ಬೆಳ್ತಂಗಡಿ: ಪುಂಜಾಲಕಟ್ಟೆ-ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಬಗ್ಗೆ ನಾಗರಿಕರನ್ನು ಕತ್ತಲಲ್ಲಿರಿಸಿರುವ ಇಲಾಖೆಯ ಧೋರಣೆಯನ್ನು ಖಂಡಿಸಲು ಹಾಗೂ ಆಗುವ ರಸ್ತೆ ಕಾಮಗಾರಿಗೆ ಕಣ್ಗಾವಲಾಗಲು ಆಗಸ್ಟ್ 12ರಂದು ಬೆಳ್ತಂಗಡಿಯ ಶ್ರೀ ಗುರುನಾರಾಯಣ ಸಭಾಭವನದಲ್ಲಿ ನಡೆದ ಸಮಾನ ಮನಸ್ಕರ ಸಭೆಯಲ್ಲಿ ಪುಂಜಾಲಕಟ್ಟೆ-ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ಹಿತರಕ್ಷಣಾ ವೇದಿಕೆ ಅಸ್ತಿತ್ವಕ್ಕೆ ಬಂತು.ವೇದಿಕೆಯು ಒಂದೆಡೆ ಕಾಮಗಾರಿಯ ಗುತ್ತಿಗೆ ಹಾಗೂ ಒಡಂಬಡಿಕೆ ಮತ್ತು ಒಳ ಒಪ್ಪಂದಗಳ ಬಗ್ಗೆ ಕಾನೂನು ಹೋರಾಟ ನಡೆಸಲು ತಜ್ಞರ ಜೊತೆ ಚರ್ಚಿಸಲು ತೀರ್ಮಾನಿಸಿತು. ಇನ್ನೊಂದೆಡೆ ಹೆದ್ದಾರಿ ಕಾಮಗಾರಿಯ ಅವ್ಯವಹಾರಗಳ ಬಗ್ಗೆ ಜನಜಾಗೃತಿ ಮೂಡಿಸಿ, ಕಾಮಗಾರಿಗೆ ನ್ಯಾಯಯುತವಾಗಿ ವೇಗ ಕೊಡಲು ಒತ್ತಾಯಿಸಲು ಆಗಸ್ಟ್ 19ರ ಸೋಮವಾರ ಬೆಳ್ತಂಗಡಿ ಆಡಳಿತ ಸೌಧದ ಎದುರು ಹಕ್ಕೊತ್ತಾಯ ಸಮಾವೇಶ ನಡೆಸಲು ನಿರ್ಣಯಿಸಲಾಯಿತು.ವೇದಿಕೆಯ ಅಧ್ಯಕ್ಷರಾಗಿ ಬೆಳ್ತಂಗಡಿ ತಾಲೂಕು ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ, ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಮಿಕ ಮುಂದಾಳು ಬಿ.ಎಂ. ಭಟ್, ಉಪಾಧ್ಯಕ್ಷರಾಗಿ ಶೇಕರ್ ಕುಕ್ಕೇಡಿ, ಪ್ರವೀಣ್ ಉಜಿರೆ, ನಮಿತಾ ಚಾರ್ಮಾಡಿ ಹಾಗೂ ನಾರಾಯಣ ಗೌಡ ಸೋಮಂತಡ್ಕ ಆಯ್ಕೆಯಾದರೆ; ಕಾರ್ಯದರ್ಶಿಗಳಾಗಿ ಪದ್ಮನಾಭ ಸಾಲಿಯಾನ್ ಮಾಲಾಡಿ, ಬಿ. ಅಶ್ರಫ್ ನೆರಿಯ, ಅನಿಲ್ ಉಜಿರೆ, ಯಶೋಧರ ಚಾರ್ಮಾಡಿ ಆಯ್ಕೆಯಾದರು. ಸಮಿತಿಯ ಗೌರವ ಸಲಹೆಗಾರರಾಗಿ ನಾಗೇಶ್ ಕುಮಾರ್ ಗೌಡ ಕೊಕ್ಕಡ, ಸತೀಶ್ ಕಾಶಿಪಟ್ಣ ಹಾಗೂ ಮುನೀರ್ ಕಾಟಿಪಳ್ಳರನ್ನು ಆಯ್ಕೆ ಮಾಡಲಾಯಿತು.






