ಬೆಳ್ತಂಗಡಿ: ಮೇ 16ರಿಂದ ಬೆಳ್ತಂಗಡಿ ಭಾರತ್ ಬೀಡಿ ಕಂಪೆನಿಯ ಕಛೇರಿಯ ಎದುರು ನಡೆಯುತ್ತಿರುವ ಬೀಡಿ ಕಾರ್ಮಿಕರ ಅನಿರ್ದಿಷ್ಟ ಕಾಲ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಪ್ರತಿಭಟನಾನಿರರನ್ನು ಉದ್ಧೇಶಿಸಿ ಮಾತನಾಡಿ; ಸರಕಾರದ ಒಪ್ಪಿಗೆ ಇಲ್ಲದೆ ಬೀಡಿ ಕಂಪೆನಿ ಕಛೇರಿ ಮುಚ್ಚಲು ಹೋರಟಿರುವ ಭಾರತ್ ಬೀಡಿ ಮಾಲಕರ ನಿರ್ಧಾರವನ್ನು ಖಂಡಿಸಿದರಲ್ಲದೇ, ಸಮಸ್ಯೆಯನ್ನು ಸರಕಾರದ ಗಮನಕ್ಕೆ ಮತ್ತು ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ರವರ ಗಮನಕ್ಕೆ ತರಲಾಗುವುದು ಎಂದು ವಾಗ್ದಾನ ನೀಡಿದರು. ಪಿ.ಎಫ್. ಮತ್ತು ಪಿ.ಎಫ್. ಇಲ್ಲದ 5000 ಕಾರ್ಮಿಕರಿಗೆ ತೊಂದರೆಯಾಗುವ ಕಂಪೆನಿಯ ನಡೆಯನ್ನು ಖಂಡಿಸಿದರು. ಬೀಡಿ ಕಂಪನಿಯ ಮಾಲೀಕರು ಕಾರ್ಮಿಕರ ಬೇಡಿಕೆಗೆ ಸ್ಪಂದಿಸಿದೆ ಇದ್ದಲ್ಲಿ ಬೆಳ್ತಂಗಡಿಯಿಂದ ಮಂಗಳೂರುವರೆಗೆ ಬೃಹತ್ ಜಾಥಾವನ್ನು ಹಮ್ಮಿಕೊಳ್ಳುವ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಕಾರ್ಮಿಕ ನಾಯಕರಾದ ಬಿ.ಎಮ್. ಭಟ್, ಬಾಲಾಕೃಷ್ಣ ಶೆಟ್ಟಿ, ಈಶ್ವರಿ ಪದ್ಮುಂಜ, ಮತ್ತು ಇತರ ಕಾರ್ಮಿಕ ನಾಯಕರು ಉಪಸ್ಥಿತರಿದ್ದರು.






