ಬೆಳ್ತಂಗಡಿ: ದೇಶದಲ್ಲಿ 3 ಕೋಟಿಗೂ ಅಧಿಕ ಪ್ರಕರಣಗಳು ವಿವಿಧ ನ್ಯಾಯಾಲಯಗಳಲ್ಲಿ ತನಿಖಾ ಹಂತದಲ್ಲಿ ಇದೆ. ಜನತೆಗೆ ನ್ಯಾಯ ಕೊಡುವುದು ಮಾತ್ರ ನಮ್ಮ ಉದ್ದೇಶವಾಗಿರದೇ, ನ್ಯಾಯವನ್ನು ಶೀಘ್ರ ಮತ್ತು ಕಡಿಮೆ ವೆಚ್ಚದಲ್ಲಿ ಕೊಡುವುದು ನಮ್ಮ ಆದ್ಯತೆಯಾಗಬೇಕು’ ಎಂದು ದೇಶದ ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶ ನ್ಯಾಯಮೂರ್ತಿ ಅಬ್ದುಲ್ ನಜೀರ್ ಹೇಳಿದರುಅವರು ಡಿಸೆಂಬರ್ 28ರಂದು ಜಿಲ್ಲಾ ನ್ಯಾಯಾಂಗ, ಲೋಕೋಪಯೋಗಿ ಇಲಾಖೆ ಹಾಗೂ ವಕೀಲರ ಸಂಘ ಬೆಳ್ತಂಗಡಿ ಇವರ ಸಂಯುಕ್ತ ಆಶ್ರಯದಲ್ಲಿ ಬೆಳ್ತಂಗಡಿ ನ್ಯಾಯಾಲಯದ ಆವರಣದಲ್ಲಿ ಅಂದಾಜು ರೂಪಾಯಿ 2.10 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾದ ವಕೀಲರ ಭವನವನ್ನು ಉದ್ಘಾಟಿಸಿ ಮಾತನಾಡತ್ತಿದ್ದರು.ಸಿವಿಲ್ ವ್ಯಾಜ್ಯಗಳು ಕೆಲವೊಂದು ಮೂರು ತಲೆಮಾರಿನಲ್ಲೂ ಮುಗಿಯದಂತಾಗಿವೆ. ಹಾಗಾಗಿ ಎಲ್ಲಾ ಪ್ರಕರಣಗಳು ಶೀಘ್ರ ವಿಲೇವಾರಿ ಆಗುವಂತೆ ಜನಪ್ರತಿನಿಧಿಗಳು ಶಾಸನ ರೂಪಿಸುವ ಕೆಲಸ ಮಾಡಬೇಕು ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಹೈಕೋರ್ಟು ಹಾಗೂ ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶ ಕೆ. ಸೋಮಶೇಖರ್ ವಹಿಸಿದ್ದರು.ಹೈಕೋರ್ಟ್ ನ್ಯಾಯಾಧೀಶರುಗಳಾದ ಮೊಹಮ್ಮದ್ ನವಾಜ್, ವಿಶ್ವಜಿತ್ ಶೆಟ್ಟಿ, ಶಾಸಕ ಹರೀಶ್ ಪೂಂಜ, ಹೈಕೋರ್ಟು ರಿಜಿಸ್ಟ್ರರ್ ಜನರಲ್ ಶಿವಶಂಕರೇ ಗೌಡ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಶುಭ ಹಾರೈಸಿದರು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿರಬೇಕಾಗಿದ್ದ ಹೈಕೋರ್ಟು ನ್ಯಾಯಾಧೀಶ ಋತುರಾಜ್ ಅವಸ್ಥಿ ವೀಡಿಯೋ ಸಂದೇಶ ನೀಡಿದರು. ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯರುಗಳಾದ ಬೋಜೇಗೌಡ, ಪ್ರತಾಪ್ ಸಿಂಹ ನಾಯಕ್, ಕರ್ನಾಟಕ ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ಎಲ್. ಶ್ರೀನಿವಾಸ ಬಾಬು, ಸದಸ್ಯ ಪದ್ಮ ಪ್ರಸಾದ್ ಹೆಗ್ಡೆ, ಲೋಕೋಪಯೋಗಿ ಇಲಾಖೆ ಮುಖ್ಯ ಎಂಜಿನಿಯರ್ ಕಾಂತರಾಜ್ ಬಿ. ಟಿ. ಉಪಸ್ಥಿತರಿದ್ದರು.ಪ್ರಧಾನ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಮುರಳೀಧರ ಪೈ ಸ್ವಾಗತಿಸಿದರು. ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷ ಪ್ರಸಾದ್ ಕೆ. ಎಸ್. ಪ್ರಸ್ತಾವಿಸಿದರು. ವಕೀಲರುಗಳಾದ ಬಿ. ಕೆ. ಧನಂಜಯ ರಾವ್ ಹಾಗೂ ಶ್ರೀ ಕೃಷ್ಣ ಶೆಣೈ ಕಾರ್ಯಕ್ರಮ ನಿರೂಪಿಸಿದರು. ವಕೀಲರ ಸಂಘದ ಕಾರ್ಯದರ್ಶಿ ಶೈಲೇಶ್ ಆರ್. ಠೋಸರ್ ವಂದಿಸಿದರು.






