ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲಮಾಧ್ಯಮ ಶಾಲೆ ಧರ್ಮಸ್ಥಳದಲ್ಲಿ ಕೆಸರುಡೊಂಜಿ ದಿನ ನೇಜಿ ನೆಡುವ ಸಂಭ್ರಮ ಕಾರ್ಯಕ್ರಮ ನಡೆಯಿತು. ಮಕ್ಕಳಿಗೆ ಹಳ್ಳಿಯ ವಾತಾವರಣ ಕಲ್ಪಿಸಿಕೊಡಲಾಗಿತ್ತು. ಶಾಲಾ ಮಕ್ಕಳಿಗೆ ಕೃಷಿಯ ಬಗ್ಗೆ ಅರಿವು ಮೂಡಿಸಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉಜಿರೆ ರತ್ನಮಾನಸದ ಮೇಲ್ವಿಚಾರಕ ಯತೀಶ್ ಬಳಂಜ ಮಾತನಾಡುತ್ತಾ, ಪ್ರಕೃತಿಯ ವಿಸ್ಮಯ, ಅದರಿಂದಾಗುವ ಪ್ರಯೋಜನ, ಅದನ್ನು ಉಳಿಸುವ ಪ್ರಯತ್ನ ವಿದ್ಯಾರ್ಥಿಗಳು ಮಾಡಬೇಕಾಗಿದೆ ಎಂದು ನುಡಿದರು. ಕೃಷಿ ಹಾಗೂ ಅದರ ಮಹತ್ವ, ಗದ್ದೆ ಮಾಡುವ ರೀತಿ, ಬಿತ್ತನೆ, ಭತ್ತದ ಬೆಳವಣಿಗೆಯ ವಿಧಾನ ಇತ್ಯಾದಿಗಳ ಕುರಿತು ಅದರ ಇತಿಹಾಸದ ಕುರಿತು ವಿದ್ಯಾರ್ಥಿಗಳಿಗೆ ತಿಳಿಯ ಪಡಿಸಿ, ಕೃಷಿಯಲ್ಲಿ ವಿದ್ಯಾರ್ಥಿಗಳಿಗೆ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಈ ಶಾಲೆಯಲ್ಲಿ ಮಾಡುತ್ತಿರುವ ಕಿರು ಪ್ರಯತ್ನ ವನ್ನು ಶ್ಲಾಘಿಸಿದರು. ನಂತರ ಮಾತನಾಡಿದ ಶಾಲಾ ಮುಖ್ಯೋಪಾಧ್ಯಾಯಿನಿ ಪರಿಮಳ ಎಂ.ವಿ. ಶಾಲೆಯಲ್ಲಿ ಯಾಕೆ ಭತ್ತದ ಕೃಷಿ ಮಾಡುತ್ತೇವೆ ಎಂಬುದನ್ನು ವಿವರಿಸಿದರು. ಮಕ್ಕಳಲ್ಲಿ ಪರಿಸರದ ಕಾಳಜಿ ಹಾಗೂ ಪರಿಸರದೊಂದಿಗೆ ಬೆಳೆಯುವ ಕಲೆಯನ್ನು ವಿವರಿಸಿದರು. ನಂತರ ಭತ್ತ ಮಾಡುವ ಗದ್ದೆಯಲ್ಲಿ ಕೆಸರಿನಲ್ಲಿ ಪಿಲಿನಲಿಕೆ, ಡೆನ್ನನ್ನಾ ನೃತ್ಯವನ್ನು ಮಳೆಯ ಜೊತೆಗೆ ಮಾಡಿದ ಮಕ್ಕಳು ಸಂಧಿ ಪಾಡ್ದನ ಹಾಡಿದ್ದು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತ್ತು. ಸ್ತುತಿ ನಿರ್ವಹಿಸಿದ ಕಾರ್ಯಕ್ರಮದಲ್ಲಿ ಸಂಪ್ರಿತಾ ಸ್ವಾಗತಿಸಿ, ಸುಮಿತ್ ವಂದಿಸುವ ಮುಖಾಂತರ ಶಾಲೆಯ ಪರಿಸರ ಸಂಘ, ಸಾಂಸ್ಕ್ರತಿಕ ಸಂಘ ಹಾಗೂ ಕ್ರೀಡಾ ಸಂಘ ನಡೆಸಿಕೊಟ್ಟ ಕೆಸರುಡೊಂಜಿ ದಿನ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನೆರವೇರಿತು. ಶಾಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.






