ಬೆಳ್ತಂಗಡಿ: ಉನ್ನತ ತರಬೇತುದಾರರು ಇಲ್ಲಿ ತರಬೇತಿ ನೀಡುತ್ತಾರೆ. ಜ್ಞಾನ ಕೊಟ್ಟಸ್ಟು ನಮ್ಮ ಜ್ಞಾನ ಇಮ್ಮಡಿಯಾಗುತ್ತದೆ. ನಾವು ಸಮಯಕ್ಕೆ ಸರಿಯಾಗಿ ನೂತನ ಕೌಶಲ್ಯಕ್ಕೆ ನಮ್ಮನ್ನು ನಾವು ಅಪ್ ಗ್ರೇಡ್ ಮಾಡಿಕೊಳ್ಳಬೇಕು. ನಮ್ಮ ಅಧ್ಯಯನಶೀಲತೆ ನಿತ್ಯನಿರಂತರವಾಗಿರಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.ಉಜಿರೆ ರುಡ್ಸೆಟ್ ಸಂಸ್ಥೆ ಹಾಗೂ ಗುಲಾಬಿ ಕೃಷ್ಣ ಭಂಡಾರಿ ಚಾರಿಟೇಬಲ್ ಟ್ರಸ್ಟ್ನ ಜಂಟಿ ಆಶ್ರಯದಲ್ಲಿ ಉಜಿರೆಯ ರುಡ್ಸೆಟ್ನಲ್ಲಿ 3 ದಿನ ನಡೆದ ರಾಜ್ಯಮಟ್ಟದ ಬ್ಯೂಟೀಶಿಯನ್ಗಳ ಉನ್ನತ ಕೌಶಲ್ಯದ ತರಬೇತಿ ಬಳಿಕ ಜೂನ್ 22ರಂದು ನಡೆದ ಶಿಬಿರದ ಸಮಾರೋಪ ಸಮಾರಂಭದಲ್ಲಿ ಪ್ರಮಾಣಪತ್ರ ವಿತರಿಸಿ ಅವರು ಮಾತನಾಡುತ್ತಿದ್ದರು. ಆರೋಗ್ಯಕರ ಬೆಳವಣಿಗೆ ಸಮಾಜದಲ್ಲಿರಲಿ ಎಂದು ಡಾ. ಹೆಗ್ಗಡೆ ಶುಭಹಾರೈಸಿದರು.ಬಾಲಿವುಡ್ ಚಲನಚಿತ್ರ ನಿರ್ದೇಶಕ ಪದ್ಮಶ್ರೀ ಪುರಸ್ಕೃತ ಮಧೂರ್ ಭಂಡಾರ್ಕರ್ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ಯುವ ಸಮುದಾಯ ಉತ್ತಮ ಕೌಶಲ್ಯ ಹೊಂದಿದ್ದಾರೆ. ನಿಮ್ಮ ಕೌಶಲ್ಯವೇ ನಿಮ್ಮ ವೃತ್ತಿ ಬದುಕಿಗೆ ಆಶ್ರಯವಾಗಿದೆ ಎಂದು ಶಿಬಿರಾರ್ಥಿಗಳಿಗೆ ಶುಭಹಾರೈಸಿದರು. ಗುಲಾಬಿ ಕೃಷ್ಣ ಭಂಡಾರಿ ಚಾರಿಟೇಬಲ್ ಟ್ರಸ್ಟ್ ಸ್ಥಾಪಕ ಅಧ್ಯಕ್ಷ ಡಾ. ಶಿವರಾಮ ಕೆ. ಭಂಡಾರಿ ಮಾತನಾಡಿ, ಪರಿಶ್ರಮದಿಂದ ಸಾಧಿಸಿದ ಎಲ್ಲ ವೃತ್ತಿಗಳು ಯಶಸ್ಸನ್ನು ನೀಡುತ್ತದೆ. ವೃತ್ತಿಯನ್ನು ಪ್ರೀತಿಸಿದರೆ ಅದು ನಮಗೆ ಗೌರವ ನೀಡುತ್ತದೆ ಎಂದು ಹೇಳಿದರು.ರುಡ್ ಸೆಟ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಗಿರಿಧರ್ ಕಲ್ಲಾಪುರ್, ಬರೋಡ ತುಳುಕೂಟ ಅಧ್ಯಕ್ಷ ಹಾಗೂ ಉದ್ಯಮಿ ಶಶಿಧರ್ ಬಿ. ಶೆಟ್ಟಿ, ಮುಂಬೈ ಉದ್ಯಮಿ, ಭಂಡಾರಿ ಮಹಾಮಂಡಳ ಅಧ್ಯಕ್ಷ ಸುರೇಶ್ ಭಂಡಾರಿ, ಶಿವಾಸ್ ಕಂಪೆನಿ ನಿರ್ದೇಶಕಿ ಅನುಶ್ರೀ ಶಿವರಾಮ್ ಭಂಡಾರಿ, ತರಬೇತುದಾರರಾದ ಶ್ವೇತಾ ಭಂಡಾರಿ ಉಪಸ್ಥಿತರಿದ್ದರು.ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಉನ್ನತ ಕೌಶಲ್ಯ ತರಬೇತಿ ಪಡೆದ ಕರ್ನಾಟಕದ 7 ರುಡ್ಸೆಟ್ ಕೇಂದ್ರಗಳ 60 ಮಂದಿ ಬ್ಯುಟಿಪಾರ್ಲರ್ ಉದ್ಯಮಿಗಳಿಗೆ ಪ್ರಮಾಣ ಪತ್ರ ವಿತರಿಸಿದರು.ಧಾರವಾಡದ ಪುಷ್ಪಾ ಅನುಭವ ಹಂಚಿಕೊಂಡು ಮಾತನಾಡಿ, ರುಡ್ ಸೆಟ್ ಸಂಸ್ಥೆಯು ಸೋತು ಬಂದವರಿಗೆ ಸಾಧನೆಯ ಬ್ರಹ್ಮಸ್ಥಳವಾಗಿದೆ. ಮೂಡುಬಿದ್ರೆಯ ಸುನಿಲ್, ಯಲ್ಲಪ್ಪ, ಚಿತ್ರದುರ್ಗಾದ ಶ್ವೇತಾ ರಾಣಿ ಆರ್., ಬೆಂಗಳೂರಿನ ಹರ್ಷಿತಾ ಕೆ.ಎನ್. ಅನುಭವ ಹಂಚಿಕೊಂಡರು.ಉಜಿರೆ ರುಡ್ಸೆಟ್ ಸಂಸ್ಥೆಯ ನಿರ್ದೇಶಕ ಎಂ.ಸುರೇಶ್ ಸ್ವಾಗತಿಸಿದರು. ರುಡ್ಸೆಟ್ ಸಂಸ್ಥೆಯ ಹಿರಿಯ ತರಬೇತುದಾರ ಅಬ್ರಾಹಂ ಜೇಮ್ಸ್ ಪಿ.ವಿ. ವಂದಿಸಿದರು. ಹಿರಿಯ ತರಬೇತುದಾರೆ ಅನುಸೂಯ ಕಾರ್ಯಕ್ರಮ ನಿರೂಪಿಸಿದರು.






