‘ಬೆಳ್ತಂಗಡಿ: ಜಗತ್ತು ಕಂಡ ಅಪ್ರತಿಮ ದಾದಿ ಫ್ಲೊರೆನ್ಸ್ ನೈಟಾಂಗಲ್ ಅವರ ಜನ್ಮದಿನ ಮೇ 12ನೇ ದಿನಾಂಕವನ್ನು ಅಂತಾರಾಷ್ಟ್ರೀಯ ದಾದಿಯರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಉಜಿರೆಯ ಬೆನಕ ಹೆಲ್ತ್ ಸೆಂಟರ್ನಲ್ಲಿ ಪ್ರತಿ ವರ್ಷ ಇದನ್ನು ಆಚರಿಸಿಕೊಂಡು ಬರುತ್ತಿದ್ದು , ಈ ವರ್ಷ ಕೂಡ ಕೆಲವು ವಿಶೇಷತೆಗಳನ್ನು ಒಳಗೊಂಡಂತೆ ದಾದಿಯರ ದಿನ ಆಚರಿಸಲಾಯಿತು. ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬೆನಕ ಹೆಲ್ತ್ ಸೆಂಟರ್ ನ ವೈದ್ಯಕೀಯ ನಿರ್ದೇಶಕರಾದ ಡಾ| ಗೋಪಾಲಕೃಷ್ಣ ಕೆ. ಮಾತನಾಡಿ; ಒಂದು ಆಸ್ಪತ್ರೆ ಸರಿಯಾದ ರೀತಿಯಲ್ಲಿ ರೋಗಿಗಳಿಗೆ ಶುಶ್ರೂಷೆ ನೀಡಲು ದಾದಿಯರ ಕರ್ತವ್ಯ ಮಹತ್ವವಾದದ್ದು; ಅವರು ಆಸ್ಪತ್ರೆಯ ಹೃದಯವಿದ್ದಂತೆ. ನಮ್ಮ ಆಸ್ಪತ್ರೆಯು ಈ ಹಂತ ತಲುಪಲು ಇಲ್ಲಿ ಸೇವೆ ಸಲ್ಲಿಸುತ್ತಿರುವ ದಾದಿಯರ ಕರ್ತವ್ಯ ಶ್ಲಾಘನೀಯ ಎಂದು ದಾದಿಯರ ಸೇವೆಯನ್ನು ಕೃತಜ್ಞತೆಯಿಂದ ಸ್ಮರಿಸಿದರು.ಇದೇ ಸಂದರ್ಭದಲ್ಲಿ ಕರ್ನಾಟಕ ಸರಕಾರದ ಆರೋಗ್ಯ ಇಲಾಖೆಯಲ್ಲಿ 35 ವರ್ಷ ಸೇವೆಸಲ್ಲಿಸಿ ನಿವೃತ್ತರಾದ ಹಿರಿಯ ದಾದಿ ಫಿಲೋಮಿನಾರವರನ್ನು ಅವರು ನೀಡಿದ ಸೇವೆಯನ್ನು ಸ್ಮರಿಸಿ ಡಾ| ಗೋಪಾಲಕೃಷ್ಣ ಮತ್ತು ಡಾ| ಭಾರತಿ ದಂಪತಿಗಳು ಶಾಲುಹೊದಿಸಿ ಫಲಪುಷ್ಪ ಮತ್ತು ಸ್ಮರಣಿಕೆ ನೀಡಿ ಗೌರವಿಸಿದರು.ಸಿಸ್ಟೆರ್ ಅಶ್ವಿನಿ ಕೆ. ದಿನದ ಮಹತ್ವ ಕುರಿತು ಮಾಹಿತಿ ನೀಡಿದರು. ಸಿಸ್ಟರ್ ಅನಿಲ ಬೆನ್ನಿ ಆಸ್ಪತ್ರೆಯ ಎಲ್ಲ ದಾದಿಯರಿಗೆ ಪ್ರತಿಜ್ಞಾವಿಧಿ ಬೋಧಿಸಿವರು. ಆಸ್ಪತ್ರೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಎಸ್.ಜಿ. ಭಟ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಡಾ| ಭಾರತಿ ಜಿ. ಕೆ. ವಂದಿಸಿದರು. ಕೊನೆಯಲ್ಲಿ ಆಸ್ಪತ್ರೆಯ ದಾದಿಯರು ಮತ್ತು ಸಿಬ್ಬಂದಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.






