ಬೆಳ್ತಂಗಡಿ: ಗಾನಕೋಗಿಲೆ ಭಾರತರತ್ನ ಲತಾ ಮಂಗೇಶ್ಕರ್ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಿದ ಕೇಂದ್ರ ಸರಕಾರ ದೇಶದಾದ್ಯಂತ ಎರಡು ದಿನಗಳ ಶೋಕಾಚರಣೆ ಘೋಷಿಸಿತ್ತು. ರಾಷ್ಟ್ರೀಯ ಶೋಕಾಚರಣೆಯ ಸಂದರ್ಭ ಸರಕಾರಿ ಕಛೇರಿಗಳಲ್ಲಿ ರಾಷ್ಟ್ರಧ್ವಜ ಅರ್ಧಕ್ಕೆ ಹಾರಿಸಿ ರಾಷ್ಟ್ರೀಯ ಶೋಕಾಚರಣೆಯಲ್ಲಿ ತೊಡಗಿಸಿಕೊಳ್ಳಬೇಕಾದ ಬೆಳ್ತಂಗಡಿಯ ತಾಲೂಕು ಆಡಳಿತದ ಕೇಂದ್ರಸ್ಥಾನವಾದ ಮಿನಿ ವಿಧಾನಸೌಧ ಅಥವಾ ತಾಲೂಕು ಕೇಂದ್ರ ಆಡಳಿತ ಕಛೇರಿಯಲ್ಲೇ ರಾಷ್ಟ್ರಧ್ವಜ ಅರ್ಧಕ್ಕೆ ಹಾರಿಸಿ, ಶೋಕಾಚರಣೆ ಆಚರಿಸದೇ ಮೃತ ಗಾನಕೋಗಿಲೆ ಭಾರತರತ್ನ ಲತಾ ಮಂಗೇಶ್ಕರ್ರನ್ನು ಅವಮಾನಿಸಿದ್ದು ಮಾತ್ರವಲ್ಲ; ಕೇಂದ್ರ ಸರಕಾರದ ಸೂಚನೆಯನ್ನು ಧಿಕ್ಕರಿಸಿ ಸವಾಲು ಎಸೆದಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಎಸಗಿದ ಅವಮಾನ.ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲಾ ಎಂಬ ಮಾತಿನಂತೆ ಯಾವಾಗ ತಾಲೂಕಿನ ಕೇಂದ್ರ ಕಛೇರಿಯಲ್ಲೇ ಕೇಂದ್ರ ಸರಕಾರ ಘೋಷಿಸಿದ ರಾಷ್ಟ್ರೀಯ ಶೋಕ ದಿನಾಚರಣೆ ಆಚರಿಸದೇ ಅವಮಾನಿಸಲಾಯಿತು; ತಾಲೂಕಿನ ಬಹುತೇಕ ಸರಕಾರಿ ಇಲಾಖಾ ಕಛೇರಿಗಳ ಅಧಿಕಾರಿಗಳೂ ತಮ್ಮ ಕಛೇರಿಗಳಲ್ಲಿ ರಾಷ್ಟ್ರಧ್ವಜ ಅರ್ಧಕ್ಕೆ ಹಾರಿಸಿ ರಾಷ್ಟ್ರೀಯ ಶೋಕಾಚರಣೆಯಲ್ಲಿ ಭಾಗವಹಿಸದಿರುವುದು ದುರದೃಷ್ಟಕರ. ಬೆಳ್ತಂಗಡಿ ತಾಲೂಕು ಪಂಚಾಯತ್ನಲ್ಲಿ ಮಾತ್ರ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಹಾರಿಸಿ, ಮೃತ ಗಾನಕೋಗಿಲೆ ಭಾರತರತ್ನ ಲತಾ ಮಂಗೇಶ್ಕರ್ರವರಿಗೆ ಗೌರವ ಅರ್ಪಿಸಿ ಕೇಂದ್ರ ಸರಕಾರದ ಸೂಚನೆಯನ್ನು ಪಾಲಿಸಿರುವುದು ತಾಲೂಕಿನ ಸರಕಾರಿ ಕಛೇರಿಗಳ ಮಾನವನ್ನು ಕಿಂಚಿತ್ತಾದರೂ ಉಳಿಸಿದಂತೆ ಆಗಿದೆ.






