ಬೆಳ್ತಂಗಡಿ: ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್(ರಿ) ಕೇಂದ್ರ ಸಮಿತಿ ಹುಬ್ಬಳ್ಳಿ ಅವರ ಆಶ್ರಯದಲ್ಲಿ ಸೆಪ್ಟೆಂಬರ್ 5ರಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸನ್ನಿಧಿ ಸಭಾಭವನದಲ್ಲಿ ನಡೆದ ರಾಜ್ಯಮಟ್ಟದ ಶಿಕ್ಷಕ ಸಾಹಿತಿಗಳ ಏಳನೆಯ ಸಮ್ಮೇಳನದಲ್ಲಿ ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಅತ್ಯಮೂಲ್ಯ ಸೇವೆಯೊಂದಿಗೆ ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳ ಶೈಕ್ಷಣಿಕ ಕಾಳಜಿ, ಜನಪರ ಚಿಂತನೆ, ಸ್ನೇಹಪರ ಮನೋಭಾವ ಅರಳಿಸಿದ ಬೆಳ್ತಂಗಡಿಯ ಶಿಕ್ಷಕರ ಸಹಕಾರಿ ಬ್ಯಾಂಕಿನ ನಿವೃತ್ತ ಪ್ರಬಂಧಕ ರವೀಂದ್ರ ಶೆಟ್ಟಿ ಬಳಂಜ ಸಹಿತ ಐದು ಮಂದಿ ಸಾಧಕರಿಗೆ ಇತರ ‘ಚುಟುಕು ಚಿನ್ಮಯಿ-2024’ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ಮಂಗಳೂರಿನ ಡಾ. ಸುರೇಶ ನೆಗಳಗುಳಿ, ಮೂಡಬಿದ್ರಿಯ ಮುನಿರಾಜ ರೆಂಜಾಳ, ಜಿಲಾಧ್ಯಕ್ಷ ಜಯಾನಂದ ಪೆರಾಜೆ, ಶಾಂತ ಪುತ್ತೂರು ಅವರಿಗೆ ‘ಚುಟುಕು ಚಿನ್ಮಯಿ’ ಗೌರವ ಪುರಸ್ಕಾರ ನೀಡಲಾಯಿತು. ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಹರಿನಾರಾಯಣ ಅಸ್ರಣ್ಣ, ಕನ್ನಡ ಸಾಹಿತ್ಯ ಪತಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಡಾ. ಹರಿಕೃಷ್ಣ ಪುನರೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಹಿರಿಯ ಶಿಕ್ಷಕ ಸಾಹಿತಿ ಶ್ರೀಕಾಂತ್ ಕೆ.ವಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಚುಟುಕು ಸಾಹಿತ್ಯ ಪರಿಷತ್ ರಾಜ್ಯ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ ಉಪಸ್ಥಿತರಿದ್ದರು.






