ಬೆಳ್ತಂಗಡಿ: ಗುರುವಾಯನಕೆರೆ ಸರಕಾರಿ ಪ್ರೌಢ ಶಾಲೆಯ ಚಿತ್ರಕಲಾ ಶಿಕ್ಷಕ ವಿ.ಕೆ. ವಿಟ್ಲ ಎಂದೇ ಪರಿಚಿತರಾದ ವಿಶ್ವನಾಥ ಕೆ. ವಿಟ್ಲ ಅವರಿಗೆ ಈ ಬಾರಿಯ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಒಲಿದು ಬಂದಿದೆ. ಮೂಲತಃ ವಿಟ್ಲದ ಕಲ್ಲಕಟ್ಟ ನಿವಾಸಿ, ಪ್ರಸ್ತುತ ಉಜಿರೆಯ ಪೆರ್ಲ ರಸ್ತೆ ಬಳಿಯಲ್ಲಿ ಸ್ವಂತ ಮನೆಯಲ್ಲಿ ವಾಸ್ತವ್ಯವಿರುವ ಅವರು ಗುರುವಾಯನಕೆರೆ ಸರಕಾರಿ ಪ್ರೌಢ ಶಾಲೆಯನ್ನು ವಿವಿಧ ಚಿತ್ರಕಲಾಕೃತಿಗಳ ಮೂಲಕ ವರ್ಣರಂಜಿತವಾಗಿ ಅಲಂಕರಿಸಿ, ರಾಜ್ಯ ಮಟ್ಟದಲ್ಲಿ ಖ್ಯಾತಿ ಪಡೆದಿದ್ದಾರೆ. ಗಣೇಶ, ಶಾರದೆ ಮತ್ತಿತರ ಚಿತ್ರ ಕಲಾಕೃತಿಗಳ ಮೂಲಕ ಸಾರ್ವಜನಿಕವಾಗಿ ಗುರುತಿಸಲ್ಪಟ್ಟಿರುವ ಅವರು ಸಾಂಸ್ಕೃತಿಕ ಕಾರ್ಯಕ್ರಮ, ಸಾಹಿತ್ಯ ಸಮ್ಮೇಳನ ಮತ್ತಿತರ ಸಭಾ ಕಾರ್ಯಕ್ರಮಗಳ ವೇದಿಕೆಯ ನಿರ್ಮಾಣದಲ್ಲಿ ಮಹತ್ವದ ಪಾತ್ರ ನಿರ್ವಹಿಸಿ ಜನಪ್ರಿಯರು. ಚಂದಳಿಕೆ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ವಿಠಲ ಪದವಿಪೂರ್ವ ಕಾಲೇಜಿನಲ್ಲಿ ಮಾಧ್ಯಮಿಕ ಶಿಕ್ಷಣ ಪೂರೈಸಿ, ಬಿಳಿನೆಲೆ ಪ್ರೌಢ ಶಾಲೆಯಲ್ಲಿ ಶಿಕ್ಷಕ ವೃತ್ತಿ ಆರಂಭಿಸಿ ಬಳಿಕ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ಸಹಶಿಕ್ಷಕರಾಗಿ ಹಾಗೂ ಇದೀಗ ಗುರುವಾಯನಕೆರೆ ಸರಕಾರಿ ಪ್ರೌಢ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2016ರಲ್ಲಿ ಶಾಲೆಗೆ ಜಿಲ್ಲಾ ಉತ್ತಮ ಶಾಲೆ ಪ್ರಶಸ್ತಿ ಜತೆಗೆ ರೂಪಾಯಿ 15 ಲಕ್ಷದ ವಿಶೇಷ ಗೌರವ ಪಡೆಯಲು ಅವರೂ ಕಾರಣರಾಗಿದ್ದಾರೆ. 2017ರಲ್ಲಿ ಅವರು ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದಿದ್ದಾರೆ.






