ಬೆಳ್ತಂಗಡಿ: ಧರ್ಮಸ್ಥಳದ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಪುಸ್ತಕ ಪ್ರೀತಿ, ಓದುವ ಗ್ರಹಣಶಕ್ತಿ ಅಪೂರ್ವವಾದುದು. ಅಂತೆಯೇ ಡಾ. ಬಿ. ಯಶೋವರ್ಮ ಅವರ ಬದುಕು ಕೂಡ ತೆರೆದ ಪುಸ್ತಕದಂತೆ. ಅವರಿಗೆ ಸಾಹಿತ್ಯ ಹಾಗೂ ಸಾಹಿತಿಗಳ ಮೇಲೆ ಅಪಾರ ಪ್ರೀತಿ ಹಾಗು ಗೌರವ. ಕಲಾವಿದರ ಬಗ್ಗೆ ವಿಶೇಷ ಅಭಿಮಾನ. ಸಸ್ಯಗಳ ಮೇಲಿನ ಪ್ರೀತಿ, ಆಡಳಿತದ ದೂರದರ್ಶಿತ್ವ, ಗೋಷ್ಠಿ-ಸಮ್ಮೇಳನಗಳನ್ನು ಆಸ್ವಾದಿಸಿ ವಿಮರ್ಶಿಸುವ ಅವರ ಜೀವನ ಹಾಗು ಬದುಕು ವಿದ್ಯಾರ್ಥಿಗಳಿಗೆ ಅನುಕರಣೀಯ ಮಾದರಿಯಾಗಿದೆ ಎಂದು ಹಿರಿಯ ಸಾಹಿತಿ ಪ. ರಾಮಕೃಷ್ಣ ಶಾಸ್ತ್ರೀ ನುಡಿದರು. ಅವರು ಜೂನ್ 21ರಂದು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ಸಮ್ಯಗ್ದರ್ಶನ ಸಭಾಭವನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಬೆಳ್ತಂಗಡಿ ತಾಲೂಕು ಘಟಕ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಮಹಾವಿದ್ಯಾಲಯದ ಕನ್ನಡ ಸಂಘದ ಸಂಯುಕ್ತ ಆಶ್ರಯದಲ್ಲಿ ನಡೆದ ಡಾ| ಟಿ. ಎನ್. ತುಳುಪುಳೆ ದತ್ತಿನಿಧಿ ಉಪನ್ಯಾಸ ಹಾಗೂ ಸಾಧಕರಿಗೆ ಸಮ್ಮಾನ ಕಾರ್ಯಕ್ರಮದಲ್ಲಿ ಸಮ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದರು. ಕಾರ್ಯಕ್ರಮ ಉದ್ಘಾಟಿಸಿದ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಂ. ಪಿ. ಶ್ರೀನಾಥ್ ಮಾತನಾಡಿ, ಡಾ| ಟಿ. ಎನ್. ತುಳುಪುಳೆಯವರು ಸಾಹಿತ್ಯದ ಮೇಲಿನ ಪ್ರೀತಿ, ಅಭಿಮಾನದಿಂದ 2016ರಲ್ಲಿ ರೂಪಾಯಿ 50,000/-ಯನ್ನು ಕೇಂದ್ರ ಸಾಹಿತ್ಯ ಅಕಾಡೆಮಿಯಲ್ಲಿ ಠೇವಣಿಯಾಗಿರಿಸಿ, ಅದರಿಂದ ಪ್ರತಿವರ್ಷ ಕನ್ನಡ ಸಾಹಿತ್ಯ ಕುರಿತು ದತ್ತಿ ಉಪನ್ಯಾಸ ಏರ್ಪಡಿಸಿ, ಹಿರಿಯ ಸಾಹಿತಿಗಳಿಗೆ ಸಮ್ಮಾನ ಯೋಜನೆ ರೂಪಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಅಭಿರುಚಿ ಬೆಳೆಸಲು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದಮಂಗಳೂರು ನಗರದಲ್ಲಿ ಕನ್ನಡದ 15ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಸಾಹಿತ್ಯ ಅಭಿಯಾನದ ಮೂಲಕ ಜಾಗೃತಿ ಮೂಡಿಸುವ ವಿಶೇಷ ಕಾರ್ಯಕ್ರಮ ನಡೆಸಲು ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.ಕನ್ನಡ ಸಾಹಿತ್ಯ ಪರಿಷತ್ ಬೆಳ್ತಂಗಡಿ ತಾಲೂಕು ಘಟಕದ ಅಧ್ಯಕ್ಷ ಯದುಪತಿ ಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಹಿತ್ಯ ಬದುಕನ್ನು ಸುಂದರಗೊಳಿಸುತ್ತದೆ. ಪ್ರತಿಯೊಬ್ಬರೂ ಪುಸ್ತಕ ಓದುವ ಪ್ರೀತಿ ಹಾಗೂ ಹವ್ಯಾಸ ಬೆಳೆಸಿಕೊಳ್ಳಬೇಕೆಂದು ನುಡಿದರು. ಕಾಲೇಜಿನ ಪ್ರಾಂಶುಪಾಲ ಡಾ. ಪಿ. ಎನ್. ಉದಯಚಂದ್ರ ಹಿರಿಯ ಸಾಹಿತಿ ಪ್ರೊ. ಎನ್. ಜಿ. ಪಟವರ್ಧನ್ ಅವರ ಎರಡು ಸಾಹಿತ್ಯ ಕೃತಿಗಳನ್ನು ಬಿಡುಗಡೆಗೊಳಿಸಿ ಮಾತನಾಡುತ್ತಾ, ಸಾಹಿತ್ಯವನ್ನು ಆಸಕ್ತಿಯಿಂದ ಓದಬೇಕು. ಇಂದಿನ ದಿನಗಳಲ್ಲಿ ಪುಸ್ತಕ ಓದುವ ಹಾಗೂ ಬರೆಯುವ ಹವ್ಯಾಸ ಕಡಿಮೆಯಾಗಿದೆ. ಸಾಹಿತ್ಯ ಕೃತಿಗಳ ಬಗ್ಗೆ ಚರ್ಚೆ, ಅಧ್ಯಯನ ಶಿಬಿರ ನಡೆಯ ಬೇಕಾದ ಅಗತ್ಯವಿದೆ ಎಂದರು.ಡಾ| ಟಿ. ಎನ್. ತುಳುಪುಳೆ ದತ್ತಿನಿಧಿಯಿಂದ ಸಾಹಿತಿ ಪ. ರಾ. ಶಾಸ್ತ್ರಿ ಹಾಗೂ ಶಾರದಾ ಶಾಸ್ತ್ರಿ ದಂಪತಿಗಳನ್ನು ಸಮ್ಮಾನಿಸಿ ಗೌರವಿಸಲಾಯಿತು. ರಶ್ಮಿ ಸಮ್ಮಾನಿತರನ್ನು ಪರಿಚಯಿಸಿದರು. ದತ್ತಿನಿಧಿಯ ಡಾ| ಎಂ. ಎನ್. ತುಳುಪುಳೆ, ಸಾಹಿತಿ ಪ್ರೊ. ಎನ್. ಜಿ. ಪಟವರ್ಧನ್ ಉಪಸ್ಥಿತರಿದ್ದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ. ಬಿ. ಪಿ. ಸಂಪತ್ ಕುಮಾರ್ ಸ್ವಾಗತಿಸಿದರು. ಕನ್ನಡ ಪ್ರಾಧ್ಯಾಪಕಿ ಕವಿತಾ ಉಮೇಶ್ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಕಾರ್ಯದರ್ಶಿ ರಾಮಕೃಷ್ಣ ಭಟ್ ಬೆಳಾಲು ವಂದಿಸಿದರು. ಕನ್ನಡ ಪ್ರಾಧ್ಯಾಪಕ ದಿವಾ ಕೊಕ್ಕಡ ಕಾರ್ಯಕ್ರಮ ಸಂಯೋಜಿಸಿದ್ದರು.






