೆಯ ವಿಶ್ರುತ ಮತ್ತು ಹಳೆಪೇಟೆ ಸರಕಾರಿ ಪ್ರೌಢ ಶಾಲೆಯ ಶಾಲೆಯ ಸ್ವಾತಿ ಅವರನ್ನು ಪುರಸ್ಕರಿಸಲಾಯಿತು. ತೀರ್ಪುಗಾರರಾಗಿ ಪತ್ರಕರ್ತ ಸಾಂತೂರು ಶ್ರೀನಿವಾಸ ತಂತ್ರಿ ಮತ್ತು ವಿನುತಾ ರಜತ್ ಗೌಡ ಸಹಕರಿಸಿದ್ದರು. ಗ್ರಾಮ ಪಂಚಾಯತ್ ಸದಸ್ಯರು, ಗ್ರಾಮಸ್ಥರು ಹಾಗೂ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತಸರಿದ್ದರು. ಸಿಬಂದಿ ಮೋಹನ್ ಮಾಚಾರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.






