ಬೆಳ್ತಂಗಡಿ: ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಆಯೋಜಿಸಿದ್ದ ರಾಷ್ಟ್ರಮಟ್ಟದ ಸಾಕ್ಷ್ಯಚಿತ್ರ ಮತ್ತು ಕಿರುಚಿತ್ರೋತ್ಸವದಲ್ಲಿ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿಗಳು ನಿರ್ಮಿಸಿದ ಸಾಕ್ಷ್ಯಚಿತ್ರ ಪ್ರಥಮ ಸ್ಥಾನದ ಗರಿ ಪಡೆದುಕೊಂಡಿದೆ.ಕಾಸರಗೋಡು ಸೀರೆ ಕೈಮಗ್ಗದ ಕುರಿತ ಸಾಕ್ಷ್ಯಚಿತ್ರ ಇದಾಗಿದ್ದು; ಕೈಮಗ್ಗದ ವಾಸ್ತವತೆ, ನೇಕಾರರ ದಿನಚರಿಯ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ. ರಾಮ್ ಮೋಹನ್ ಭಟ್ ಎಚ್. ಅವರ ಸಾಹಿತ್ಯ ಹಾಗೂ ನಿರ್ದೇಶನವಿದ್ದು ‘ಗತವೈಭವ’ ಶೀರ್ಷಿಕೆಯಡಿ ಈ ಸಾಕ್ಷ್ಯಚಿತ್ರ ಮೂಡಿಬಂದಿದೆ. ಈ ಸಾಕ್ಷ್ಯಚಿತ್ರಕ್ಕೆ ಸಂಪತ್ ಕುಮಾರ್ ರೈ ಛಾಯಾಗ್ರಹಣ ಹಾಗೂ ರಕ್ಷಿತ್ ರೈ ಸಂಕಲನದಲ್ಲಿ ತಮ್ಮ ಕಲಾಚತುರತೆ ತೋರಿದ್ದಾರೆ. ಶ್ರುತಿ ಜೈನ್ ಅವರ ಹಿನ್ನೆಲೆ ದ್ವನಿ ಕಾಸರಗೋಡು ಸೀರೆಯ ಪಾತ್ರಕ್ಕೆ ಜೀವ ತುಂಬುತ್ತದೆ. ಶ್ರೀರಕ್ಷಾ ಶಂಕರ್ ಮತ್ತು ಶಾಮ ಪ್ರಸಾದ್ ಈ ಕ್ರಿಯಾಶೀಲ ತಂಡದ ಭಾಗ. ಕೈಮಗ್ಗಗಳು ಭಾರತೀಯ ಪರಂಪರೆ ಮತ್ತು ಸಂಸ್ಕೃತಿಯ ಪ್ರತೀಕ. ಅದು ಇಂದು ಅಳಿವಿನ ಅಂಚಿನಲ್ಲಿದೆ. ಕಮ್ಮಿ ವರಮಾನ ಇದ್ದರೂ ನೇಕಾರ ವೃತ್ತಿಯನ್ನು ಇಂದಿಗೂ ಮುಂದುವರಿಸುತ್ತಿರುವ ಹಿರಿಯರ ಹಾದಿ ಕಠಿಣ. ಯುವಪೀಳಿಗೆ ತಿರಸ್ಕರಿಸಿರುವ ಕೈಮಗ್ಗದ ಮಹತ್ವವನ್ನು ಪ್ರೇಕ್ಷಕರಿಗೆ ತಿಳಿಸುವ ಪ್ರಯತ್ನವೇ ‘ಗತವೈಭವ’.






