ಬೆಳ್ತಂಗಡಿ: ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬೆಳ್ತಂಗಡಿ ತಾಲೂಕು ಘಟಕ ಮತ್ತು ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯ ಜಂಟಿ ಆಶ್ರಯದಲ್ಲಿ ಬೆಳಾಲು ಗ್ರಾಮದ ಪ್ರೌಢಶಾಲೆ ಮತ್ತು ಎಲ್ಲ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳಿಗಾಗಿ ‘ಬಾರಿಸು ಕನ್ನಡ ಡಿಂಡಿಮ’ ಕನ್ನಡ ಗೀತೆಗಳ ಗಾಯನ ಮತ್ತು ಕಥೆ-ಕವನ ಕಟ್ಟುವುದರ ಕುರಿತು ತರಬೇತಿ ಕಾರ್ಯಕ್ರಮ ಜರಗಿತು. ಉದ್ಘಾಟಕರಾಗಿ ಆಗಮಿಸಿದ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಎಂ. ಪಿ. ಶ್ರೀನಾಥ್ ಮಾತನಾಡುತ್ತಾ, ಮಕ್ಕಳೆಡೆಗೆ ಸಾಹಿತ್ಯ ಪರಿಷತ್ತು ಎಂಬ ಆಶಯದಂತೆ ಇಂದಿನ ಕಾರ್ಯಕ್ರಮ ಜರಗುತ್ತಿದೆ. ಶಿಕ್ಷಣ ಸಂಸ್ಥೆಗಳು ಪಾಠದೊಂದಿಗೆ ಮಕ್ಕಳಿಗೆ ಸಹಪಠ್ಯ ಚಟುವಟಿಕೆಗಳನ್ನು ಆಯೋಜಿಸುವ ಮೂಲಕ ಸೃಜನಶೀಲತೆಯನ್ನು ಪೋಷಿಸಬೇಕು. ಅದಕ್ಕಾಗಿ ಸಾಹಿತ್ಯಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತಾಗಬೇಕು ಎಂದು ಆಶಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ. ಯದುಪತಿ ಗೌಡ ಮಾತನಾಡಿ, ಸಾಹಿತ್ಯಿಕ ಕಾರ್ಯಕ್ರಮಗಳ ಮೂಲಕ ಮಕ್ಕಳ ಮನಸ್ಸು ಮತ್ತು ಭಾವನೆಗಳನ್ನು ಅರಳಿಸುವ ಕೆಲಸವಾಗುತ್ತದೆ. ಅದಕ್ಕಾಗಿ ಇಂತಹ ಶಿಬಿರಗಳಿಂದ ತರಬೇತಿ ಮತ್ತು ಪ್ರೇರಣೆಗಳು ಲಭ್ಯವಾಗುತ್ತದೆ ಎಂದು ಅನಿಸಿಕೆಗಳನ್ನು ವ್ಯಕ್ತಪಡಿಸಿದರು.ಅತಿಥಿಗಳಾಗಿ ಬೆಳಾಲು ಪ್ರೌಢಶಾಲೆಯ ಪೋಷಕ ಸಮಿತಿಯ ಅಧ್ಯಕ್ಷ ಸುಲೈಮಾನ್ ಭೀಮಂಡೆ, ಮಾಯಾ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಸುರೇಂದ್ರ ಗೌಡ ಸುರುಳಿ, ಕೊಲ್ಪಾಡಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರಾಜೇಶ್ ಕುರ್ಕಿಲು, ಪೆರಿಯಡ್ಕ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಸಂತೋಷ್ ಮಡಿವಾಳ, ಸರಸ್ವತೀ ಶಾಲೆಯ ಪೋಷಕ ಸಮಿತಿಯ ಅಧ್ಯಕ್ಷ ಸತೀಶ್ ನಾಯ್ಕ್ ಸುರುಳಿ ಇವರು ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಕೊಲ್ಪಾಡಿ ಶಾಲಾ ಶಿಕ್ಷಕರಾದ ಪರಮೇಶ್ವರ್, ಕರಿಯಣ್ಣ ಬೇರಿಕೆ, ಸಾಹಿತ್ಯ ಪರಿಷತ್ತಿನ ಬೆಳಿಯಪ್ಪ ಕೆ. ಬೆಳಾಲು ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಶಿಕ್ಷಕರಾದ ಶಂಕರ್ ತಾಮ್ಹಣ್ಕರ್ ಮುಂಡಾಜೆ ಮತ್ತು ಉಜಿರೆ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿ ಗೀತಾರವರು ಆಗಮಿಸಿ ತರಬೇತಿಯನ್ನು ನಡೆಸಿಕೊಟ್ಟರು. ಶಾಲಾ ಮುಖ್ಯೋಪಾಧ್ಯಾಯರಾದ ರಾಮಕೃಷ್ಣ ಭಟ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಸಹಶಿಕ್ಷಕ ಗಣೇಶ್ವರ್ ವಂದಿಸಿದರು. ಕಾರ್ಯಕ್ರಮದ ಸಂಯೋಜಕರಾದ ಶಿಕ್ಷಕ ಸುಮನ್ ಯು. ಎಸ್. ಕಾರ್ಯಕ್ರಮ ನಿರೂಪಿಸಿದರು. ಶಾಲೆಯ ಎಲ್ಲಾ ಶಿಕ್ಷಕ ಸಿಬ್ಬಂದಿಯವರು ಉಪಸ್ಥಿತರಿದ್ದು ತರಬೇತಿಯನ್ನು ಯಶಸ್ವಿಗೊಳಿಸಿದರು.






