ಬೆಳ್ತಂಗಡಿ: ಬೆಳ್ತಂಗಡಿಯ ಅಲ್ಲಾಟಬೈಲು ಬಡಾವಣೆಯ ನಿವಾಸಿ ಪುಂಜಾಲಕಟ್ಟೆ ಪ್ರಥಮದರ್ಜೆ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಗಣಪತಿ ಭಟ್ ಕುಳಮರ್ವ ಮತ್ತು ನಡ ಸರಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ವಸಂತಿ ಕುಳಮರ್ವರ ಪುತ್ರ ಸಾತ್ವಿಕ್ ಕುಳಮರ್ವ ಭಾರತೀಯ ಸೈನ್ಯದ ಲೆಫ್ಟಿನಂಟ್ ಹುದ್ದೆಗೆ ಆಯ್ಕೆಯಾಗಿದ್ದಾರೆ.ದೂರದ ಅಮೇರಿಕಾದಲ್ಲಿ ಅರಿಝೋನಾ ಯುನಿವರ್ಸಿಟಿಯಲ್ಲಿ ಎಂ.ಎಸ್. ಪದವಿ ಪಡೆದ ಬಳಿಕ ಎರಡು ವರ್ಷಗಳ ಕಾಲ ಅಲ್ಲೇ ಉದ್ಯೋಗ ನಿರ್ವಹಿಸಿದ ಸಾತ್ವಿಕ್ ಕುಳಮರ್ವ ಭಾರತೀಯ ಸೇನೆ ಸೇರಬೇಕೆಂಬ ತುಡಿತದಿಂದ ಅಮೇರಿಕಾದಲ್ಲಿದ್ದ ಉದ್ಯೋಗವನ್ನು ತ್ಯಜಿಸಿ ತಾಯ್ನಾಡಿಗೆ ಮರಳಿದರು. ಭಾರತೀಯ ಸೇನೆಗೆ ಸೇರಲು ದೈಹಿಕ ಕ್ಷಮತೆ ಕಾಪಾಡಲು ಪ್ರತಿದಿನ ಬೆಳಗ್ಗೆ ಬೆಳ್ತಂಗಡಿಯ ಸರಕಾರಿ ಪದವಿಪೂರ್ವ ಕಾಲೇಜಿನ ಕ್ರೀಡಾಂಗಣಕ್ಕೆ ತಪ್ಪದೇ ಬರುತ್ತಿದ್ದ ಸಾತ್ವಿಕ್ ಕುಳಮರ್ವ, ಸೈನ್ಯಕ್ಕೆ ಸೇರಲು ಬೇಕಾದ ದೈಹಿಕ ಕ್ಷಮತೆ ಬೆಳೆಸಿಕೊಂಡಿದ್ದರು. ನಂತರ ನಡೆದ ಸೈನ್ಯ ಪ್ರವೇಶ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಸಾತ್ವಿಕ್ ಕುಳಮರ್ವ, ಇದೀಗ ಡೆಹ್ರಾಡೂನ್ನಲ್ಲಿ ಒಂದು ವರ್ಷದ ತರಬೇತಿ ಪಡೆದು ಲೆಫ್ಟಿನೆಂಟ್ ಆಗಿ ಭಾರತೀಯ ಸೇನೆ ಸೇರಿಕೊಂಡಿದ್ದಾರೆ.






