ಬೆಳ್ತಂಗಡಿ: ತಾಲೂಕಿನಲ್ಲಿ ಎಲ್ಲಿ ಮಂಗನ ಮೃತದೇಹ ಕಂಡರೂ ಜನಸಾಮಾನ್ಯರಲ್ಲಿ ಮಂಗನ ಕಾಯಿಲೆ ಸಾಂಕ್ರಾಮಿಕ ರೋಗದ ಬಗ್ಗೆ ಭಯ ಮೂಡುವುದು ಸಹಜ. ಅಳದಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಉಂಗಿಲಬೈಲು ಎಂಬಲ್ಲಿ ಡಿಸೆಂಬರ್ 23ರ ಸಂಜೆಯ ವೇಳೆಗೆ ಮಂಗನ ಮೃತದೇಹವನ್ನು ಕಂಡ ಸ್ಥಳೀಯರು, ಸಹಜ ಭಯದಿಂದ ವಿಚಾರವನ್ನು ಅಳದಂಗಡಿ ಗ್ರಾಮ ಪಂಚಾಯತ್ಗೆ ತಿಳಿಸಿದರೂ ಇಲ್ಲಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಸಡ್ಡೆಯಿಂದ ಗ್ರಾಮಸ್ಥರು ತೀವ್ರ ಅಸಮಾಧಾನಗೊಂಡಿದ್ದಾರೆ.ಪಂಚಾಯತ್ ಅಭಿವೃದ್ಧಿ ಅಧಿಕಾರಿಯ ನಿರ್ಲಕ್ಷ್ಯದಿಂದಾಗಿ ಇಲ್ಲಿ ಕಂಡುಬಂದ ಮಂಗನ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಲಿಲ್ಲ. ಮಂಗನ ಸಾವಿಗೆ ಖಚಿತ ಕಾರಣ ತಿಳಿದುಬಂದಿಲ್ಲ. ಜನಸಾಮಾನ್ಯರು ಭೀತಿಯಿಂದಲೇ ಮಂಗನ ಮೃತದೇಹದ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಸ್ಥಳೀಯರಾದ ಸೇಸಪ್ಪ ನಲಿಕೆ, ಪ್ರೇಮಾ ಟೀಚರ್, ಅಶೋಕ್ ಮಾಸ್ಟರ್ ಹಾಗೂ ಮಂಜುನಾಥರು ಸೇರಿ ಮಂಗನ ಶವವನ್ನು ಸಾಂಕ್ರಾಮಿಕ ರೋಗದ ಭೀತಿಯಲ್ಲೇ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಈ ಅಸಡ್ಡೆ ನಡೆ ಸಾರ್ವಜನಿಕರ ವ್ಯಾಪಕ ಟೀಕೆಗೆ ಗುರಿಯಾಗಿದೆ.






