ಬೆಳ್ತಂಗಡಿ: ಜನವರಿ 2ರಂದು ಮಂಗಳೂರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ನ ನೇತ್ರಾವತಿ ಸಭಾಂಗಣದಲ್ಲಿ ರಾಜ್ಯದ ಐದನೇ ಹಣಕಾಸು ಆಯೋಗದ ಅಧ್ಯಕ್ಷ ಡಾ. ಸಿ. ನಾರಾಯಣಸ್ವಾಮಿಯವರ ಅಧ್ಯಕ್ಷತೆಯಲ್ಲಿ ಪಂಚಾಯತ್ರಾಜ್ ಸಂಸ್ಥೆಗಳ ಸಾಂಸ್ಥಿಕ ರಚನೆ, ಕಾರ್ಯಚಟುವಟಿಕೆಗಳು, ಆರ್ಥಿಕ ಸ್ಥಿತಿಗತಿ, ಸಂಪನ್ಮೂಲಗಳ ಕ್ರೂಢೀಕರಣ ಮತ್ತು ಹಂಚಿಕೆ, ಮೂಲಸೌಕರ್ಯಗಳ ಮತ್ತು ಸೇವೆಗಳ ಒದಗಿಸುವಿಕೆಯಲ್ಲಿ ತಾಂತ್ರಿಕ ಸಾಮರ್ಥ್ಯ ಮತ್ತಿತರ ವಿಚಾರಗಳನ್ನು ಅಧ್ಯಯನ ಮಾಡಲು ಅವಲೋಕನಾ ಸಭೆ ನಡೆಯಿತು.ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ವಿವಿಧ ಇಲಾಖೆಗಳ ಅಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು ಹಾಗೂ ಅಧಿಕಾರಿಗಳು, ದಕ್ಷಿಣ ಕನ್ನಡ ಜಿಲ್ಲೆಯ ಆಯ್ದ ಗ್ರಾಮ ಪಂಚಾಯತ್ಗಳ ಅಧ್ಯಕ್ಷರು ಮತ್ತು ಅಭಿವೃದ್ಧಿ ಅಧಿಕಾರಿಗಳು ಆಹ್ವಾನದ ಮೇರೆಗೆ ಭಾಗವಹಿಸಿದ್ದರು.ಬೆಳ್ತಂಗಡಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್, ತಾಲೂಕು ಪಂಚಾಯತ್ನ ಲೆಕ್ಕ ಸಹಾಯಕ ಗಣೇಶ್ ಪೂಜಾರಿ, ಕಾಶಿಪಟ್ಣ ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಕಾಶಿಪಟ್ಣ ಹಾಗೂ ಕಾಶಿಪಟ್ಣ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆಶಾಲತಾ ಬೆಳ್ತಂಗಡಿ ತಾಲೂಕನ್ನು ಪ್ರತಿನಿಧಿಸಿದ್ದರು.ಸಭೆಯಲ್ಲಿ ಮಾತನಾಡಿ ಮುಖ್ಯವಾಗಿ ಗ್ರಾಮ ಪಂಚಾಯತ್ ಆಡಳಿತದ ಮೇಲೆ ಬೆಳಕು ಚೆಲ್ಲಿದ ಕಾಶಿಪಟ್ಣ ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಕಾಶಿಪಟ್ಣ; ಗ್ರಾಮ ಪಂಚಾಯತ್ನ ಕುಡಿಯುವ ನೀರು ಹಾಗೂ ಬೀದಿದೀಪಗಳಿಗೆ ಕನಿಷ್ಠ ವಿದ್ಯುತ್ ದರವನ್ನು ನಿಗದಿ ಪಡಿಸಬೇಕೆಂದು ಸಲಹೆ ನೀಡಿದರು. ಶಾಸನಬದ್ಧ ಅನುದಾನವು ಸಿಬ್ಬಂದಿ ವೇತನ ಹಾಗೂ ವಿದ್ಯುತ್ ಬಿಲ್ಗೆ ಸಮವಾಗುವ ಕಾರಣ ಅಭಿವೃದ್ಧಿ ಅನುದಾನವನ್ನು ಹೆಚ್ಚಿಸಬೇಕಾಗಿ ಕೋರಿದರು. ನರೇಗಾ ಯೋಜನೆಯಡಿ ತಡೆಗೋಡೆ ಕಾಮಗಾರಿಗಳನ್ನು ಬೇಡಿಕೆ ಆಧರಿಸಿ ಅನುಷ್ಠಾನ ಮಾಡಲು ಅವಕಾಶ ನೀಡಬೇಕೆಂದು ಕೋರಿದರು. ವಿಪತ್ತು ನಿರ್ವಹಣೆ ಅನುದಾನವನ್ನು ನೇರವಾಗಿ ಗ್ರಾಮ ಪಂಚಾಯತ್ಗೇ ಬಿಡುಗಡೆ ಮಾಡುವಂತೆ ಸಲಹೆ ನೀಡಿದರು. ಸತೀಶ್ ಕಾಶಿಪಟ್ಣರು ನೀಡಿದ ಈ ರಚನಾತ್ಮಕ ಸಲಹೆಗಳನ್ನು ಆಯೋಗದ ಸದಸ್ಯರ ಸಭೆಯಲ್ಲಿ ಮಂಡಿಸಿ, ಸಕಾರಾತ್ಮಕವಾಗಿ ಪರಿಶೀಲಿಸುವ ಭರವಸೆಯನ್ನು ಐದನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷ ಡಾ. ಸಿ. ನಾರಾಯಣ ಸ್ವಾಮಿ ನೀಡಿದರು.