ಬೆಳ್ತಂಗಡಿ: ಸುಂದರ, ಪ್ರಶಾಂತ ಪ್ರಕೃತಿಯನ್ನು ನಾವೆಲ್ಲರೂ ಪ್ರೀತಿಸಿ, ಸ್ವಚ್ಛತೆಯನ್ನು ಕಾಪಾಡಿದರೆ ಪ್ರಕೃತಿ ಸದಾ ನಮ್ಮನ್ನು ಉತ್ತಮ ಆರೋಗ್ಯಭಾಗ್ಯದೊಂದಿಗೆ ರಕ್ಷಣೆ ಮಾಡುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.ಅವರು ಮೇ 22ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟ ಮತ್ತು ಧರ್ಮಸ್ಥಳದ ವರೆಗಿನ ರಸ್ತೆಯ ಇಕ್ಕೆಲಗಳಲ್ಲಿ ಶ್ರಮದಾನದ ಮೂಲಕ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದ ಸೇವಾಕರ್ತರ ಸೇವೆಯನ್ನು ಶ್ಲಾಘಿಸಿ ಅಭಿನಂದಿಸಿ ಮಾತನಾಡುತ್ತಿದ್ದರು.ಶುದ್ಧವಾದ ಗಾಳಿ, ನೀರು ಮತ್ತು ಪ್ರಶಾಂತ ಪ್ರಾಕೃತಿಕ ಪರಿಸರದಿಂದ ನಾವು ಉತ್ತಮ ಆರೋಗ್ಯಭಾಗ್ಯವನ್ನು ಹೊಂದಬಹುದು. ಸೇವಾಮನೋಭಾವದಿಂದ ಸಂಪಾದಿಸಿದ ಪುಣ್ಯ ಶಾಶ್ವತವಾಗಿರುತ್ತದೆ. ದೇವರಿಗೆ ಪ್ರಿಯವಾದ ಸೇವೆ ಮಾಡುವುದರಿಂದ ಆತ್ಮತೃಪ್ತಿ ಮತ್ತು ಸಂತೋಷ ಸಿಗುತ್ತದೆ ಎಂದು ಹೆಗ್ಗಡೆಯವರು ಅಭಿಪ್ರಾಯಿಸಿದರು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ‘ಶೌರ್ಯ’’ ವಿಪತ್ತು ನಿರ್ವಹಣಾ ತಂಡದ ಸದಸ್ಯರು, ಸಾರ್ವಜನಿಕರು, ಭಕ್ತರು ಹಾಗೂ ಗ್ರಾಮಸ್ಥರು ಬೆಳಿಗ್ಗೆ ಗಂಟೆ 9ರಿಂದ 12ರವರೆಗೆ ಶ್ರಮದಾನದ ಮೂಲಕ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದರು.






