ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಪ್ರವಚನ ಮಂಟಪದಲ್ಲಿ ಎರಡು ತಿಂಗಳ ಕಾಲ ನಡೆದ ಪುರಾಣ ವಾಚನ-ಪ್ರವಚನ ಕಾರ್ಯಕ್ರಮ ಸೆಪ್ಟೆಂಬರ್ 16ರಂದು ಮುಕ್ತಾಯಗೊಂಡಿತು.ಎರಡು ತಿಂಗಳು ಪ್ರತಿದಿನ ಸಂಜೆ ಗಂಟೆ 6 ರಿಂದ ರಾತ್ರಿ ಗಂಟೆ 8ರವರೆಗೆ ನಡೆದ ಕಾರ್ಯಕ್ರಮದಲ್ಲಿ ಊರಿನ ನಾಗರಿಕರು ಹಾಗೂ ಕ್ಷೇತ್ರಕ್ಕೆ ಬಂದ ಭಕ್ತಾದಿಗಳು ಕೂಡಾ ಕಾರ್ಯಕ್ರಮದ ಸೊಗಡನ್ನು ಆಸ್ವಾದಿಸಿ ಪುಣ್ಯಸಂಚಯ ಮಾಡಿಕೊಂಡರು.ಎರಡು ತಿಂಗಳು ನಡೆದ ಪುರಾಣ ವಾಚನದಲ್ಲಿ 14 ಮಂದಿ ಹಾಗೂ ಪ್ರವಚನದಲ್ಲಿ 20 ಮಂದಿ ವಿದ್ವಾಂಸರು ಭಾಗವಹಿಸಿದ್ದರು.ಸೆಪ್ಟೆಂಬರ್ 16ರಂದು ಸುಪ್ರೀತಾ ಕೋರ್ನಾಯ ವಾಚನ ಮಾಡಿದರೆ ಅಶೋಕ ಭಟ್ ಪ್ರವಚನ ನೀಡಿದರು.ಸಮಾರೋಪ ಸಮಾರಂಭದಲ್ಲಿ ಹೆಗ್ಗಡೆಯವರು ಪುರಾಣ ವಾಚನ-ಪ್ರವಚನದಲ್ಲಿ ಭಾಗವಹಿಸಿದ ಎಲ್ಲರನ್ನೂ ಗೌರವಿಸಿ ಅಭಿನಂದಿಸಿದರು.






